
India
oi-Shiddalingesh S
ನವದೆಹಲಿ: ಸರ್ಪೇಸಿ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ರಾಜ್ಯದಲ್ಲಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಹಾಸನ ಜಿಲ್ಲೆಯ ಕಾಫಿ ಬೆಳೆಗಾರರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರು ಎದುರಿಸುತ್ತಿರುವ ಹಣಕಾಸಿನ ತೊಂದರೆಗಳು, ಸರ್ಪೇಸಿ ಕಾಯ್ದೆಯ ಪರಿಣಾಮಗಳು ಮತ್ತು ವನ್ಯಜೀವಿ-ಮಾನವ ಸಂಘರ್ಷ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳತ್ತ ಗಮನ ಸೆಳೆದಿದ್ದಾರೆ.
ಸಂಸತ್ ಭವನದ ಕಚೇರಿಯಲ್ಲಿ ಕಳೆದ ಸೋಮವಾರ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪಿಯೂಷ್ ಗೋಯೆಲ್ ಅವರನ್ನು ಭೇಟಿಯಾದ ಬೆಳೆಗಾರರು ಸರ್ಪೇಸಿ ಕಾಯ್ದೆಯಿಂದ ಸಣ್ಣ, ಮಧ್ಯಮ ಗಾತ್ರದ ಕಾಫಿ ಹಿಡುವಳಿದಾರರು ಅತೀವ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬ್ಯಾಂಕುಗಳು ಮತ್ತು ಆನ್ ಲೈನ್ ಹರಾಜಿನಲ್ಲಿ ಭಾಗವಹಿಸುವ ವಿದೇಶಿ ಬಿಡ್ಡರುಗಳ ಶಾಮೀಲಿನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಕ್ಕೂ ನಮ್ಮಲ್ಲಿ ಹಣವಿಲ್ಲ ಎಂದು ಅಲವತ್ತುಕೊಂಡರು.

ಮಾಜಿ ಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಸಂಸದರಾದ ತೇಜಸ್ವಿ ಸೂರ್ಯ, ಮಲ್ಲೇಶ್ ಬಾಬು, ಮಾಜಿ ಶಾಸಕ ಲಿಂಗೇಶ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಬೆಳೆಗಾರರು ಇದ್ದ ನಿಯೋಗದ ನೇತೃತ್ವ ವಹಿಸಿದ್ದ ಸಚಿವ ಕುಮಾರಸ್ವಾಮಿ ಅವರು ಸರ್ಪೇಸಿ ಕಾಯ್ದೆಯಿಂದ ಈಗಾಗಲೇ ಕಾಫಿ ಬೆಳೆಗಾರರು ಅನೇಕ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಣಕಾಸು ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಹೇಗಾದರೂ ಮಾಡಿ ಈ ಸಂಕಷ್ಟದಿಂದ ಕಾಫಿ ಬೆಳೆಗಾರರನ್ನು ಪಾರು ಮಾಡಬೇಕು ಎಂದು ಕೋರಿದರು.
ವಿದೇಶಿ ಬಿಡ್ಡರುಗಳು ಆನ್ ಲೈನ್ ಹರಾಜಿನಲ್ಲಿ ಭಾಗಿಯಾಗುವುದನ್ನು ತಡೆಯುವ ಬಗ್ಗೆ ವಿತ್ತ ಸಚಿವರು ಭರವಸೆ ನೀಡಿದ್ದಾರೆ. ತಾವೂ ಈ ನಿಟ್ಟಿನಲ್ಲಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಬೇಕು. ಸಾವಿರಾರು ಕಾಫಿ ಬೆಳೆಗಾರರಿಗೆ ಇದರಿಂದ ಸಂಕಷ್ಟ ಎದುರಾಗಿದೆ. ಸಾಲ ಮಾಡಿದ ತಪ್ಪಿಗೆ ತಮಗೆ ಗೊತ್ತಿಲ್ಲದೆಯೇ ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ವಾಣಿಜ್ಯ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪಿಯೂಶ್ ಗೋಯೆಲ್ ಅವರು ಈ ಬಗ್ಗೆ ತಮ್ಮ ಇಲಾಖೆಯಿಂದಲೂ ಪರಿಶೀಲನೆ ನಡೆಸಲಾಗುವುದು ಹಾಗೂ ವಿತ್ತ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಾಗೆಯೇ ಕಾಫಿ ಬೆಳೆಗಾರರು ಎದುರಿಸುತ್ತಿರುವ ವನ್ಯಜೀವಿ-ಮಾನವ ಸಂಘರ್ಷದ ಬಗ್ಗೆಯೂ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವಾಣಿಜ್ಯ ಸಚಿವರ ಗಮನ ಸೆಳೆದರು.
ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ರೈತರ ಬೆಳೆಗಳ ಮೇಲೆ ಆನೆಗಳ ದಾಳಿ ವಿಪರೀತವಾಗಿದೆ. ಈ ಸಂದರ್ಭದಲ್ಲಿ ಮಾನವ ಸಾವುಗಳು ಸಾಕಷ್ಟು ಸಂಭವಿಸುತ್ತಿವೆ. ಇದನ್ನು ತಪ್ಪಿಸುವ ಬಗ್ಗೆ ಕೆಲ ದಿನಗಳ ಹಿಂದೆ ಕೇಂದ್ರದ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚಿಸಲಾಗಿದೆ. ಈ ಬಗ್ಗೆಯೂ ತಮ್ಮ ನೆರವು ಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಈ ಮನವಿಗೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಗೋಯೆಲ್ ಅವರು ಈ ಬಗ್ಗೆ ಅತ್ಯಂತ ತ್ವರಿತವಾಗಿ ಅರಣ್ಯ ಸಚಿವರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/sarfaesi-act-impact-kumaraswamy-urges-relief-for-distressed-coffee-growers-in-karnataka-know-more-447527.html. xn--babytilbehr-pgb.com does not claim ownership of this content. All rights remain with the original publisher.
