
Karnataka
oi-Shankrappa Parangi
ಬೆಂಗಳೂರು: ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಮಂಗಳವಾರ (ಏ.7) ಬಹಿರಂಗ ಪ್ರಚಾರ ಅಂತ್ಯವಾಗಿದೆ. ಇಂದು ಬುಧವಾರ ಮನೆ ಮನೆ ಮತಯಾಚನೆಗೆ ಅವಕಾಶ ಇದೆ. ನಾಯಕರೆಲ್ಲರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಗುರುವಾರ ಏಪ್ರಿಲ್ 9 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆವರೆಗೆ 6 ಗಂಟೆವರೆಗೆ ಮತದಾನ ಜರುಗಲಿದೆ. ಚುನಾವಣೆ ಆಯೋಗದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಪಾರದರ್ಶಕ ಮತ್ತು ನ್ಯಾಯಯುತ ಮತದಾನ ನಡೆಸಲು ಚುನಾವಣೆ ಆಯೋಗದ ಅಧಿಕಾರಿಗಳು ಎಂದಿನಂತೆ ಆದ್ಯತೆ ನೀಡಿದ್ದಾರೆ. ಮತಗಟ್ಟೆಗಳ ಬಳಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಸದಂತೆ ಎಚ್ಚರಿಕೆ ವಹಿಸಲಾಗಿದೆ. ಅಗತ್ಯ ಬಿಗಿ ಭದ್ರತೆ ಸಹ ನೀಡಲಾಗಿದೆ.

ಬಾಗಲಕೋಟೆ ಮತ್ತು ದಾವಣಗೆರೆ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಗೆ ಈ ಗೆಲುವು ಪ್ರತಿಷ್ಠೆಯಾಗಿದೆ. 2026 ಜೂನ್ ಹೊತ್ತಿಗೆ ನಡೆಯಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಹಾಗೂ ರಾಜ್ಯದ ಇನ್ನಿತರ ಜಿಲ್ಲಾ ಪಂಚಾಯತಿ, ನಗರಸಭೆ, ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಚುನಾವಣೆಗಳ ಮೇಲೂ ಉಪಚುನಾವಣೆ ಫಲಿತಾಂಶ ತನ್ನದೇ ಆದ ಪ್ರಭಾವ ಬೀರಲಿದೆ.
ಸಿಎಂ, ಮಾಜಿ ಸಿಎಂ ಆದಿಯಾಗಿ ಪ್ರಮುಖ ನಾಯಕರಿಂದ ಪ್ರಚಾರ
ಕಳೆದ ಹತ್ತು ದಿನಗಳಿಂದ ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಮುಖ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು. ಆರೋಪ ಪ್ರತ್ಯಾರೋಪಗಳು, ಸಾಧನೆಗಳು, ಜನರ ಸಮಸ್ಯೆಗಳ ಆದಿಯಾಗಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಮತಯಾಚಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ವಿಜಯಾನಂದ ಕಾಶಪ್ಪನವರ, ಸಲೀಂ ಅಹ್ಮದ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸೇರಿದಂತೆ ಶಾಸಕರು ಇನ್ನಿತರ ಉಭಯ ಪಕ್ಷಗಳ ಮುಖಂಡರು ಸ್ಥಳೀಯರ ಕಾರ್ಯಕರ್ತರಂತೆ ಪ್ರಚಾರ ನಡೆಸಿದ್ದಾರೆ. ಈ ಬಹಿರಂಗ ಪ್ರಚಾರಕ್ಕೆ ನೆನ್ನೆ ಮಂಗಳವಾರ ತೆರೆ ಬಿದ್ದಿದೆ.
ಇಂದು ಮನೆ ಮನೆಗೆ ಪ್ರಚಾರ
ಇಂದು ಗುರುವಾರ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ತಮ್ಮ ಪಕ್ಷ ಮತ ಹಾಕುವಂತೆ ಜನರ ಬಳಿ ಕೋರಲಿದ್ದಾರೆ. ಈ ವೇಳೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಪಕ್ಷಗಳು ಎಚ್ಚರಿಕೆ ವಹಿಸಬೇಕಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಮಂದಿ ಕಣದಲ್ಲಿದ್ದಾರೆ. ಸದರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರಾನೇರ ಸ್ಪರ್ಧೆ ಉಂಟಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು ಯಾರು?
ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ವೀರಣ್ಣ ಚರಂತಿಮಠ ಮತ್ತು ಕಾಂಗ್ರೆಸ್ನಿಂದ ಎಚ್.ವೈ.ಮೇಟಿ ಅವರ ಪುತ್ರ ಉಮೇಶ್ ಮೇಟಿ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಮರ್ಥ ಶ್ಯಾಮನೂರು ಶಿವಶಂಕರಪ್ಪ, ಬಿಜೆಪಿಯಿಂದ ಶ್ರೀನಿವಾಸ ದಾಸಕರಿಯಪ್ಪ ಅವರು ಕಣದಲ್ಲಿದ್ದಾರೆ.
ದಾವಣಗೆರೆ ಕ್ಷೇತ್ರ: ಇಲ್ಲಿ ಒಟ್ಟು 76 ಸೂಕ್ಷ್ಮ ಮತಗಟ್ಟೆಗಳಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರ ಒಟ್ಟು 2,31,072 ರಷ್ಟಿದೆ. ಒಟ್ಟು 284 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.
ಬಾಗಲಕೋಟೆ ಕ್ಷೇತ್ರ: ಇಲ್ಲಿ 322 ಮತಗಟ್ಟೆಗಳಿವೆ. ಒಟ್ಟು 2,59,797 ಮತದಾರರಿದ್ದು, ಮತಗಟ್ಟೆಗೆ ತೆರಳುವ ಸಿಬ್ಬಂದಿಗೆ ವಾಹನ ವ್ಯವಸ್ಥೆ ಇನ್ನಿತರ ವ್ಯವಸ್ಥೆ ಮಾಡಲಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-bypolls-davanagere-south-bagalkot-voting-tomorrow-april-9-congress-bjp-tough-fight-449773.html. xn--babytilbehr-pgb.com does not claim ownership of this content. All rights remain with the original publisher.
