
Karnataka
oi-Shankrappa Parangi
ಬೆಂಗಳೂರು: ಭಾರತ ಸರ್ಕಾರ ಅಮೆರಿಕೆದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ ರೈತರಿಗೆ ದ್ರೋಹ ಬಗೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಇದರ ಬೆನ್ನಲ್ಲೆ ಕರ್ನಾಟಕ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಒಂದಷ್ಟು ಪ್ರಶ್ನೆಗಳನ್ನು ಇಟ್ಟಿದೆ.
ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ಹೆಸರಿನಲ್ಲಿ ಭಾರತದ ರೈತರಿಗೆ ದ್ರೋಹ ಬಗೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ ಮೂಲಕ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದೆ. ಈ ಒಪ್ಪಂದದ ಕುರಿತು ಪ್ರಧಾನಮಂತ್ರಿಯವರಲ್ಲಿ ಕೆಲವು ಸರಳ ಪ್ರಶ್ನೆಗಳನ್ನು ಕೇಳಲಾಗಿದ್ದು ಉತ್ತರಿಸುವಿರಾ? ಎಂದು ಕೇಳಿದೆ.

ವ್ಯಾಪಾರ ಒಪ್ಪಂದ ಬಗ್ಗೆ ಕಾಂಗ್ರೆಸ್ನ ಪ್ರಶ್ನೆಗಳೇನು?
1. DDG ಆಮದು ಎಂದರೆ ಏನು? ಇದರರ್ಥ ಭಾರತೀಯ ಜಾನುವಾರುಗಳಿಗೆ ಆಹಾರವಾಗಿ ಜಿಎಂ (ತಳಿಪರಿವರ್ತಿತ) ಅಮೆರಿಕನ್ ಮೆಕ್ಕೆಜೋಳದಿಂದ ತಯಾರಿಸಿದ ‘ಡಿಸ್ಟಿಲರ್ಸ್ ಗ್ರೇನ್’ (distillers grain) ನೀಡುವುದೇ? ಇದರಿಂದ ನಮ್ಮ ಹೈನುಗಾರಿಕೆ ಅಮೆರಿಕದ ಕೃಷಿ ಉದ್ಯಮದ ಮೇಲೆ ಅವಲಂಬಿತವಾಗುವುದಿಲ್ಲವೇ?.
2. ನಾವು ಜಿಎಂ ಸೋಯಾಬೀನ್ ಎಣ್ಣೆಯ ಆಮದಿಗೆ ಅನುಮತಿ ನೀಡಿದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ದೇಶಾದ್ಯಂತ ಇರುವ ಸೋಯಾ ಬೆಳೆಗಾರರ ಗತಿಯೇನು? ಈ ರೈತರು ಬೆಲೆ ಕುಸಿತದ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ?
3. ನೀವು “ಹೆಚ್ಚುವರಿ ಉತ್ಪನ್ನಗಳು” (additional products) ಎಂದು ಹೇಳಿದಾಗ, ಅದರಲ್ಲಿ ಏನೇನು ಸೇರಿವೆ? ಇದು ಕಾಲಾನಂತರದಲ್ಲಿ ಬೇಳೆಕಾಳುಗಳು ಮತ್ತು ಇತರ ಬೆಳೆಗಳನ್ನು ಅಮೆರಿಕದ ಆಮದು ಮಾಡಿಕೊಳ್ಳಲು ಒತ್ತಡ ಹೇರುವ ಮುನ್ಸೂಚನೆಯೇ?
4. ”ವ್ಯಾಪಾರೇತರ ಅಡೆತಡೆಗಳನ್ನು” (Non-trade barriers) ತೆಗೆದುಹಾಕುವುದು ಎಂದರೆ ಏನು?. ಭವಿಷ್ಯದಲ್ಲಿ ಭಾರತವು ಜಿಎಂ ಬೆಳೆಗಳ ಮೇಲಿನ ತನ್ನ ನಿಲುವನ್ನು ಸಡಿಲಗೊಳಿಸಿ, ನಮ್ಮ ರೈತರಿಂದ ಖರೀದಿ ಪ್ರಕ್ರಿಯೆಯನ್ನು (procurement) ದುರ್ಬಲಗೊಳಿಸಲು ಅಥವಾ ಎಂಎಸ್ಪಿ ಮತ್ತು ಸಬ್ಸಿಡಿ ಕಡಿಮೆ ಮಾಡಲು ಒತ್ತಡ ಎದುರಿಸಲಿದೆಯೇ?
5. ಒಮ್ಮೆ ಈ ಬಾಗಿಲು ತೆರೆದರೆ, ಪ್ರತಿ ವರ್ಷ ಅದು ಇನ್ನಷ್ಟು ತೆರೆಯದಂತೆ ನಾವು ಹೇಗೆ ತಡೆಯಬಹುದು? ಇದಕ್ಕೆ ತಡೆಗೋಡೆ ಇದೆಯೇ, ಅಥವಾ ಪ್ರತಿ ಬಾರಿಯ ಒಪ್ಪಂದದಲ್ಲಿ ಹಂತಹಂತವಾಗಿ ಹೆಚ್ಚಿನ ಬೆಳೆಗಳನ್ನು ಆಮದು ಮಾಡಲಾಗುತ್ತದೆಯೇ?
ಈ ವಿಚಾರಗಳ ಬಗ್ಗೆ ರೈತರಿಗೆ ಸ್ಪಷ್ಟತೆ ಸಿಗಲೇಬೇಕು. ಇದು ಕೇವಲ ಇಂದಿನ ವಿಷಯವಲ್ಲ. ಇದು ಭವಿಷ್ಯದ ಪ್ರಶ್ನೆ, ನಮ್ಮ ದೇಶದ ಕೃಷಿ ಕ್ಷೇತ್ರದ ಮೇಲೆ ಬೇರೆ ದೇಶವು ದೀರ್ಘಕಾಲದ ಹಿಡಿತ ಸಾಧಿಸಲು ನಾವು ಅವಕಾಶ ಮಾಡಿಕೊಡುತ್ತಿದ್ದೇವೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ಯುಎಸ್ ಜತೆಗಿನ ವ್ಯಾಪಾರ ಕುರಿತು ರಾಹುಲ್ ಗಾಂಧಿ ಅವರು, ರೈತರಿಗೆ ಮತ್ತು ಜವಳಿ ರಫ್ತುದಾರರಿಗೆ ಈ ಒಪ್ಪಂದದಿಂದ ಗಂಭೀರ ಪರಿಣಾಮ ಉಂಟಾಗಲಿದೆ. ದೇಶ ಜವಳಿ ರಫ್ತುದಾರರಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಆದರೆ ಬಾಂಗ್ಲಾದೇಶದ ಜವಳಿ ರಫ್ತಿಗೆ ಶೂನ್ಯ ಸುಂಕ ವಿಧಿಸಲಾಗಿದೆ. ಅಮೆರಿಕಾದಿಂದ ಹತ್ತಿ ಆಮದು ಮಾಡಿಕೊಂಡರೆ ಭಾರತದ ಹತ್ತಿ ಬೆಳೆಗಾರರಿಗೆ ಹಾನಿ ಉಂಟಾಗುತ್ತದೆ ಎಂದು ಕೆಲವು ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ನಡೆ ಖಂಡಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/congress-slams-india-us-trade-deal-karnataka-congress-pose-5-tough-questions-to-pm-narendra-modi-443873.html. xn--babytilbehr-pgb.com does not claim ownership of this content. All rights remain with the original publisher.
