ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕ ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್‌ ದಿಗ್ಗಜರ ಹೆಸರು: ರಾಹುಲ್‌ ದ್ರಾವಿಡ್‌ ಭಾವುಕ | Rahul Dravid Gets Emotional as Stands Are Named After Him at Bengaluru’s M. Chinnaswamy Stadium

Sports

oi-Madhusudhan KR

M.Chinnaswamy Stadium: ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕ ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್‌ ದಿಗ್ಗಜರಾದ ರಾಹುಲ್‌ ದ್ರಾವಿಡ್‌ ಹಾಗೂ ಅನಿಲ್‌ ಕುಂಬ್ಳೆ ಅವರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಈ ಕುರಿತು ಭಾರತೀಯ ಕ್ರಿಕೆಟ್‌ನ ಅಡ್ಡಗೋಡೆ ಅಂತಲೇ ಪ್ರಸಿದ್ಧಿಯಾಗಿರುವ ದ್ರಾವಿಟ್‌ ಅವರು ಭಾವುಕ ಮಾತುಗಳನ್ನಾಡಿ ಗಮನ ಸೆಳದಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರ್ನಾಟಕ ಕ್ರಿಕೆಟ್‌ಗೆ ಅಪಾರ ಸೇವೆ ಸಲ್ಲಿಸಿದ ದಿಗ್ಗಜರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಶಾಂತಾ ರಂಗಸ್ವಾಮಿ ಅವರಿಗೆ ಕೆಎಸ್‌ಸಿಎ ಗೌರವ ಸಲ್ಲಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವ ಮೂರು ಪ್ರೇಕ್ಷಕ ಸ್ಟ್ಯಾಂಡ್‌ಗಳಿಗೆ ಈ ಮೂವರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರ ಸಾಧನೆಗಳನ್ನು ಶಾಶ್ವತವಾಗಿ ಗೌರವಿಸುವ ಕೆಲಸ ಮಾಡಿದೆ. ಈ ಕುರಿತು ದ್ರಾವಿಡ್‌ ಅವರು ಭಾವುಕ ನುಡಿಗಳನ್ನು ನುಡಿದಿದ್ದಾರೆ.

Rahul Dravid Gets Emotional as Stands Are Named After Him at Bengaluru s M Chinnaswamy Stadium

ಕೆಎಸ್‌ಸಿಎ ಸಭೆಯಲ್ಲಿ ಮಹತ್ವದ ನಿರ್ಧಾರ

ಕರ್ನಾಟಕ ಕ್ರಿಕೆಟ್ ಅನ್ನು ರಾಷ್ಟ್ರಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಈ ಮೂವರು ಮಹತ್ವದ ಪಾತ್ರವಹಿಸಿದ್ದಾರೆ. ಬಳಿಕ ಭಾರತ ರಾಷ್ಟ್ರೀಯ ತಂಡಕ್ಕೂ ನಾಯಕತ್ವ ನೀಡಿದ ಇವರು, ಇಂದಿಗೂ ಕ್ರಿಕೆಟ್ ಲೋಕದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಇವರ ಹೆಸರನ್ನು ಪ್ರೇಕ್ಷಕ ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಲಾಗಿದೆ. ಈ ನಿರ್ಧಾರವನ್ನು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಕ್ರಿಕಟ್‌ನಲ್ಲಿ ಈ ಮೂವರ ಸಾಧನೆ ಏನು?

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ಅನಿಲ್ ಕುಂಬ್ಳೆ ಹೊಂದಿದ್ದಾರೆ. ಮತ್ತೊಂದೆಡೆ, ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಎರಡನೇ ಸ್ಥಾನದಲ್ಲಿದ್ದಾರೆ. ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿ ಶಾಂತಾ ರಂಗಸ್ವಾಮಿ ಅವರ ಕೊಡುಗೆ ಕರ್ನಾಟಕ ಹಾಗೂ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಭಾರತ ತಂಡದಲ್ಲಿ ಕನ್ನಡಿಗರಾದ ರಾಹುಲ್‌ ದ್ರಾವಿಡ್‌ ಹಾಗೂ ಅನಿಲ್‌ ಕುಂಬ್ಳೆ ಅವರು ಅಪಾರ ಸಾಧನೆ ಮಾಡಿದ್ದಾರೆ. ಈ ಮೂಲಕ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೀಡುವಂತೆಯೇ ಮಾಡಿದ ಕೀರ್ತಿ ಇವರಿಗೆ ಸಲುತ್ತದೆ ಅಂದರೆ, ತಪ್ಪಾಗಲಾರದು. ಇನ್ನೂ ತಮ್ಮ ಹೆಸರಿನಲ್ಲಿ ಸ್ಟ್ಯಾಂಡ್‌ಗೆ ನಾಮಕರಣ ಮಾಡಿರುವ ಕುರಿತು ರಾಹುಲ್ ದ್ರಾವಿಡ್ ಅವರು ಭಾವುಕ ಮಾತುಗಳನ್ನಾಡಿ ಗಮನ ಸೆಳದಿದ್ದಾರೆ. ಇವರ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

ರಾಹುಲ್ ದ್ರಾವಿಡ್ ಹೇಳಿದ್ದೇನು?

ರಾಹುಲ್ ದ್ರಾವಿಡ್ ಮಾತನಾಡಿ, “ಈ ಕ್ರೀಡಾಂಗಣವು ನನಗೆ ಎರಡನೇ ಮನೆಯಂತಿದೆ. ಆಟದ ದಿನಗಳಲ್ಲಿ ಮನೆಗಿಂತಲೂ ಹೆಚ್ಚು ಸಮಯ ಇಲ್ಲೇ ಕಳೆದಿದ್ದೇನೆ. ನಾನು ಇಂದು ಏನಾಗಿದ್ದೇನೆ ಎಂಬುದಕ್ಕೆ ಈ ಮೈದಾನ ಮತ್ತು ಕೆಎಸ್‌ಸಿಎ ಪ್ರಮುಖ ಕಾರಣ. ಈ ಗೌರವಕ್ಕೆ ಸದಾ ಕೃತಜ್ಞನಾಗಿರುತ್ತೇನೆ,” ಎಂದು ಹೇಳುವ ಮೂಲಕ ಭಾವುಕರಾದರು.

‘ಎಲ್ಲರ ಕೊಡುಗೆಗಳನ್ನು ಗುರುತಿಸಿರುವುದು ಮುಖ್ಯ’

ಇನ್ನೂ ಅನಿಲ್ ಕುಂಬ್ಳೆ ಮಾತನಾಡಿ, “ಕರ್ನಾಟಕ ಕ್ರಿಕೆಟ್‌ನ ಯಶಸ್ಸು ಒಬ್ಬರ ಸಾಧನೆಯಲ್ಲ, ಅನೇಕ ಜನರ ಸಮೂಹ ಪ್ರಯತ್ನದ ಫಲ. ನಾವು ಎಲ್ಲರೂ ಸೇರಿ ಈ ಕ್ರಿಕೆಟ್ ಸಂಸ್ಕೃತಿಯನ್ನು ಕಟ್ಟಿದ್ದೇವೆ. ಯಾರ ಹೆಸರಿನಲ್ಲಿ ಯಾವ ಸ್ಟ್ಯಾಂಡ್ ಎಂಬುದಕ್ಕಿಂತ, ಎಲ್ಲರ ಕೊಡುಗೆಗಳನ್ನು ಗುರುತಿಸಿರುವುದು ಮುಖ್ಯ.” ಎಂದು ಹೇಳಿದರು.

9 ವರ್ಷದ ಬಾಲಕನಾಗಿ ಈ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆ ಮಾಡಿದ್ದೆ. ಇಂದು ಅದೇ ಮೈದಾನದಲ್ಲಿ ನನ್ನ ಹೆಸರಿರುವ ಸ್ಟ್ಯಾಂಡ್ ಕಾಣುವುದು ಅತ್ಯಂತ ವಿಶೇಷ ಅನುಭವ. ಚಿನ್ನಸ್ವಾಮಿ ಕ್ರೀಡಾಂಗಣವು ಅಂತಾರಾಷ್ಟ್ರೀಯ ವೇದಿಕೆಯಾಗಿ 50 ವರ್ಷಗಳನ್ನು ಪೂರೈಸುತ್ತಿರುವುದು ಭಾರತೀಯ ಕ್ರಿಕೆಟ್ ಬೆಳವಣಿಗೆಯ ಪ್ರತಿಬಿಂಬವಾಗಿದೆ ಎಂದೂ ಅವರು ಹೇಳಿದರು. ಒಟ್ಟಿನಲ್ಲಿ ಹೇಳುವುದಾದ್ರೆ, ಚಿನ್ನಸ್ವಾಮಿಯಲ್ಲಿ ಪ್ರೇಕ್ಷಕ ಸ್ಟ್ಯಾಂಡ್‌ಗಳಿಗೆ ಕನ್ನಡಿಗರ ಹೆಸರಿಟ್ಟಿರುವುದು ತುಂಬಾ ಸಂತಸ ತಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rahul-dravid-gets-emotional-as-stands-are-named-after-him-at-bengalurus-m-chinnaswamy-stadium-443691.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo