ಮೇಲುಕೋಟೆ ವೈರಮುಡಿ ಉತ್ಸವ ಮಾರ್ಚ್ 23ರಿಂದ ಆರಂಭ: ಚೆಲುವ ನಾರಾಯಣನ ಕೈಂಕರ್ಯಕ್ಕೆ ಸಕಲ ಸಿದ್ಧತೆ | Vairamudi Brahmotsava 2026 Begins March 23 at Melukote Cheluvanarayana Swamy Temple Ceremony details

Karnataka

oi-Manohara M

ಮಂಡ್ಯ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕೇಂದ್ರವಾದ ಮೇಲುಕೋಟೆಯಲ್ಲಿ ಈ ವರ್ಷದ ವಿಶ್ವಪ್ರಸಿದ್ಧ ಶ್ರೀ ಚೆಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಸಾಂಪ್ರದಾಯಿಕ ಕೈಂಕರ್ಯಗಳಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವವು ಈ ವರ್ಷ ಮಾರ್ಚ್ 23 ರಿಂದ ಪ್ರಾರಂಭವಾಗಿ ಏಪ್ರಿಲ್ 4 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ಉತ್ಸವದ ಅತ್ಯಂತ ಪ್ರಮುಖ ಹಾಗೂ ಪವಿತ್ರ ಘಟ್ಟವಾದ ‘ವೈರಮುಡಿ ಕಿರೀಟ ಧಾರಣೆ’ ಮಹೋತ್ಸವವು ಮಾರ್ಚ್ 28 ರಂದು ನಡೆಯಲಿದೆ.

ಅಂದು ರಾತ್ರಿ ರತ್ನಾಭರಣ ಖಚಿತವಾದ ಬಂಗಾರದ ಪವಿತ್ರ ವೈರಮುಡಿಯನ್ನು ಭಗವಂತನಿಗೆ ಧರಿಸುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇತ್ತೀಚೆಗೆ ಮೇಲುಕೋಟೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಲಕ್ಷಾಂತರ ಜನರು ಒಂದೆಡೆ ಸೇರುವುದರಿಂದ ಕುಡಿಯುವ ನೀರು, ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅಲ್ಲದೆ, ಬ್ರಹ್ಮೋತ್ಸವದ ಅವಧಿಯಲ್ಲಿ ಭಕ್ತಾದಿಗಳಿಗೆ ಸುಗಮ ದರ್ಶನದ ವ್ಯವಸ್ಥೆ ಮಾಡುವಂತೆ ದೇವಸ್ಥಾನದ ಅರ್ಚಕರೊಂದಿಗೆ ಸೂಚಿಸಲಾಗಿದೆ.

Vairamudi Brahmotsava 2026

ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ

ಉತ್ಸವದ ಸಮಯದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮಾತನಾಡಿ, ಬ್ಯಾರಿಕೇಡ್‌ಗಳ ಅಳವಡಿಕೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕುಮಾರ ಅವರು ಮಾಹಿತಿ ನೀಡಿ, ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಮತ್ತು ಸಂಚಾರ ದಟ್ಟಣೆ ನಿವಾರಿಸಲು ಸೂಕ್ತ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೈರಮುಡಿ ಉತ್ಸವವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲದೆ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಮಂಡ್ಯ ಜಿಲ್ಲಾಡಳಿತವು ಭಕ್ತರಿಗೆ ಸುರಕ್ಷಿತ ಮತ್ತು ಸ್ಮರಣೀಯ ಅನುಭವ ನೀಡಲು ಪ್ರವಾಸೋದ್ಯಮ ಮತ್ತು ಧಾರ್ಮಿಕ ದತ್ತಿ ಇಲಾಖೆಗಳ ಸಹಯೋಗದೊಂದಿಗೆ ಸಜ್ಜಾಗಿದೆ. ಈ ವಿಶ್ವಪ್ರಸಿದ್ಧ ಉತ್ಸವಕ್ಕಾಗಿ ಮೇಲುಕೋಟೆಯ ರಸ್ತೆಗಳು ಮತ್ತು ದೇವಸ್ಥಾನದ ಆವರಣಕ್ಕೆ ವಿಶೇಷ ವಿದ್ಯುತ್ ಅಲಂಕಾರ ಮಾಡುವ ಮೂಲಕ ಇಡೀ ಕ್ಷೇತ್ರವನ್ನು ಸಜ್ಜುಗೊಳಿಸಲಾಗುತ್ತಿದೆ.

ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ – 2026: ಸಂಪೂರ್ಣ ವೇಳಾಪಟ್ಟಿ

ಮಾರ್ಚ್ 23: ಬ್ರಹ್ಮೋತ್ಸವದ ಆರಂಭ, ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು.

ಮಾರ್ಚ್ 24: ಸಂಜೆ 5 ರಿಂದ 10 ರವರೆಗೆ ಶ್ರೀಸ್ವಾಮಿಯ ಕಲ್ಯಾಣೋತ್ಸವ.

ಮಾರ್ಚ್ 25: ಬೆಳಗ್ಗೆ ಗರುಡ ಧ್ವಜಾರೋಹಣ, ಮಂಟಪ ವಾಹನೋತ್ಸವ ರಾತ್ರಿ ಹಂಸವಾಹನೋತ್ಸವ.

ಮಾರ್ಚ್ 26: ರಾಮಾನುಜಾಚಾರ್ಯರಿಗೆ ವಿಶೇಷ ಅಭಿಷೇಕ; ರಾತ್ರಿ ಶೇಷವಾಹನೋತ್ಸವ.

ಮಾರ್ಚ್ 27: ಶ್ರೀರಾಮನವಮಿ ವಿಶೇಷ ಪೂಜೆ, ನಾಗವಲ್ಲಿ ಮಹೋತ್ಸವ; ರಾತ್ರಿ ಚಂದ್ರಮಂಡಲ ವಾಹನೋತ್ಸವ.

ಮಾರ್ಚ್ 28: ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ (ವೈರಮುಡಿ ಕಿರೀಟ ಧಾರಣೆ ಮತ್ತು ಉತ್ಸವ).

ಮಾರ್ಚ್ 29: ರಾತ್ರಿ ಗರುಡವಾಹನೋತ್ಸವ

ಮಾರ್ಚ್ 30: ಗಜೇಂದ್ರಮೋಕ್ಷ ಉತ್ಸವ; ರಾತ್ರಿ ಗಜ ಮತ್ತು ಅಶ್ವವಾಹನೋತ್ಸವ.

ಮಾರ್ಚ್ 31: ಬೆಳಗ್ಗೆ 7.30ಕ್ಕೆ ಮಹಾರಥೋತ್ಸವ (ತೇರು); ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವ.

ಏಪ್ರಿಲ್ 1: ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಮತ್ತು ಕುದುರೆ ವಾಹನೋತ್ಸವ.

ಏಪ್ರಿಲ್ 2: ಬೆಳಗ್ಗೆ ತೀರ್ಥಸ್ನಾನ (ಅವಭೃತ ಸ್ನಾನ), ಸಂಜೆ ಪಟ್ಟಾಭಿಷೇಕ ಮತ್ತು ಸಮರಭೂಪಾಲ ವಾಹನ.

ಏಪ್ರಿಲ್ 3: ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಮತ್ತು ಹನುಮಂತ ವಾಹನೋತ್ಸವ.

ಏಪ್ರಿಲ್ 4: ಬೆಟ್ಟದ ಶ್ರೀ ಯೋಗನರಸಿಂಹಸ್ವಾಮಿ ಮತ್ತು ಮಹಾಲಕ್ಷ್ಮೀ ಅಮ್ಮನವರಿಗೆ ಮಹಾಭಿಷೇಕ.

Vairamudi Brahmotsava 2026

ವೈರಮುಡಿ ಬ್ರಹ್ಮೋತ್ಸವದ ಇತಿಹಾಸ

ಪುರಾಣಗಳ ಪ್ರಕಾರ ‘ವೈರಮುಡಿ’ ಎಂಬುದು ವಜ್ರಖಚಿತವಾದ ಅತ್ಯಮೂಲ್ಯ ದೈವಿಕ ಕಿರೀಟ. ಇದು ಮೂಲತಃ ವೈಕುಂಠನಾಥನಾದ ಶ್ರೀಮನ್ನಾರಾಯಣನಿಗೆ ಸೇರಿದ್ದು. ಒಮ್ಮೆ ವಿರೋಚನ ಎಂಬ ರಾಕ್ಷಸನು ನಾರಾಯಣನು ನಿದ್ರಿಸುತ್ತಿದ್ದಾಗ ಈ ಕಿರೀಟವನ್ನು ಕದ್ದು ಪಾತಾಳ ಲೋಕಕ್ಕೆ ಒಯ್ದು ಅಡಗಿಸಿಡುತ್ತಾನೆ. ಇದನ್ನು ಅರಿತ ಮಹಾವಿಷ್ಣುವಿನ ವಾಹನವಾದ ಗರುಡನು, ಪಾತಾಳಕ್ಕೆ ತೆರಳಿ ವಿರೋಚನನೊಂದಿಗೆ ಘೋರ ಯುದ್ಧ ಮಾಡಿ ಕಿರೀಟವನ್ನು ಮರಳಿ ತರುತ್ತಾನೆ. ಭೂಲೋಕದ ಮಾರ್ಗವಾಗಿ ಮರಳಿ ಬರುವಾಗ, ಗರುಡನು ಶ್ರೀಕೃಷ್ಣನ ಅವತಾರಕ್ಕೆ ಈ ಕಿರೀಟವನ್ನು ಅರ್ಪಿಸಿದನೆಂಬ ಕಥೆಯಿದೆ. ಕಾಲಾನಂತರದಲ್ಲಿ ಮೈಸೂರು ಪ್ರಾಂತ್ಯದ ಮೇಲುಕೋಟೆಯಲ್ಲಿ ನೆಲೆಸಿರುವ ಚೆಲುವನಾರಾಯಣಸ್ವಾಮಿಯ ಸೌಂದರ್ಯಕ್ಕೆ ಮಾರುಹೋದ ಕೃಷ್ಣನು, ಈ ದಿವ್ಯ ಕಿರೀಟವನ್ನು ದೇವರಿಗೆ ಅರ್ಪಿಸಿದನು ಎಂಬುದು ಭಕ್ತರ ಅಚಲ ನಂಬಿಕೆ.

ವೈರಮುಡಿಯ ಜೊತೆಗೆ ಮೇಲುಕೋಟೆಯ ಇತಿಹಾಸದಲ್ಲಿ ಮೈಸೂರು ಅರಸರ ಪಾತ್ರವೂ ಅತ್ಯಂತ ದೊಡ್ಡದು. ಮೈಸೂರು ಸಂಸ್ಥಾನದ ರಾಜರಾಗಿದ್ದ ರಾಜ ಒಡೆಯರ್ ಅವರು ಚೆಲುವನಾರಾಯಣಸ್ವಾಮಿಯ ಪರಮ ಭಕ್ತರಾಗಿದ್ದರು. ಅವರು ದೇವರಿಗೆ ಭಕ್ತಿಯಿಂದ ಸಮರ್ಪಿಸಿದ ರತ್ನಾಭರಣ ಖಚಿತ ಕಿರೀಟವೇ ‘ರಾಜಮುಡಿ’. ಇಂದು ವೈರಮುಡಿ ಬ್ರಹ್ಮೋತ್ಸವದ ಸಂದರ್ಭದಲ್ಲಿ ಈ ಎರಡು ಕಿರೀಟಗಳೂ (ವೈರಮುಡಿ ಮತ್ತು ರಾಜಮುಡಿ) ಪ್ರಮುಖ ಆಕರ್ಷಣೆಗಳಾಗಿವೆ. ವರ್ಷವಿಡೀ ಜಿಲ್ಲಾ ಖಜಾನೆಯಲ್ಲಿ ಅತ್ಯಂತ ಸುರಕ್ಷಿತವಾಗಿಡಲಾಗುವ ಈ ಕಿರೀಟಗಳನ್ನು, ಕೇವಲ ಬ್ರಹ್ಮೋತ್ಸವದ ಆಯ್ದ ದಿನಗಳಲ್ಲಿ ಮಾತ್ರ ಹೊರತೆಗೆದು ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/vairamudi-brahmotsava-2026-begins-march-23-at-melukote-cheluvanarayana-swamy-temple-ceremony-details-447191.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo