
India
oi-Manohara M
ಹೈದರಾಬಾದ್: ಆಟೋ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಂತರೂ ಇಂಧನ ಸಿಗದಿದ್ದಕ್ಕೆ ಆಕ್ರೋಶಗೊಂಡ ಆಟೋ ಚಾಲಕನೊಬ್ಬ ಶನಿವಾರ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಗರದ ಎಲ್ಬಿ ನಗರದ ಚಿಂತಲ್ಮೆಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 42 ವರ್ಷದ ಜಾನಿ ಎಂಬ ಆಟೋ ಚಾಲಕ ಇಂಧನಕ್ಕಾಗಿ ಬಹಳ ಹೊತ್ತು ಸರತಿ ಸಾಲಿನಲ್ಲಿ ಕಾಯುತ್ತಿದ್ದನು. ಆದರೆ, ಸುದೀರ್ಘ ಕಾಯುವಿಕೆಯ ನಂತರವೂ ಗ್ಯಾಸ್ ಸಿಗದಿದ್ದಾಗ ತೀವ್ರ ಅಸಮಾಧಾನಗೊಂಡ ಆತ, ಹತ್ತಿರದಲ್ಲಿದ್ದ ಮೊಬೈಲ್ ಟವರ್ ಏರಿ ಎಲ್ಲರಲ್ಲೂ ಆತಂಕ ಮೂಡಿಸಿದ್ದಾನೆ.

ಮುಖ್ಯಮಂತ್ರಿ ಭೇಟಿಗೆ ಪಟ್ಟು
ಟವರ್ ಮೇಲಿಂದಲೇ ತನ್ನ ಅಳಲು ತೋಡಿಕೊಂಡ ಚಾಲಕ, ರಾಜ್ಯದಲ್ಲಿ ಎದುರಾಗಿರುವ ಇಂಧನ ಅಭಾವದ ಕುರಿತು ಚರ್ಚಿಸಲು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಸಭೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದನು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರ ಕಾರ್ಯಾಚರಣೆ
ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸುಮಾರು ಹೊತ್ತು ಆತನ ಮನವೊಲಿಸಲು ಯತ್ನಿಸಿದ ಅಧಿಕಾರಿಗಳು, ಕೊನೆಗೂ ಜಾನಿಯನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಸುರಕ್ಷಿತವಾಗಿ ಕೆಳಗಿಳಿದ ಚಾಲಕನನ್ನು ನಂತರ ಪೊಲೀಸರು ಆತನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಸತತವಾಗಿ ಇಂಧನಕ್ಕಾಗಿ ಕಾಯುತ್ತಿರುವ ಚಾಲಕರ ಪರದಾಟಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ.
ಇತ್ತೀಚಿನ ದಿನಗಳಲ್ಲಿ ಆಟೋ ಎಲ್ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಮತ್ತು ಬೆಲೆ ಏರಿಕೆ ಆಟೋ ಚಾಲಕರನ್ನು ಬೀದಿಗೆ ತಳ್ಳಿದೆ. ಪರಿಸರ ಸ್ನೇಹಿ ಇಂಧನ ಎಂಬ ಕಾರಣಕ್ಕೆ ಗ್ಯಾಸ್ ಕಿಟ್ ಅಳವಡಿಸಿಕೊಂಡ ಚಾಲಕರು ಈಗ ಇಂಧನಕ್ಕಾಗಿ ದಿನವಿಡೀ ಕಾಯುವಂತಾಗಿದೆ. ನಗರ ಪ್ರದೇಶಗಳಲ್ಲಿರುವ ಬೆರಳೆಣಿಕೆಯಷ್ಟು ಎಲ್ಪಿಜಿ ವಿತರಣಾ ಕೇಂದ್ರಗಳ ಮುಂದೆ ಕಿಲೋಮೀಟರ್ಗಟ್ಟಲೆ ಆಟೋಗಳು ಸಾಲುಗಟ್ಟಿ ನಿಂತಿರುತ್ತವೆ. ಗ್ಯಾಸ್ ತುಂಬಿಸಿಕೊಳ್ಳಲು ಕನಿಷ್ಠ 3ರಿಂದ 5 ಗಂಟೆಗಳ ಕಾಲ ಕಾಯಬೇಕಾದ ಅನಿವಾರ್ಯತೆ ಇದೆ.
ದೈನಂದಿನ ಆದಾಯಕ್ಕೆ ಹೊಡೆತ
ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಅನೇಕ ಬಾರಿ ಗ್ಯಾಸ್ ಸ್ಟೇಷನ್ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್ ಕಾಣಿಸಿಕೊಳ್ಳುತ್ತದೆ. ಇದರಿಂದ ಗಂಟೆಗಟ್ಟಲೆ ಕಾದರೂ ಇಂಧನ ಸಿಗದೆ ಚಾಲಕರು ಬರಿಗೈಲಿ ವಾಪಸ್ಸಾಗುತ್ತಿದ್ದಾರೆ. ಇಂಧನಕ್ಕಾಗಿ ಕ್ಯೂ ನಿಲ್ಲುವುದರಲ್ಲೇ ದಿನದ ಅರ್ಧ ಸಮಯ ವ್ಯಯವಾಗುತ್ತಿದೆ. ಇದರಿಂದ ಚಾಲಕರಿಗೆ ಬಾಡಿಗೆ ಮಾಡಲು ಸಮಯ ಸಿಗದೆ, ದಿನದ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ. ಜೀವನೋಪಾಯಕ್ಕಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಪೆಟ್ರೋಲ್ ಬೆಲೆಗೆ ಸಮಾನವಾಗಿ ಎಲ್ಪಿಜಿ ಬೆಲೆಯೂ ಏರಿಕೆಯಾಗುತ್ತಿರುವುದು ಚಾಲಕರ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಆಟೋ ಓಡಿಸುವುದು ಲಾಭದಾಯಕವಾಗಿ ಉಳಿದಿಲ್ಲ. ಪೆಟ್ರೋಲ್ ಬಂಕ್ಗಳಂತೆ ಪ್ರತಿ ಬಡಾವಣೆಯಲ್ಲೂ ಎಲ್ಪಿಜಿ ಕೇಂದ್ರಗಳಿಲ್ಲ. ನಗರದ ದೂರದ ಪ್ರದೇಶಗಳಿಗೆ ಹೋಗಿ ಗ್ಯಾಸ್ ತುಂಬಿಸಿಕೊಳ್ಳುವುದು ಚಾಲಕರಿಗೆ ದೊಡ್ಡ ಹೊರೆಯಾಗಿದೆ.
ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಸಕಾಲಕ್ಕೆ ಇಂಧನ ಲಭ್ಯವಾಗುವಂತೆ ಮಾಡಬೇಕು, ನಗರದ ಆಯಕಟ್ಟಿನ ಜಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಎಲ್ಪಿಜಿ ವಿತರಣಾ ಕೇಂದ್ರಗಳನ್ನು ತೆರೆಯಬೇಕು, ಆಟೋ ಚಾಲಕರಿಗೆ ರಿಯಾಯಿತಿ ದರದಲ್ಲಿ ಅಥವಾ ಸ್ಥಿರ ದರದಲ್ಲಿ ಇಂಧನ ಒದಗಿಸಬೇಕು ಎಂದು ಚಾಲಕರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟಲು ಎಲ್ಪಿಜಿ ಬಳಕೆಯನ್ನು ಪ್ರೋತ್ಸಾಹಿಸಿದ ಸರ್ಕಾರ, ಈಗ ಅದರ ಸುಗಮ ಪೂರೈಕೆಯ ಜವಾಬ್ದಾರಿಯನ್ನೂ ಹೊರಬೇಕಿದೆ. ಇಲ್ಲವಾದಲ್ಲಿ ಹೈದರಾಬಾದ್ನ ಘಟನೆಯಂತೆ ಚಾಲಕರ ಆಕ್ರೋಶ ಮುಂದಿನ ದಿನಗಳಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/auto-driver-climbs-mobile-tower-over-lpg-shortage-in-hyderabad-demands-meeting-with-revanth-reddy-449371.html. xn--babytilbehr-pgb.com does not claim ownership of this content. All rights remain with the original publisher.
