
Entertainment
oi-Manohara M
ಸ್ಯಾಂಡಲ್ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ನಟರಾದ ದರ್ಶನ್ ತೂಗುದೀಪ, ಪುನೀತ್ ರಾಜ್ಕುಮಾರ್ ಹಾಗೂ ತಮ್ಮ ಬಗ್ಗೆ ವೇದಿಕೆಯಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ನಿರ್ದೇಶಕ ಪ್ರೇಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರೇಮ್ ಅವರು ಕರ್ನಾಟಕ ಫಿಲ್ಮ್ ಚೇಂಬರ್ಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೇಮ್, “ಪುನೀತ್ ರಾಜ್ಕುಮಾರ್ ಇದ್ದಾಗಲೇ ಅವರ ಎದುರಲ್ಲೇ ಈ ಮಾತುಗಳನ್ನು ಹೇಳಬೇಕಿತ್ತು. ಅವರು ಇಲ್ಲದ ಮೇಲೆ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದು ಕನಕಪುರ ಶ್ರೀನಿವಾಸ್ ವಿರುದ್ಧ ಕಿಡಿಕಾರಿದರು.
ನಟ ದರ್ಶನ್ ಕುರಿತು ಕನಕಪುರ ಶ್ರೀನಿವಾಸ್ ಮಾತನಾಡಿರುವುದಕ್ಕೂ ಪ್ರೇಮ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ದರ್ಶನ್ ಪಾಪ ಈಗ ಜೈಲಲ್ಲಿದ್ದಾರೆ. ಅವರ ಕಷ್ಟಗಳು ಅವರಿಗೆ ಗೊತ್ತು. ಅವರು ಹೊರಗಿದ್ದಾಗ ಮಾತನಾಡಬೇಕಿತ್ತು. ಈಗ ಅವರ ಬಗ್ಗೆ ಹೇಳಿಕೆ ನೀಡುವುದು ಮಾನವೀಯತೆ ಇಲ್ಲದ ಕೆಲಸ” ಎಂದು ಹೇಳಿದರು.

ಚಂದ್ರಾ ಲೇಔಟ್ನಲ್ಲಿ ಮನೆ ಇದೆ ಬಾ ಗುರು
ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರೇಮ್, “ನನ್ನ ಮನೆ, ನನ್ನ ಆಫೀಸ್ ಎಲ್ಲಿದೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ಚಂದ್ರಾ ಲೇಔಟ್ನಲ್ಲಿದೆ. ಬಾ ಗುರು, ಅಲ್ಲಿಗೆ ಬಾ” ಎಂದು ಸವಾಲ್ ಹಾಕಿದರು. ಕನಕಪುರ ಶ್ರೀನಿವಾಸ್ ವರ್ತನೆಗೆ ತಿರುಗೇಟು ನೀಡಿದ ಪ್ರೇಮ್, “ಅವರು ನ್ಯೂಸೆನ್ಸ್ ಮಾಡಿದರೆ, ನಾನು ಅದಕ್ಕಿಂತಲೂ ಹೆಚ್ಚು ಮಾಡಬಲ್ಲೆ. ದೇವರು ಆ ಸಾಮರ್ಥ್ಯ ಕೊಟ್ಟಿದ್ದಾನೆ. ಆದರೆ ನಾನು ಆ ರೀತಿ ಮಾಡಲ್ಲ. ಯಾಕಂದ್ರೆ ಅವರಷ್ಟು ಕೀಳುಮಟ್ಟಕ್ಕೆ ನಾನು ಇಳಿಯಲ್ಲ” ಎಂದರು.
“ಯಾರಾದರೂ ಸಾರ್ವಜನಿಕವಾಗಿ ಕೆಟ್ಟದಾಗಿ ಮಾತನಾಡಿದರೆ, ಮಾಧ್ಯಮದವರು ಅಲ್ಲೇ ಪ್ರಶ್ನೆ ಮಾಡಬೇಕು. ನಿಮಗೆ ಕೇಳುವ, ಪ್ರಶ್ನಿಸುವ ಎಲ್ಲಾ ಅಧಿಕಾರ ಇದೆ” ಎಂದು ಮಾಧ್ಯಮಗಳಿಗೂ ಪ್ರೇಮ್ ಮನವಿ ಮಾಡಿದರು. ಕನಕಪುರ ಶ್ರೀನಿವಾಸ್ ಅವರ ಹೇಳಿಕೆಗಳಿಂದ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದ್ದು, ಫಿಲ್ಮ್ ಚೇಂಬರ್ ಈ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕನಕಪುರ ಶ್ರೀನಿವಾಸ್ ವಿವಾದ ಏನು?
ಇತ್ತೀಚೆಗೆ ಕಾಟನ್ಪೇಟೆ ಸಿನಿಮಾ ವೇದಿಕೆಯಲ್ಲಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್, ನಟರಾದ ಅಪ್ಪು, ದರ್ಶನ್, ಧ್ರುವ ಸರ್ಜಾ, ನಿರ್ದೇಶಕ ಪ್ರೇಮ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ದರ್ಶನ್ ಅವರಿಗೆ ಹಣ ನೀಡಿದ್ದೆ. ಇನ್ನು ಪುನೀತ್ ಅವರನ್ನು ಹೀರೋ ಮಾಡಿದ್ದು ನಾನು, ನನಗೆ ಮೋಸ ಮಾಡಿದ್ದಕ್ಕೆ ದೇವರು ಕರ್ಕೊಂಡ ಎಂದಿದ್ದರು. ಇನ್ನು ಪ್ರೇಮ್ ಬಗ್ಗೆಯೂ ನಾಲಿಗೆ ಹರಿಬಿಟ್ಟಿದ್ದ ಶ್ರೀನಿವಾಸ್, ಗಂಡಸ್ತನಕ್ಕೆ ಸವಾಲ್ ಹಾಕಿದ್ದರು. ಈ ವಿಡಿಯೋಗಳು ವೈರಲ್ ಆಗಿದ್ದವು. ಈ ಹಿನ್ನೆಲೆ ಪ್ರೇಮ್ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದು, ಅಲ್ಲದೆ ಪೊಲೀಸ್ ಠಾಣೆಯಲ್ಲೂ ಶ್ರೀನಿವಾಸ್ ವಿರುದ್ಧ ದೂರು ನೀಡಿರುವುದಾಗಿ ತಿಳಿದುಬಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-in-jail-kanakapura-srinivas-should-have-spoken-when-puneeth-rajkumar-was-alive-prem-442889.html. xn--babytilbehr-pgb.com does not claim ownership of this content. All rights remain with the original publisher.
