ನಟರಿಗೆ ಕಾಂಡೋಮ್‌ ಪೂರೈಕೆ ಹೇಳಿಕೆ; ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್‌ಐಆರ್ ದಾಖಲು | FIR Filed Against Chakravarthy Chandrachood In Bengaluru Over Condom Supply to Actors Remark

Entertainment

oi-Manohara M

ಬೆಂಗಳೂರು: ನಟರಿಗೆ ಕೆಲ ನಿರ್ಮಾಪಕರು ಕಾಂಡೋಮ್ ಪೂರೈಕೆ ಮಾಡುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆ ನೀಡಿದ್ದ ನಟ ಕಿಚ್ಚ ಸುದೀಪ್ ಅವರ ಮ್ಯಾನೇಜರ್, ಹಿರಿಯ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಇದೀಗ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ. ನಿರ್ಮಾಪಕರ ವಿರುದ್ಧ ಆಕ್ಷೇಪಾರ್ಹ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಡಿ, ನಿರ್ಮಾಪಕ ಕೆ.ಮಂಜು ನೀಡಿದ ದೂರಿನ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೋರ್ಟ್‌ ಅನುಮತಿ ಪಡೆದು ಎಫ್‌ಐಆರ್

ಚಕ್ರವರ್ತಿ ಚಂದ್ರಚೂಡ್ ಅವರು ನೀಡಿದ್ದ ಹೇಳಿಕೆಯಲ್ಲಿ, ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಪೂರೈಕೆ ಮಾಡುತ್ತಾರೆ ಎಂಬ ಮಾತು ಸ್ಯಾಂಡಲ್‌ವುಡ್‌ನ ನಿರ್ಮಾಪಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಈ ಹೇಳಿಕೆ ಕನ್ನಡ ಚಿತ್ರರಂಗದ ಗೌರವಕ್ಕೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸರು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಮಾನಹಾನಿ, ಬೆದರಿಕೆ, ಶಾಂತಿಭಂಗ ಉಂಟುಮಾಡುವ ಹೇಳಿಕೆ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Chakravarthy Chandrachood

ಪ್ರಾರಂಭದಲ್ಲಿ ಈ ಪ್ರಕರಣವನ್ನು ಎನ್‌ಸಿಆರ್‌ ಆಗಿ ದಾಖಲಿಸಲಾಗಿತ್ತು. ನಂತರ ಕೋರ್ಟ್‌ನ ಅನುಮತಿ ಪಡೆದು ಎಫ್‌ಐಆರ್‌ ಮಾಡಿರುವುದಾಗಿ ತಿಳಿದುಬಂದಿದೆ. ಚಂದ್ರಚೂಡ್ ಹೇಳಿಕೆ ಖಂಡಿಸಿ ಹಲವು ನಿರ್ಮಾಪಕರು ಮತ್ತು ಚಿತ್ರರಂಗದ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ನಿರ್ಮಾಪಕ ಕೆ.ಮಂಜು ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಕನ್ನಡ ಚಿತ್ರರಂಗಕ್ಕೆ ಸಂಬಂಧವೇ ಇಲ್ಲ ಎಂದ ಚಂದ್ರಚೂಡ್

ಈ ವಿವಾದ ತೀವ್ರವಾಗುತ್ತಿದ್ದಂತೆ, ಚಕ್ರವರ್ತಿ ಚಂದ್ರಚೂಡ್ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ನಾನು ಮಾತನಾಡಿದ್ದು ಕನ್ನಡ ಚಿತ್ರರಂಗದ ಬಗ್ಗೆ ಅಲ್ಲವೇ ಅಲ್ಲ. ನನ್ನ ಮಾತುಗಳು ತಮಿಳು ಚಿತ್ರರಂಗದ ವಾತಾವರಣ, ಅಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ನಾಯಕ ಕೇಂದ್ರೀತ ವ್ಯವಸ್ಥೆಯ ಕುರಿತು ಮಾತ್ರವಾಗಿತ್ತು ಎಂದು ಅವರು ಹೇಳಿದ್ದಾರೆ. ಅಲ್ಲದೆ ನಾನು “ಕಮೋಡ್ ಟು ಕಾಂಡೋಮ್” ಎಂದಿದ್ದು ಕೇವಲ ಉಪಮೆ ಅಷ್ಟೇ. ಅದನ್ನು ಯಾವುದೇ ನಿರ್ದಿಷ್ಟ ನಿರ್ಮಾಪಕರಿಗೆ ಅಥವಾ ಕನ್ನಡ ಚಿತ್ರರಂಗಕ್ಕೆ ಅನ್ವಯಿಸುವ ಉದ್ದೇಶ ನನ್ನದಲ್ಲ ಎಂದು ತಿಳಿಸಿದ್ದಾರೆ.

ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿದ ಅನುಭವ ಇರುವ ಕಾರಣ, ಅಲ್ಲಿನ ಹೀರೋ ಕೇಂದ್ರಿತ ವ್ಯವಸ್ಥೆ ಮತ್ತು ಅದರ ಪರಿಣಾಮಗಳ ಕುರಿತು ಮಾತನಾಡಿದ್ದೇನೆ. ಆದರೆ ವಿಡಿಯೋದ ಒಂದು ಭಾಗವನ್ನು ಮಾತ್ರ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹೇಳಿಕೆಯಿಂದ ಯಾವುದೇ ನಿರ್ಮಾಪಕರು ಅಥವಾ ಕನ್ನಡ ಚಿತ್ರರಂಗದವರು ನೋವು ಪಡುವ ಅವಶ್ಯಕತೆ ಇಲ್ಲ. ನನ್ನ ಮಾತಿನ ಹಿನ್ನೆಲೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ ತಪ್ಪು ಅರ್ಥೈಸಲಾಗಿದೆ ಎಂದು ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ. ಸ್ಪಷ್ಟನೆ ಕೊಟ್ಟ ಮೇಲೂ ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ದೂರು ದಾಖಲಾಗಿದೆ. ನಿರ್ಮಾಪಕರ ವಿರುದ್ಧ ನೀಡಿರುವ ಈ ಹೇಳಿಕೆಯಿಂದ ಕೆ.ಮಂಜು ಕೆರಳಿ ಕೆಂಡವಾಗಿದ್ದು, ಚಕ್ರವರ್ತಿ ಅವರಿಗೆ ಕಾನೂನಿನ ಸವಾಲ್‌ ಹಾಕಿದ್ದಾರೆ.

ಈಗಾಗಲೇ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಇದೇ ವೇಳೆ, ಈ ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಮತ್ತಷ್ಟು ರಾಜಕೀಯ ಹಾಗೂ ವೃತ್ತಿಪರ ಚರ್ಚೆಗಳಿಗೆ ಕಾರಣವಾಗುವ ಲಕ್ಷಣಗಳು ಕಾಣಿಸುತ್ತಿವೆ. ಒಂದು ಹೇಳಿಕೆಯಿಂದ ಆರಂಭವಾದ ಈ ವಿವಾದ ಇದೀಗ ಕಾನೂನು ಹಂತಕ್ಕೆ ತಲುಪಿದ್ದು, ಕನ್ನಡ ಚಿತ್ರರಂಗದಲ್ಲಿನ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಹೇಳಿಕೆಗಳ ಪರಿಣಾಮಗಳ ಕುರಿತು ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/fir-filed-against-chakravarthy-chandrachood-in-bengaluru-over-condom-supply-to-actors-remark-443053.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo