ಕರ್ನಾಟಕದಲ್ಲಿ ಜೀವ ಬಲಿ ಪಡೆಯುತ್ತಿರುವ ಖಾಸಗಿ ಬಸ್‌ಗಳು: 6 ವರ್ಷಗಳಲ್ಲಿ 3,823 ಅಪಘಾತ ಪ್ರಕರಣಗಳು ವರದಿ | Karnataka Private Bus Accidents Surge By 153 Percent In Six Years Raising Road Safety Concerns

Karnataka

oi-Pragathi S

ರಾಜ್ಯದಲ್ಲಿ ಖಾಸಗಿ ಬಸ್ಸುಗಳ ಪ್ರಯಾಣ ದಿನೇ ದಿನೇ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ಖಾಸಗಿ ಬಸ್‌ಗಳ ಅಪಘಾತಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಮತ್ತು ಅಧಿಕಾರಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕರ್ನಾಟಕದಲ್ಲಿ ರಸ್ತೆ ಸುರಕ್ಷತೆಯ ನಿಯಮಗಳ ಜಾರಿ, ವಾಹನಗಳ ನಿರ್ವಹಣೆ ಹಾಗೂ ಬಸ್ ಮಾಲೀಕರ ಹೊಣೆಗಾರಿಕೆಯ ಬಗ್ಗೆ ಈಗ ಗಂಭೀರವಾದ ಪ್ರಶ್ನೆಗಳು ಎದ್ದಿವೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಖಾಸಗಿ ಬಸ್ಸುಗಳ ಅಪಘಾತಗಳ ಸಂಖ್ಯೆ ಹಿಂದೆಂದಿಗಿಂತಲೂ ಮಿತಿಮೀರಿದೆ.

ಅಂಕಿ-ಅಂಶಗಳ ಆಘಾತಕಾರಿ ಮಾಹಿತಿ

ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, 2020 ರಿಂದ 2025 ರವರೆಗಿನ ಕೇವಲ ಆರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಖಾಸಗಿ ಬಸ್‌ಗಳಿಗೆ ಸಂಬಂಧಿಸಿದಂತೆ ಒಟ್ಟು 3,823 ಅಪಘಾತ ಪ್ರಕರಣಗಳು ವರದಿಯಾಗಿವೆ. ಈ ಘಟನೆಗಳಲ್ಲಿ ಬರೋಬ್ಬರಿ 1,127 ಅಮಾಯಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಲ್ಲದೆ, 7,149 ಮಂದಿ ಗಂಭೀರವಾಗಿ ಅಥವಾ ಸಣ್ಣಪುಟ್ಟದಾಗಿ ಗಾಯಗೊಂಡಿದ್ದಾರೆ. ಈ ಅಂಕಿ-ಅಂಶಗಳು ಅಪಘಾತಗಳು ಮತ್ತು ಸಾವು-ನೋವುಗಳ ಸಂಖ್ಯೆಯಲ್ಲಿ ನಿರಂತರವಾಗಿ ಆಗುತ್ತಿರುವ ಆತಂಕಕಾರಿ ಏರಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಇದು ಸಾರ್ವಜನಿಕ ಸುರಕ್ಷತೆಗೆ ಎದುರಾಗಿರುವ ಅತಿದೊಡ್ಡ ಸವಾಲಾಗಿದೆ.

Private Bus Accidents

ಶೇಕಡಾ 153 ರಷ್ಟು ಏರಿಕೆ

ಅಪಘಾತಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೇಗೆ ಹೆಚ್ಚಾಗಿದೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. 2020 ರಲ್ಲಿ ರಾಜ್ಯದಲ್ಲಿ 335 ಖಾಸಗಿ ಬಸ್ ಅಪಘಾತಗಳು ದಾಖಲಾಗಿದ್ದವು. ಆದರೆ 2025 ರಲ್ಲಿ ಈ ಸಂಖ್ಯೆ ಬರೋಬ್ಬರಿ 847 ಕ್ಕೆ ಏರಿಕೆಯಾಗಿದೆ. ಅಂದರೆ, ಕೇವಲ ಆರು ವರ್ಷಗಳಲ್ಲಿ ಅಪಘಾತಗಳ ಪ್ರಮಾಣದಲ್ಲಿ ಶೇಕಡಾ 153 ರಷ್ಟು ಭಾರಿ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸಾವಿನ ಪ್ರಮಾಣವು ಶೇಕಡಾ 120 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. 2020 ರಲ್ಲಿ 675 ಇದ್ದ ಗಾಯಾಳುಗಳ ಸಂಖ್ಯೆ 2025 ರಲ್ಲಿ 1,803 ಕ್ಕೆ ತಲುಪಿದೆ. ಅಂದರೆ ಗಾಯಾಳುಗಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಅಪಘಾತಗಳಿಗೆ ಪ್ರಮುಖ ಕಾರಣಗಳೇನು?

ಈ ಆತಂಕಕಾರಿ ಏರಿಕೆಗೆ ರಸ್ತೆ ಸುರಕ್ಷತಾ ತಜ್ಞರು ಮತ್ತು ಅಧಿಕಾರಿಗಳು ಹಲವು ಕಾರಣಗಳನ್ನು ನೀಡಿದ್ದಾರೆ. ಚಾಲಕರ ಅಜಾಗರೂಕತೆ ಮತ್ತು ನಿರ್ಲಕ್ಷ್ಯ, ವಾಹನಗಳ ತಾಂತ್ರಿಕ ದೋಷಗಳು ಹಾಗೂ ಟ್ರಾಫಿಕ್ ನಿಯಮಗಳ ನಿರಂತರ ಉಲ್ಲಂಘನೆ ಪ್ರಮುಖ ಕಾರಣಗಳಾಗಿವೆ. ಖಾಸಗಿ ಬಸ್ ಚಾಲಕರು ಹೆಚ್ಚು ಟ್ರಿಪ್‌ಗಳನ್ನು ಮಾಡುವ ಉದ್ದೇಶದಿಂದ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ.

ಜೊತೆಗೆ, ವಾಹನಗಳ ಕಳಪೆ ನಿರ್ವಹಣೆ, ಚಾಲಕರಿಗೆ ವಿಶ್ರಾಂತಿ ಇಲ್ಲದಿರುವುದು (ದಣಿವು), ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬುವುದು ಮತ್ತು ಕಡ್ಡಾಯ ಫಿಟ್ನೆಸ್ ಪರೀಕ್ಷೆಗಳನ್ನು ಮಾಡಿಸದಿರುವುದು ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ. ಲಾಭದ ಆಸೆಯಿಂದ ಬಸ್ ಮಾಲೀಕರು ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ.

ತಜ್ಞರ ಸಲಹೆ

ಮೈಸೂರು ಮೂಲದ ಸಾರಿಗೆ ತಜ್ಞರಾದ ಮಧು ಅವರು ಹೇಳುವಂತೆ, ಖಾಸಗಿ ಬಸ್‌ಗಳ ಮೇಲೆ ಸಾರಿಗೆ ಇಲಾಖೆಯ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅತ್ಯಗತ್ಯವಾಗಿದೆ. “ಬಸ್ಸುಗಳ ವೇಗ ಮತ್ತು ಮಾರ್ಗವನ್ನು ಗಮನಿಸಲು ರಿಯಲ್-ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಬೇಕು. ಅಧಿಕಾರಿಗಳು ಏಕಾಏಕಿ ತಪಾಸಣೆಗಳನ್ನು ನಡೆಸಬೇಕು. ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಲಕರು ಮತ್ತು ಮಾಲೀಕರ ಮೇಲೆ ಕಠಿಣ ದಂಡ ಪ್ರಯೋಗ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಸಾರಿಗೆ ಮತ್ತು ಪೊಲೀಸ್ ಇಲಾಖೆಗಳು ಆಗಾಗ ದಾಳಿಗಳನ್ನು ನಡೆಸುತ್ತವೆಯಾದರೂ, ನಿಯಮಗಳ ಜಾರಿಯಲ್ಲಿ ನಿರಂತರತೆ ಇಲ್ಲದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಕೇವಲ ಅಪಘಾತ ಸಂಭವಿಸಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಮಾಯಕ ಪ್ರಯಾಣಿಕರ ಜೀವ ಉಳಿಸಲು ಸರ್ಕಾರ ಮುಂದಾಗಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-private-bus-accidents-surge-by-153-percent-in-six-years-raising-road-safety-concerns-447889.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo