
India
oi-Madhusudhan KR
Holi Celebration: ದೆಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಬಣ್ಣಗಳ ಹಬ್ಬವೆಂದೇ ಕರೆಯಲ್ಪಡುವ ಈ ಉತ್ಸವದಲ್ಲಿ ಜನರು ಪರಸ್ಪರ ಬಣ್ಣ ಹಚ್ಚಿಕೊಂಡು, ಸಂಗೀತ ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳೊಂದಿಗೆ ಸಂತೋಷ ಹಂಚಿಕೊಳ್ಳುತ್ತಾರೆ. ಆದರೆ, ಕೆಲವೆಡೆ ಈ ಸಂಭ್ರಮಾಚರಣೆಯ ನಡುವೆ ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹರಿಯಾಣದಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಅಮಾನವೀಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೀಡಿಯೊದಲ್ಲಿನ ದೃಶ್ಯಗಳ ಪ್ರಕಾರ, ಹಸುವೊಂದಕ್ಕೆ ಬಲವಂತವಾಗಿ ಮದ್ಯ ಕುಡಿಸಿ, ಅಮಲಿನ ಸ್ಥಿತಿಯಲ್ಲಿ ಗಾಡಿ ಎಳೆಯುವಂತೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಗಾಡಿಯ ಮೇಲೆ ಕೆಲವರು ಕುಳಿತಿರುವುದು ಹಾಗೂ ಇಬ್ಬರು ವ್ಯಕ್ತಿಗಳು ಪ್ರಾಣಿಯ ಬಾಯಿಯನ್ನು ಬಲವಂತವಾಗಿ ತೆರೆದು ಹೆಂಡ ಸುರಿಸುತ್ತಿರುವುದು ದೃಶ್ಯಗಳಲ್ಲಿ ಕಾಣಿಸುತ್ತದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು streetdogsofbombay ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ರೀತಿಯ ಘಟನೆಗಳು ಹಬ್ಬದ ನಿಜವಾದ ಅರ್ಥವನ್ನು ಮಂಕಾಗಿಸುತ್ತವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪ್ರಾಣಿಗಳ ಮೇಲೆ ಅಮಾನವೀಯ ರೀತಿಯಲ್ಲಿ ಇಂತಹ ಕೃತ್ಯಗಳನ್ನು ಮಾಡುವುದು ಕಾನೂನುಬಾಹಿರವಾಗಿದೆ. ಪ್ರಾಣಿಹಿತ ಕಾಯ್ದೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಹಬ್ಬದ ಸಂಭ್ರಮದ ಹೆಸರಿನಲ್ಲಿ ಯಾವುದೇ ಜೀವಿಗೆ ಹಾನಿ ಮಾಡುವಂತಿಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತರ ಒತ್ತಾಯವಾಗಿದೆ.
ಹೋಳಿ ಹಬ್ಬವು ಹಾಡು-ನೃತ್ಯ, ಹಾಗೂ ಬಣ್ಣ ಎರಚುವುದು ಸೇರಿದಂತೆ ಮೊದಲಾದ ಸಾಂಪ್ರದಾಯಿಕ ತಿನಿಸುಗಳೊಂದಿಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಳ್ಳುವ ದಿನವಾಗಿರಬೇಕು. ಹಬ್ಬದ ಅರ್ಥವನ್ನು ಉಳಿಸಿಕೊಂಡು, ಪ್ರಾಣಿಗಳಿಗೂ ಮಾನವೀಯತೆ ತೋರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಂಭ್ರಮಾಚರಣೆ ವೇಳೆ ಸುರಕ್ಷತೆ ಮತ್ತು ಮಾನವೀಯತೆ ಎರಡನ್ನೂ ಕಾಪಾಡಿಕೊಳ್ಳುವುದು ಅತ್ಯಗತ್ಯ. ಹಬ್ಬವು ಎಲ್ಲರಿಗೂ ಸಂತೋಷ ತರುವಂತಾಗಲಿ, ಯಾವುದೇ ಜೀವಿಗೆ ನೋವು ತರುವಂತಾಗಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪ್ರಾಣಿಗಳಿಗೆ ಚಿತ್ರಹಿಂಸೆ ಕೊಡುವುದು ಅಪರಾಧ
ಪ್ರಾಣಿಗಳು ಪ್ರಕೃತಿಯ ಅವಿಭಾಜ್ಯ ಅಂಗ. ಪರಿಸರ ಸಮತೋಲನವನ್ನು ಕಾಪಾಡುವುದರಲ್ಲಿ ಅವುಗಳ ಪಾತ್ರ ಮಹತ್ವದ್ದು. ಕಾಡುಪ್ರಾಣಿಗಳು ಅರಣ್ಯ ಪರಿಸರವನ್ನು ರಕ್ಷಿಸುತ್ತವೆ. ನಾಡಿನ ಪ್ರಾಣಿಗಳು ಮಾನವನ ಜೀವನಶೈಲಿಗೆ ನೆರವಾಗುತ್ತವೆ. ಯಾವುದೇ ಪ್ರಾಣಿಗಳಿಗೆ ಚಿತ್ರಹಿಂಸೆ ಕೊಡುವುದು ಕಾನೂನುಬಾಹಿರವಾಗಿದ್ದು, ಪ್ರಾಣಿಹಿತ ಕಾಯ್ದೆಗಳಡಿ ಶಿಕ್ಷಾರ್ಹ ಅಪರಾಧ ಆಗಲಿದೆ.
ಪ್ರಾಣಿಗಳನ್ನು ರಕ್ಷಿಸಲು ಸರ್ಕಾರ ಮತ್ತು ಅನೇಕ ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ದತ್ತು ಪಡೆಯುವ ಸಂಸ್ಕೃತಿ, ತುರ್ತು ಚಿಕಿತ್ಸಾ ಸೇವೆಗಳು ಇವುಗಳ ಮೂಲಕ ಪ್ರಾಣಿಗಳ ಕಲ್ಯಾಣಕ್ಕೆ ಒತ್ತು ನೀಡಲಾಗುತ್ತಿದೆ. ಮಕ್ಕಳಿಂದಲೇ ಪ್ರಾಣಿಗಳ ಬಗ್ಗೆ ಸಹಾನುಭೂತಿ ಬೆಳೆಸುವುದು ಅತ್ಯಂತ ಅಗತ್ಯ. ಹಬ್ಬಗಳು ಅಥವಾ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲೂ ಪ್ರಾಣಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಪರಿಸರದೊಂದಿಗೆ ಹೊಂದಾಣಿಕೆ ಸಾಧಿಸಿ, ಎಲ್ಲಾ ಜೀವಿಗಳಿಗೂ ಸುರಕ್ಷಿತ ಬದುಕು ಕಲ್ಪಿಸುವುದು ಸಮಾಜದ ಒಟ್ಟಾರೆ ಹೊಣೆಗಾರಿಕೆಯಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/holi-celebration-marred-by-alleged-animal-cruelty-incident-in-haryana-video-viral-on-social-media-445807.html. xn--babytilbehr-pgb.com does not claim ownership of this content. All rights remain with the original publisher.
