
Sports
oi-Madhusudhan KR
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶೇಷ ಸಮಾರಂಭಕ್ಕೆ ವಿರಾಟ್ ಕೊಹ್ಲಿ ಸಾಕ್ಷಿಯಾದರು. ಭಾರತೀಯ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರಿ ಗೌರವ ಸಲ್ಲಿಸುವ ಸಲುವಾಗಿ, ಕ್ರೀಡಾಂಗಣದ ಎರಡು ಸ್ಟ್ಯಾಂಡ್ಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಯಿತು. ಈ ವೇಳೆ ಕೊಹ್ಲಿ ಅವರು ಚಪ್ಪಾಳೆ ಮೂಲಕ ಗೌರವ ಸಲ್ಲಿಸಿ ಗಮನ ಸೆಳೆದರು.
ಮಾಜಿ ಸಹ ಆಟಗಾರರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ‘ರಾಹುಲ್ ದ್ರಾವಿಡ್ ಎಂಡ್’ ಮತ್ತು ‘ಅನಿಲ್ ಕುಂಬ್ಳೆ ಎಂಡ್’ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಕರ್ಷಣೆಯಾಗಿ ಹಲವು ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ವಿರಾಟ್ ಕೊಹ್ಲಿ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕದ ಕ್ರಿಕೆಟ್ ದಿಗ್ಗಜರಿಗೆ ಗೌರವ
ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ದೀರ್ಘಕಾಲದ ಸಹ ಆಟಗಾರರೂ ಆಗಿರುವ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಉಪಾಧ್ಯಕ್ಷ ಸುಜಿತ್ ಸೋಮಸುಂದರ್ ಅವರು ಈ ಸಮಾರಂಭದ ಉಸ್ತುವಾರಿ ವಹಿಸಿದ್ದರು. ಭಾರತೀಯ ಮತ್ತು ಕರ್ನಾಟಕ ಕ್ರಿಕೆಟ್ಗೆ ಈ ಇಬ್ಬರು ದಿಗ್ಗಜರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ, ಅವರಿಗೆ ಈ ಗೌರವ ಸಲ್ಲಿಸುವ ನಿರ್ಧಾರವನ್ನು ಫೆಬ್ರವರಿ 14ರಂದು ಮೊದಲ ಬಾರಿಗೆ ಘೋಷಿಸಲಾಗಿತ್ತು.
ದ್ರಾವಿಡ್, ಕುಂಬ್ಳೆ ಅಪಾರ ಸಾಧನೆ
ಕ್ರೀಡಾಂಗಣದ ಈ ಹಿಂದಿನ ಬಿಇಎಂಎಲ್ ಎಂಡ್ ಅನ್ನು ಈಗ ದ್ರಾವಿಡ್ ಅವರ ಹೆಸರಿಗೆ ಬದಲಾಯಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 24,177 ರನ್ ಗಳಿಸಿರುವ ರಾಹುಲ್ ದ್ರಾವಿಡ್ ಅವರು, ಭಾರತದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅದೇ ರೀತಿ, ಪೆವಿಲಿಯನ್ ಎಂಡ್ ಅನ್ನು ಕುಂಬ್ಳೆ ಅವರ ಹೆಸರನಿಂದ ಮರುನಾಮಕರಣ ಮಾಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 956 ವಿಕೆಟ್ಗಳನ್ನು ಕಬಳಿಸಿರುವ ಅನಿಲ್ ಕುಂಬ್ಳೆ, ದೇಶದ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಹಳೆಯ ನೆನಪುಗಳನ್ನು ಮೆಲುಕು ಹಾಕಿದ ದ್ರಾವಿಡ್
ಸಮಾರಂಭದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ತಮ್ಮ ವೃತ್ತಿಜೀವನದಲ್ಲಿ ಈ ಮೈದಾನದಲ್ಲಿ ಕಳೆದ ಕ್ಷಣಗಳನ್ನು ಸ್ಮರಿಸುತ್ತಾ, ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಮ್ಮ “ಎರಡನೇ ಮನೆ” ಎಂದು ಕರೆದರು. ತಮಗೆ ಈ ಗೌರವ ನೀಡಿದ್ದಕ್ಕಾಗಿ ಕೆಎಸ್ಸಿಎಗೆ ಧನ್ಯವಾದ ಅರ್ಪಿಸಿದ ಅವರು, ಈ ಕ್ಷಣ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅತ್ಯಂತ ಅರ್ಥಪೂರ್ಣವಾದುದು ಎಂದು ಹೇಳಿದರು.
ಈ ವಿಶೇಷ ಸಮಾರಂಭದಲ್ಲಿ ದ್ರಾವಿಡ್ ಅವರ ತಾಯಿ ಪುಷ್ಪಾ ಮತ್ತು ಸಹೋದರ ವಿಜಯ್ ಉಪಸ್ಥಿತರಿದ್ದರು. ಇನ್ನು ಅನಿಲ್ ಕುಂಬ್ಳೆ ಅವರು ತಮ್ಮ ಪತ್ನಿ ಚೇತನಾ ಮತ್ತು ಮಕ್ಕಳೊಂದಿಗೆ ಆಗಮಿಸಿದ್ದರು. ಈ ಇಬ್ಬರು ದಿಗ್ಗಜರ ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಕ್ರೀಡಾಂಗಣದಲ್ಲಿ ಅವರ ಸಾಧನೆಗಳನ್ನು ಸ್ಮರಿಸುವ ಮೂಲಕ ಭಾನುವಾರದ ಸಂಜೆ ಸಂಭ್ರಮ ಮತ್ತು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ವಿರಾಟ್ ಕೊಹ್ಲಿ ಅವರ ಉಪಸ್ಥಿತಿಯು ಭಾರತೀಯ ಕ್ರಿಕೆಟ್ನ ಬಲಿಷ್ಠ ತಂಡವನ್ನು ನೆನಪಿಸುವಂತಿತ್ತು. ಅಲ್ಲದೆ, ಇದು ಇಂದಿನ ಪೀಳಿಗೆಯೊಂದಿಗೆ ಬೆಸೆಯುವ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು ಎಂದು ಹೇಳಬಹುದು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/virat-kohli-applauds-as-rahul-dravid-anil-kumble-honoured-with-new-stand-at-m-chinnaswamy-stadium-449559.html. xn--babytilbehr-pgb.com does not claim ownership of this content. All rights remain with the original publisher.
