
Karnataka
oi-Hitesh Y
ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿದ್ದ ನಾಡೋಜ ಗೌರವವನ್ನು ಪದವಿಯನ್ನು ನಿರಾಕರಣೆ ಮಾಡಿಲ್ಲ. ಯಾರು ಪದವಿಪ್ರದಾನ ಮಾಡುವುದಿತ್ತೋ ಅವರಿಂದ ಅರ್ಹತಾ ಪತ್ರ ಪಡೆಯಲು ನಾನು ಸಿದ್ಧನಿರಲಿಲ್ಲವಾದ್ದರಿಂದ ನಾನು ಹೋಗಿ ಅರ್ಹತಾ ಪತ್ರ ಸ್ವೀಕರಿಸಿಲ್ಲ ಎಂದು ಸಾಹಿತಿ, ಪ್ರಾಧ್ಯಪಕ ಡಾ.ಜಿ ರಾಮಕೃಷ್ಣ (Ramakrishna Gampalahalli)ಗಂಪಲಹಳ್ಳಿ ಅವರು ಹೇಳಿದ್ದಾರೆ. ಈ ವಿಚಾರವಾಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ ಹಂಪಿ, ನನಗೆ ನೀಡಿದ ನಾಡೋಜ ಗೌರವದ ಬಗ್ಗೆ ಕೆಲವು ಸಂವಾದಗಳು ಜರುಗಿವೆ. ಆ ಬಗ್ಗೆ ಒಂದು ವಿವರಣೆ ನೀಡಬಯಸುತ್ತೇನೆ. ಈ ವಿವಿ ಜೊತೆ ನನಗೆ ದೀರ್ಘಕಾಲದ ಸಂಬಂಧವಿದೆ. 30 ವರ್ಷಗಳ ಹಿಂದೆ 2 ವರ್ಷ ನಾನಲ್ಲಿ ಸಂದರ್ಶಕ ಪ್ರಾಧ್ಯಪಕನಾಗಿದ್ದು “ಭಾರತೀಯ ವಿಜ್ಞಾನದ ಹಾದಿ ” ಪುಸ್ತಕವನ್ನು ಬರೆದಿದ್ದು ಅದನ್ನು ವಿಶ್ವವಿದ್ಯಾಲಯ ಪ್ರಕಟಿಸಿದೆ. ಮೂರು ಆವೃತ್ತಿಗಳು ಬಂದಿವೆ. ಅಲ್ಲಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಕೆಲವು ಸಮಸ್ಯೆಗಳು ತೋರಿಬಂದಾಗ ವಿವಿಯ ಆಹ್ವಾನದ ಮೇರೆಗೆ ಮಧ್ಯಪ್ರವೇಶ ಮಾಡಿದ್ದೇನೆ. ಅಲ್ಲಿಯ ಬಹುತೇಕ ಅಧ್ಯಾಪಕರು ನನಗೆ ಮಿತ್ರರು. ಅಲ್ಲಿಯ ಸಿಂಡಿಕೆಟ್ ನನಗೆ ಗೌರವಾರ್ಥ ‘ನಾಡೋಜ’ ಪದವಿ ನೀಡಿದರೆ ನಾನದನ್ನು ಗೌರವವೆಂದು ಪರಿಗಣಿಸುತ್ತೇನೆ, ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಮುಂದುವರಿದು ಬೇರೇನೋ ಕಾರಣಕ್ಕೆ ನಾನು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿಲ್ಲ. ಮಾನ್ಯ ಕುಲಪತಿಗಳಿಗೆ ಪತ್ರ ಬರೆದು ಗೌರವ ಸ್ವೀಕರಿಸುವುದಾಗಿ ಮೊದಲೇ ತಿಳಿಸಿದ್ದೇನೆ. ಪದವಿ ಪ್ರದಾನ ಸಮಾರಂಭಕ್ಕೆ ಹೋಗದಿರುವುದು ಪದವಿ ನಿರಾಕರಣೆಯಲ್ಲ. ಯಾರು ಪದವಿಪ್ರದಾನ ಮಾಡುವುದಿತ್ತೋ ಅವರಿಂದ ಅರ್ಹತಾ ಪತ್ರ ಪಡೆಯಲು ನಾನು ಸಿದ್ಧನಿರಲಿಲ್ಲವಾದ್ದರಿಂದ ನಾನು ಹೋಗಿ ಅರ್ಹತಾ ಪತ್ರ ಸ್ವೀಕರಿಸಿಲ್ಲ, ಆಷ್ಟೇ. ಕನ್ನಡ ವಿವಿ ಬಗ್ಗೆ ನನಗೆ ಆಗಾಧ ಗೌರವವಿದೆ, ಅದರೊಡನೆ ಸಂಬಂಧ ನನಗೆ ಸದಾ ಆಪ್ಯಾಯಮಾನವೇ. ಈಗಿನ ಕುಲಪತಿಗಳನ್ನು ನಾನು ಅತ್ಯಂತ ಗೌರವದಿಂದ ಕಾಣುತ್ತೇನೆ. ಅವರ ಮುತ್ಸದ್ದಿತನವನ್ನು ಆದರಿಸುತ್ತೇನೆ. ಅಲ್ಲಿಯ ಇತರರೆಲ್ಲಾ ನನ್ನ ಸ್ನೇಹ – ಗೌರವಗಳಿಗೆ ಪಾತ್ರರು. ಹೀಗಿರುವಾಗ ವಿಶ್ವವಿದ್ಯಾಲಯ ನೀಡುವ ಗೌರವವನ್ನು ತಿರಸ್ಕರಿಸುವ ಸಾಧ್ಯತೆ ಏನೂ ಇಲ್ಲ. ಹೋಗಿ ಗೌರವ ಸ್ವೀಕರಿಸದಿರಲು ಬೇರೇನೋ ಒಂದು ಪ್ರಬಲ ಕಾರಣವಿದೆ, ಅಷ್ಟೇ.
ರಾಜ್ಯದ ಈಗಿನ ರಾಜ್ಯಪಾಲರಿಂದ ನಾನು ಗೌರವ ಸ್ವೀಕರಿಸಲು ಸಿದ್ಧನಿರಲಿಲ್ಲ, ಈಗಲೂ ಇಲ್ಲ. ಅದಕ್ಕೆ ಕಾರಣವೂ ಇಲ್ಲಿ ಅಪ್ರಸ್ತುತ. ಕನ್ನಡದ ವಿಶ್ವವಿದ್ಯಾಲಯ ಮತ್ತು ಅದು ನೀಡುವ ಗೌರವವನ್ನು ನಾನು ಸದಾ ಸ್ವಾಗತಿಸುತ್ತೇನೆ, ಅದರಿಂದ ಪುಲಕಿತನಾಗುತ್ತೇನೆ. ಅಲ್ಲಿಯ ಸರ್ವರಿಗೂ ಇದನ್ನು ತಿಳಿಸಿದ್ದೇನೆ ಮತ್ತು ಅವರೆಲ್ಲಾ ಅದನ್ನು ಮಾನ್ಯ ಮಾಡಿದ್ದಾರೆಂದು ಭಾವಿಸುತ್ತೇನೆ. ಅವರೆಲ್ಲರಿಗೆ ಮತ್ತು ನನ್ನೆಲ್ಲ ಸ್ನೇಹಿತ – ಸ್ನೇಹಿತೆಯರಿಗೆ ಇದನ್ನು ವಿನಯದಿಂದ ಅರುಹಬಯಸುತ್ತೇನೆ. ನಾನು ಯಾರ ಕೈಯಿಂದ ಪ್ರಶಸ್ತಿಪತ್ರ ಪಡೆಯಬೇಕಿತ್ತೋ ಅವರಿಂದ ಪಡೆಯಲಿಲ್ಲ ಮತ್ತು ಮುಂದೆಯೂ ಪಡೆಯುವುದಿಲ್ಲ. ನಮ್ಮ ರಾಜ್ಯದ ನಾಗರಿಕರು ಈ ತೀರ್ಮಾನವನ್ನು ಸ್ವಾಗತಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಎಲ್ಲರಿಗೂ ನಮಸ್ಕಾರ ಎಂದಿದ್ದಾರೆ.
ಗೌರವಕ್ಕೆ ಧನ್ಯವಾದ ಅರ್ಪಿಸಿದ ಡಾ.ಜಿ ರಾಮಕೃಷ್ಣ
ಇನ್ನು ಡಾ.ಜಿ ರಾಮಕೃಷ್ಣ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಗೌರವಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ನನ್ನ ಎಲ್ಲಾ ಆತ್ಮೀಯ ಗೆಳೆಯರಿಗೆ ನಮಸ್ಕಾರ. ತಾವೆಲ್ಲರೂ ಸಂಭ್ರಮಿಸಿ ನನಗೆ ಅಭಿನಂದನೆಗಳನ್ನು ತಿಳಿಸಿದ್ದೀರಿ. ಅದಕ್ಕಾಗಿ ನಿಮಗೆಲ್ಲಾ ನಾನು ಕೃತಜ್ಞ. ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ವಂದನೆಗಳನ್ನು ತಿಳಿಸಲು ಸಾಧ್ಯವಾಗದು ದಕ್ಕೆ ನಿಮ್ಮೆಲ್ಲರ ಕ್ಷಮೆ ಬೇಡುತ್ತೇನೆ. ನಿಜಕ್ಕೂ ನನಗೆ ಮನತುಂಬಿಬರುವಷ್ಟು ಮಾತುಗಳನ್ನು ನನಗೆ ಹೇಳಿದ್ದೀರಿ. ಅದೆಲ್ಲಕ್ಕೂ ನಾನು ಅರ್ಹನಾಗಲು ಯತ್ನಿಸುತ್ತೇನೆ. ಈಗ ನೀಡಲಾಗಿರುವ ಗೌರವಕ್ಕೆ ಪಾತ್ರನಾಗಲು ಯತ್ನಿಸುತ್ತೇನೆ. ಅಂತೆಯೇ ಅಭಿನಂದನೆಗಳನ್ನು ಸೂಚಿಸಿದ್ದಕ್ಕೆ ಎಲ್ಲರಿಗೂ ಆಭಾರಿಯಾಗಿದ್ದೇನೆ. ಕನ್ನಡ ವಿಶ್ವವಿದ್ಯಾಲಯದೊಡನೆ ಆರಂಭದಿoದಲೂ ನನಗೆ ಸಂಪರ್ಕವಿದೆ. ಎರಡು ವರ್ಷ ಸಂದರ್ಶಕ ಪ್ರಾಧ್ಯಾಪಕನಾಗಿದ್ದೆ, ಆಗಬರೆದ ಪುಸ್ತಕವು ಮೂರು ಮುದ್ರಣಗಳನ್ನು ಕಂಡಿದೆ, ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದೆ. ಬೇರೆಷ್ಟೋ ಅಲ್ಲಿಯ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದೇನೆ. ಇಂದಿನ ಕುಲಪತಿಗಳು ಹಾಗೂ ಇತರ ಎಲ್ಲಾ ಸದಸ್ಯರೂ ಅಭಿಮಾನದಿಂದ ನನಗೆ ಗೌರವ ಸಲ್ಲಿಸಿದ್ದಾರೆ. ಎಲ್ಲರಿಗೂ ನಾನು ಋಣಿ. ಮತ್ತೊಮ್ಮೆ ಎಲ್ಲಾ ಆತ್ಮೀಯರಿಗೂ ನನ್ನ ನಮಸ್ಕಾರಗಳು ಎಂದೂ ಅವರು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/g-ramakrishna-clarifies-did-not-reject-kannada-university-hampi-nadoja-honour-refused-to-accept-it-445103.html. xn--babytilbehr-pgb.com does not claim ownership of this content. All rights remain with the original publisher.
