
India
oi-Hitesh Y
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ರಾಜಕೀಯ ಹೈಡ್ರಾಮಾವೇ ನಡೆದಿದೆ. ಈ ಬಗ್ಗೆ ಸಂಸತ್ ಅವಿಶ್ವಾಸ ಗೊತ್ತುವಳಿ: ಪ್ರತಿಪಕ್ಷಗಳ ತಂತ್ರಗಾರಿಕೆ ಕೊರತೆ, ಕ್ಲೂಲೆಸ್ ರಾಜಕೀಯಕ್ಕೀಗ ಅವಕಾಶ ಇಲ್ಲ ಎನ್ನುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಸಂಸತ್ತಿನಲ್ಲಿ ಸ್ಪೀಕರ್ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡನೆ-ಚರ್ಚೆ-ಫಲಿತಾಂಶ ಮತ್ತದರ ಒಟ್ಟು ರಾಜಕೀಯ ಪರಿಣಾಮಗಳನ್ನು ಒಟ್ಟಾಗಿ ಕಂಡಾಗ ವೈಯಕ್ತಿಕವಾಗಿ ನನಗೆ ಎದ್ದು ಕಾಣಿಸಿದ್ದು, ಪ್ರತಿಪಕ್ಷಗಳ ಸಮಗ್ರ ತಂತ್ರಗಾರಿಕೆಯ ಕೊರತೆ. ಸಂಪೂರ್ಣ ಬಹುಮತ ಹೊಂದಿರುವ ಸರ್ಕಾರವೊಂದು ತನ್ನ ಅಭ್ಯರ್ಥಿಯನ್ನು ಸ್ಪೀಕರ್ ಹುದ್ದೆಯಲ್ಲಿ ಕುಳ್ಳಿರಿಸಿರುವಾಗ, ಆ ಸ್ಪೀಕರ್ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುವ ಸಾಧ್ಯತೆ ಶೂನ್ಯ. ಅದು ಗೊತ್ತಿದ್ದೂ ಅವಿಶ್ವಾಸ ಮಂಡಿಸಿದ ಮೇಲೆ ಮಂಡಿಸಿದ ಉದ್ದೇಶ ಈಡೇರಿಸುವ ಗುರಿ ತಲುಪಬೇಕಿತ್ತಲ್ಲವೆ, ತಲುಪುವುದು ಸಾಧ್ಯ ಆಗಿದೆಯೆ.

ಸದನದಲ್ಲಿ ಚರ್ಚೆಗಳನ್ನು ಒಟ್ಟಾಗಿ ಗಮನಿಸಿದಾಗ ನನಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲರೂ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡರು ಎಂದೇ ಅನ್ನಿಸುತ್ತದೆ. ಸದನದಲ್ಲಿ ಮಾತನಾಡಿದವರಿಗೆ ತಮ್ಮ ಗುರಿ ಸರ್ಕಾರವೇ, ಸ್ಪೀಕರ್ ಓಂ ಬಿರ್ಲಾ ಅವರೆ ಅಥವಾ ಡೆಪ್ಯುಟಿ ಸ್ಪೀಕರ್ ಸ್ಥಾನ ಖಾಲಿ ಇರುವುದೆ, LoP ಗೆ ಮಾತನಾಡುವ ಅವಕಾಶ ನಿರಾಕರಿಸಿರುವುದೆ, ಎಂಬುದು ಖಚಿತ ಇದ್ದಂತಿರಲಿಲ್ಲ. ಜೊತೆಗೆ, ಮಾತುಗಳಲ್ಲಿ ಆರ್ಟಿಕ್ಯುಲೇಷನ್ ಕೊರತೆ, ಟ್ರೋಲ್ ಶೈಲಿಯ ಮಾತುಗಳು ಹೆಚ್ಚು ಕಾಣಿಸಿದವು. ಹೀಗೆ ವಾಗ್ದಾಳಿಗಳು ಚಲ್ಲಾಪಿಲ್ಲಿ ಆದದ್ದನ್ನೇ ಟ್ರೆಷರಿ ಬೆಂಚ್ ತನ್ನ ಅನುಕೂಲಕ್ಕೆ ಬಳಸಿಕೊಂಡಂತೆ ಅನ್ನಿಸಿತು.
ಟ್ರೆಷರಿ ಬೆಂಚ್ ಈ ಅವಕಾಶವನ್ನು ಬಹಳ ಚೆನ್ನಾಗಿಯೇ ಬಳಸಿಕೊಂಡು, ನೇರವಾಗಿ ವಿರೋಧ ಪಕ್ಷದ ನಾಯಕರನ್ನೇ (LoP) ಅವರನ್ನೇ ಗುರಿ ಮಾಡಿ ಪ್ರತಿದಾಳಿ ನಡೆಸಿತು. ಅದಕ್ಕೆ ಸ್ಪೀಕರ್ ಕುರ್ಚಿಯಲ್ಲಿ ಕುಳಿತವರೂ ಸಾಕಷ್ಟು ಪೂರಕವಾಗಿಯೇ ಸಾತ್ ಕೊಡುವ ಮೂಲಕ, ಪ್ರತಿಪಕ್ಷಗಳು ಎತ್ತಿದ ಪ್ರಶ್ನೆ ಪ್ರಸ್ತುತವಾದುದಾದರೂ ವಾದ ಮಂಡನೆ ನಿಖರವಾಗಿ ಆಗಲಿಲ್ಲ ಎಂಬುದನ್ನು ಸಾಬೀತು ಮಾಡಿದರು. ಕಾಂಗ್ರೆಸ್ನ ಮನೀಷ್ ತಿವಾರಿ ಒಂದು ಹಂತದಲ್ಲಿ ಇದನ್ನು ಬಾಯಿ ಬಿಟ್ಟು ಹೇಳಿಯೂ ಬಿಟ್ಟರು.
ನನಗಂತೂ ಒಟ್ಟಿನಲ್ಲಿ ಈ ಇಡಿಯ ಪ್ರಹಸನ, ಸ್ಪೀಕರ್ ಅವರಿಗೆ ಕನ್ನಡಿ ತೋರಿಸುವ ಬದಲು, LoP ಮೇಲೆ ಟ್ರೆಷರಿ ಬೆಂಚ್ ದಾಳಿ ನಡೆಸುವ ವಿಲಕ್ಷಣ ವಿದ್ಯಮಾನಕ್ಕೆ ಹಾದಿ ತೆರೆಯಿತು ಅನ್ನಿಸಿತು. ಜೊತೆಗೆ, ಆಡಳಿತ ಪಕ್ಷವು ಈ ಅವಿಶ್ವಾಸಕ್ಕೆ ನೀಡಿದ ಮಹತ್ವ, ಪ್ರಧಾನಿಯವರ ಗೈರಿನಲ್ಲಿ ಸಾಂಕೇತಿಕವಾಗಿ ಪ್ರದರ್ಶನಗೊಂಡಿತು.
ಸಂಸತ್ತಿನಲ್ಲಿ ಪ್ರತಿಪಕ್ಷಗಳು ಇಂತಹ ಘಟನೆಗಳಿಂದ ಪಾಠ ಕಲಿಯದಿದ್ದರೆ, ಇದು ಅವರ ಅಸಾಮರ್ಥ್ಯವನ್ನೇ ಬಿಂಬಿಸುತ್ತದೆ. ಸದನದಲ್ಲಿ ಏನನ್ನು ನಿರೀಕ್ಷಿಸಬೇಕು ಎಂಬುದು ಗೊತ್ತಿರುವಾಗ, ಅದಕ್ಕೆ ಸಿದ್ಧರಾಗಿರುವುದು ಪ್ರತಿಪಕ್ಷಗಳ ಜವಾಬ್ದಾರಿ ಆಗಿತ್ತು. ಅಲ್ಲಿ ಅವರು ಸೋತಿದ್ದಾರೆ.
ಕಡೇಪಕ್ಷ ಈಗ ಚುನಾವಣಾ ಆಯೋಗದ ಮುಖ್ಯ ಕಮಿಷನರ್ ಅವರ ಮೇಲೆ ಅವಿಶ್ವಾಸ ಗೊತ್ತುವಳಿಯ ವೇಳೆಗಾದರೂ ಪ್ರತಿಪಕ್ಷಗಳು “ಆರ್ಕೆಸ್ಟ್ರೇಟೆಡ್” ಪ್ರಯತ್ನ ನಡೆಸಬೇಕು. ಇಲ್ಲದಿದ್ದರೆ, ಇಂತಹ ಅವಕಾಶಗಳ ಗುರುತ್ವವೇ ಇಲ್ಲದಾಗುವ ಅಪಾಯ ಇದೆ. ಅದಕ್ಕೇ ಆರಂಭದಲ್ಲೇ ಹೇಳಿದ್ದು- ಕ್ಲೂಲೆಸ್ ರಾಜಕೀಯಕ್ಕೀಗ ಅವಕಾಶ ಇಲ್ಲ ಎಂದು.
ರಾಜಾರಾಂ ತಲ್ಲೂರು – ಹಿರಿಯ ಪತ್ರಕರ್ತ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/parliament-no-confidence-motion-opposition-s-lack-of-strategy-shows-there-s-no-room-for-clueless-pol-446919.html. xn--babytilbehr-pgb.com does not claim ownership of this content. All rights remain with the original publisher.
