ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಚಿತ್ರದುರ್ಗ ಬಂದ್‌ಗೆ ಕರೆ | Bhadra Upper Project Delay: Farmers Call for Chitradurga Bandh on February 10 to Protest Slow Work

Karnataka

oi-Pragathi S

ಚಿತ್ರದುರ್ಗ: ಬಯಲು ಸೀಮೆಯ ಜನರ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯು ಕಳೆದ ಎರಡು ದಶಕಗಳಿಂದ ಕುಂಟುತ್ತಾ ಸಾಗುತ್ತಿದೆ. ಸರ್ಕಾರದ ಭರವಸೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ಹೊಲಗಳಿಗೆ ನೀರು ಬರುವುದು ಮಾತ್ರ ಗಗನಕುಸುಮವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಳಂಬವನ್ನು ಖಂಡಿಸಿ ಚಿತ್ರದುರ್ಗದ ರೈತರು ನಾಳೆ, ಅಂದರೆ ಫೆಬ್ರವರಿ 10 ರಂದು ಜಿಲ್ಲೆಯ ಪ್ರಮುಖ ತಾಲ್ಲೂಕುಗಳಲ್ಲಿ ಬಂದ್‌ಗೆ ಕರೆ ನೀಡಿದ್ದಾರೆ.

ಯೋಜನೆ ವಿಳಂಬಕ್ಕೆ ಕಾರಣವೇನು?

ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ಸಿಕ್ಕು 20 ವರ್ಷಗಳೇ ಕಳೆಯುತ್ತಾ ಬಂದಿದ್ದರೂ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮುತ್ತಿನಕೊಪ್ಪದಿಂದ ಭದ್ರಾ ಜಲಾಶಯದವರೆಗಿನ ಸುಮಾರು ಶೇ. 25ರಷ್ಟು ಕಾಮಗಾರಿ ಇಂದಿಗೂ ಬಾಕಿ ಉಳಿದಿದೆ. ಅರಣ್ಯ ವ್ಯಾಪ್ತಿಯಲ್ಲಿ ಟವರ್ ಅಳವಡಿಸುವ ಕೆಲಸಗಳು ನೆನೆಗುದಿಗೆ ಬಿದ್ದಿವೆ.

Bhadra Upper Project Delay

ಕೇಂದ್ರ ಸರ್ಕಾರವು ಈ ಹಿಂದೆ ಬಜೆಟ್‌ನಲ್ಲಿ 5,300 ಕೋಟಿ ರೂಪಾಯಿ ಅನುದಾನ ಘೋಷಿಸಿತ್ತಾದರೂ, ಆ ಹಣ ಇಂದಿಗೂ ಬಿಡುಗಡೆಯಾಗಿಲ್ಲ ಎಂದು ರಾಜ್ಯ ಸರ್ಕಾರ ದೂರಿದೆ. ಇತ್ತ ರಾಜ್ಯ ಸರ್ಕಾರವು ಅಗತ್ಯ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆ ರೈತರ ಭವಿಷ್ಯ ಅನಿಶ್ಚಿತತೆಯಲ್ಲಿದೆ.

ಫೆಬ್ರವರಿ 10 ರಂದು ಎಲ್ಲೆಲ್ಲಿ ಬಂದ್?

ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಈಗಾಗಲೇ ಫೆಬ್ರವರಿ 4 ರಿಂದ ನಿರಂತರ ಧರಣಿ ನಡೆಯುತ್ತಿದೆ. ಇದರ ಮುಂದಿನ ಭಾಗವಾಗಿ:

ಫೆಬ್ರವರಿ 10: ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುವುದು.

ಫೆಬ್ರವರಿ 12: ಚಳ್ಳಕೆರೆ ಪಟ್ಟಣ ಬಂದ್‌ಗೆ ಸಿದ್ಧತೆ ನಡೆಸಲಾಗಿದೆ.

ಫೆಬ್ರವರಿ 13: ಜಿಲ್ಲೆಯ ಎಲ್ಲಾ ರೈತರು ಪಾದಯಾತ್ರೆ ಮೂಲಕ ಚಿತ್ರದುರ್ಗ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳೇನು?

ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಅವರ ಪ್ರಕಾರ, ಹನಿ ನೀರಾವರಿ ಯೋಜನೆಯಿಂದ ಹೊಳಲ್ಕೆರೆಯನ್ನು ಕೈಬಿಟ್ಟಿರುವುದು ತಾರತಮ್ಯದ ಪರಮಾವಧಿ. “ಜಿಲ್ಲೆಯ ಎಲ್ಲಾ ಭಾಗಗಳಿಗೂ ಸಮಾನವಾಗಿ ನೀರು ಹಂಚಿಕೆಯಾಗುವವರೆಗೆ ಯಾವುದೇ ಟ್ರಯಲ್ ಟೆಸ್ಟ್‌ಗೆ ನಾವು ಅವಕಾಶ ನೀಡುವುದಿಲ್ಲ,” ಎಂದು ಅವರು ಎಚ್ಚರಿಸಿದ್ದಾರೆ. ಭದ್ರೆ ಹರಿಯುವ ಮೊದಲೇ ಕಾಲುವೆಗಳು ಒಡೆಯುತ್ತಿವೆ, ಇದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ.

ಸರ್ಕಾರದ ಭರವಸೆ ಮತ್ತು ವಾಸ್ತವ

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಫೆಬ್ರವರಿ ಅಂತ್ಯದೊಳಗೆ ಗೋನೂರು ಕೆರೆಯವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕಾಮಗಾರಿ ಬಾಕಿ ಇರುವಾಗ ನೀರು ಹರಿಸುವುದು ಹೇಗೆ ಎಂಬುದು ರೈತರ ಪ್ರಶ್ನೆ. 2026ರಲ್ಲಿ ಬಯಲು ಸೀಮೆಗೆ ಭದ್ರೆ ಬರುತ್ತಾಳೆ ಎಂಬ ಭರವಸೆ ಹಳೆಯದಾಗುತ್ತಿದೆಯೇ ಹೊರತು, ವಾಸ್ತವದಲ್ಲಿ ರೈತರ ಬವಣೆ ನೀಗುತ್ತಿಲ್ಲ.

ನಾಳೆ ನಡೆಯಲಿರುವ ಬಂದ್‌ಗೆ ವ್ಯಾಪಾರಿಗಳು, ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಬೆಂಬಲ ನೀಡುವಂತೆ ರೈತ ಸಂಘ ಮನವಿ ಮಾಡಿದೆ. ಭದ್ರೆಯ ನೀರು ನಮ್ಮ ಹಕ್ಕು, ಅದು ಯಾರೊಬ್ಬರ ಭಿಕ್ಷೆಯಲ್ಲ ಎಂಬ ಘೋಷಣೆ ಕೋಟೆನಾಡಿನಲ್ಲಿ ಮೊಳಗುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bhadra-upper-project-delay-farmers-call-for-chitradurga-bandh-on-february-10-to-protest-slow-work-443155.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo