
Entertainment
oi-Manohara M
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ, ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ದೃಶ್ಯಗಳು ಲೀಕ್ ಆಗಿರುವ ಘಟನೆಗೆ ಸಂಬಂಧಿಸಿದಂತೆ ಈಗ ತೆಲುಗು ಚಿತ್ರರಂಗದ ದಿಗ್ಗಜ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪೈರಸಿ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ.
ಚಿತ್ರರಂಗದ ನಂಬಿಕೆಗೆ ಹೊಡೆತ
ತಮ್ಮ ಪೋಸ್ಟ್ನಲ್ಲಿ ಚಿರಂಜೀವಿ ಅವರು, “ಜನ ನಾಯಗನ್ ಚಿತ್ರದ ದೃಶ್ಯಗಳು ದುರದೃಷ್ಟವಶಾತ್ ಸೋರಿಕೆಯಾಗಿರುವುದು ನನಗೆ ತೀವ್ರ ಕಳವಳವನ್ನುಂಟು ಮಾಡಿದೆ. ಸಿನಿಮಾ ಎಂಬುದು ಕೇವಲ ಬಣ್ಣದ ಲೋಕವಲ್ಲ, ಅದು ನೂರಾರು ಜನರ ನಂಬಿಕೆ, ಪರಿಶ್ರಮ ಮತ್ತು ಸಾಮೂಹಿಕ ಕನಸುಗಳ ಮೇಲೆ ನಿರ್ಮಾಣವಾಗಿರುವ ಶಕ್ತಿ. ಇಂತಹ ಘಟನೆಗಳು ಕೇವಲ ಒಂದು ಚಿತ್ರಕ್ಕಷ್ಟೇ ಅಲ್ಲ, ಇಡೀ ಚಿತ್ರೋದ್ಯಮಕ್ಕೇ ಹೊಡೆತ ನೀಡುತ್ತವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೈರಸಿ ಮೊಳಕೆಯಲ್ಲೇ ಚಿವುಟಿ ಹಾಕೋಣ
ಚಿತ್ರರಂಗದಲ್ಲಿ ಇಂತಹ ಅಕ್ರಮಗಳು ಪದೇ ಪದೇ ನಡೆಯುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, “ಸಿನಿಮಾ ಕಲಾವಿದರ ಮತ್ತು ತಂತ್ರಜ್ಞರ ಸೃಜನಶೀಲ ಕೆಲಸಗಳನ್ನು ರಕ್ಷಿಸುವುದು ಎಷ್ಟು ಮುಖ್ಯ ಎಂಬುದನ್ನು ಇಂತಹ ಘಟನೆಗಳು ನಮಗೆ ನೆನಪಿಸುತ್ತಿವೆ. ನಾವು ಮಾಡಿರುವ ಕಠಿಣ ಶ್ರಮಕ್ಕೆ ಬೆಲೆ ಸಿಗಬೇಕಾದರೆ ಪೈರಸಿಯನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು” ಎಂದಿದ್ದಾರೆ.
ಕೆವಿಎನ್ ಸಂಸ್ಥೆಗೆ ಮೆಗಾ ಬೆಂಬಲ
ಈ ಸಂಕಷ್ಟದ ಸಮಯದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಪರವಾಗಿ ತಾವು ನಿಲ್ಲುವುದಾಗಿ ಘೋಷಿಸಿದ ಚಿರಂಜೀವಿ, “ಚಿತ್ರದ ದೃಶ್ಯಗಳು ಸೋರಿಕೆಯಾಗಿ ಉಂಟಾಗಿರುವ ಹಾನಿಯನ್ನು ತಡೆಯಲು ಮತ್ತು ಈ ಕೃತ್ಯದ ಹಿಂದಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲು ನಾವು ಕೆವಿಎನ್ ಪ್ರೊಡಕ್ಷನ್ಸ್ ಜೊತೆಗಿದ್ದೇವೆ. ಸಿನಿಮಾವನ್ನು ಪ್ರೀತಿಸುವ ಪ್ರತಿಯೊಬ್ಬರೂ ಈ ಪ್ರಯತ್ನಕ್ಕೆ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.
ಸಿನಿಮಾವನ್ನು ಗೌರವಿಸಿ ಮತ್ತು ಅದನ್ನು ರಕ್ಷಿಸಿ ಎಂದು ಪ್ರೇಕ್ಷಕರಲ್ಲಿ ವಿನಂತಿಸಿರುವ ಅವರು, “Kill Piracy. Save Cinema” (ಪೈರಸಿಯನ್ನು ಕೊಲ್ಲಿ, ಸಿನಿಮಾವನ್ನು ಉಳಿಸಿ) ಎಂಬ ಘೋಷಣೆಯೊಂದಿಗೆ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ. ಚಿರಂಜೀವಿ ಅವರ ಈ ಬೆಂಬಲದಿಂದಾಗಿ ‘ಜನ ನಾಯಗನ್’ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದ್ದು, ಪೈರಸಿ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ವೇಗ ಸಿಕ್ಕಿದೆ.
The unfortunate leak of #Jananayagan is something that deeply concerns me.
Cinema is built on trust, effort, and the collective dreams of many.Such incidents affect all of us in the industry and remind us how crucial it is to protect our creative work.
We stand one with KVN…
— Chiranjeevi Konidela (@KChiruTweets) April 10, 2026
ನಟ ವಿಜಯ್ ಅವರು ತಮ್ಮ ರಾಜಕೀಯ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸುತ್ತಿರುವ ಕೊನೆಯ ಸಿನಿಮಾ ಇದಾಗಿದೆ. ಹೀಗಾಗಿ, ಈ ಚಿತ್ರದ ಮೇಲೆ ದೇಶಾದ್ಯಂತ ಭಾರಿ ಕುತೂಹಲ ಮತ್ತು ನಿರೀಕ್ಷೆಗಳಿವೆ. ಈ ಸಿನಿಮಾ ಈ ವರ್ಷದ ಜನವರಿ 9ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದಲ್ಲಿರುವ ಕೆಲವು ರಾಜಕೀಯ ದೃಶ್ಯಗಳು ಮತ್ತು ಹಿಂಸಾಚಾರದ ಕಾರಣ ನೀಡಿ ಸೆನ್ಸಾರ್ ಮಂಡಳಿ (CBFC) ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿ, ಸದ್ಯ ತಿದ್ದುಪಡಿ ಸಮಿತಿಯ ಮುಂದಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಸಿನಿಮಾ ಬಿಡುಗಡೆ ವಿಳಂಬವಾಗುತ್ತಿರುವಾಗಲೇ ಚಿತ್ರದ ಸುಮಾರು 5 ನಿಮಿಷಗಳ ಪ್ರಮುಖ ದೃಶ್ಯಗಳು (ಟೈಟಲ್ ಕಾರ್ಡ್ ಮತ್ತು ವಿಜಯ್ ಅವರ ಇಂಟ್ರೊ ಸೀನ್) ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿವೆ. ಶುಕ್ರವಾರ ಬೆಳಿಗ್ಗೆಯ ವೇಳೆಗೆ ಪೂರ್ಣ ಸಿನಿಮಾದ ಎಚ್ಡಿ (HD) ಪ್ರತಿಗಳು ಪೈರಸಿ ಸೈಟ್ಗಳಲ್ಲಿ ಲಭ್ಯವಾಗಿವೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ವಿಜಯ್ ಅವರ ರಾಜಕೀಯ ಪಕ್ಷದ ಬೆಂಬಲಿಗರು ಇದು ಕೇವಲ ಪೈರಸಿ ಅಲ್ಲ, ಇದೊಂದು ರಾಜಕೀಯ ಪಿತೂರಿ ಎಂದು ಆರೋಪಿಸುತ್ತಿದ್ದಾರೆ. ವಿಜಯ್ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ಮತ್ತು ಸಿನಿಮಾವನ್ನು ಆರ್ಥಿಕವಾಗಿ ಕುಗ್ಗಿಸಲು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂಬ ವಾದ ಕೇಳಿಬರುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/chiranjeevi-supports-kvn-productions-after-jana-nayagan-movie-leak-strong-anti-piracy-call-450041.html. xn--babytilbehr-pgb.com does not claim ownership of this content. All rights remain with the original publisher.
