
Karnataka
oi-Pragathi S
ಮಂಗಳೂರು: ಕರ್ನಾಟಕದ ಆರೋಗ್ಯ ವಲಯಕ್ಕೆ ಎಚ್ಚರಿಕೆಯ ಗಂಟೆಯೆಂಬಂತೆ, ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಲೋಕಸಭೆಯಲ್ಲಿ ಮಂಡಿಸಲಾದ ಇತ್ತೀಚಿನ ದತ್ತಾಂಶಗಳ ಪ್ರಕಾರ, 2020-21 ರಿಂದ 2024-25ರ ಅವಧಿಯಲ್ಲಿ ದಕ್ಷಿಣ ಕನ್ನಡ, ಕಲಬುರಗಿ ಮತ್ತು ಹಾಸನ ಜಿಲ್ಲೆಗಳು ಕ್ಯಾನ್ಸರ್ ಪತ್ತೆ ಹಚ್ಚುವಿಕೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿವೆ. ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಪ್ರಕರಣಗಳ ಮೇಲೆ ನಡೆಸಲಾದ ತಪಾಸಣೆಯಲ್ಲಿ ಈ ಅಂಕಿಅಂಶಗಳು ಬೆಳಕಿಗೆ ಬಂದಿವೆ.
ದಕ್ಷಿಣ ಕನ್ನಡದಲ್ಲಿ ದಿಢೀರ್ ಏರಿಕೆ
ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು 3,432 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಗಮನಾರ್ಹ ಸಂಗತಿಯೆಂದರೆ, ಈ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿರುವುದು 2024-25ರ ಸಾಲಿನಲ್ಲಿ. 2022-23ರಲ್ಲಿ 16 ಲಕ್ಷಕ್ಕೂ ಹೆಚ್ಚು ಜನರನ್ನು ತಪಾಸಣೆ ನಡೆಸಿದ್ದರೂ ಕೇವಲ 18 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, 2024-25ರಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ 3,328 ಪ್ರಕರಣಗಳು ದೃಢಪಟ್ಟಿವೆ. ತಪಾಸಣೆಯ ನಿಖರತೆ ಮತ್ತು ವರದಿ ಮಾಡುವಿಕೆಯಲ್ಲಿನ ಬದಲಾವಣೆಗಳು ಇದಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಇನ್ನುಳಿದಂತೆ ಕಲಬುರಗಿ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಒಟ್ಟು 3,397 ಪ್ರಕರಣಗಳು ಮತ್ತು ಹಾಸನದಲ್ಲಿ 2,436 ಪ್ರಕರಣಗಳು ದಾಖಲಾಗಿವೆ. ಹಾಸನದಲ್ಲಿ 2023-24ರಲ್ಲಿ ಗರಿಷ್ಠ 2,224 ಪ್ರಕರಣಗಳು ಕಂಡುಬಂದಿದ್ದರೆ, ನಂತರದ ವರ್ಷದಲ್ಲಿ ಅದು 99ಕ್ಕೆ ಇಳಿದಿದೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ಅತ್ಯಾಧುನಿಕ ಸೌಲಭ್ಯಗಳಿದ್ದರೂ, ವರದಿಯಾಗಿರುವ ಪ್ರಕರಣಗಳ ಸಂಖ್ಯೆ ಅಚ್ಚರಿ ಮೂಡಿಸುವಂತಿದೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 13.91 ಲಕ್ಷ ಜನರನ್ನು ತಪಾಸಣೆ ಮಾಡಲಾಗಿದ್ದು, ಕೇವಲ 292 ಪ್ರಕರಣಗಳು ಮಾತ್ರ ವರದಿಯಾಗಿವೆ.
ಬೆಳಗಾವಿ (849), ಕೋಲಾರ (844), ಚಿಕ್ಕಮಗಳೂರು (1,648) ಮತ್ತು ತುಮಕೂರು (538) ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಪ್ರಕರಣಗಳು ಕಂಡುಬಂದಿವೆ. 2024-25ರ ಸಾಲಿನಲ್ಲಿ ದಕ್ಷಿಣ ಕನ್ನಡದ ನಂತರ ಕೋಲಾರದಲ್ಲಿ 402 ಮತ್ತು ದಾವಣಗೆರೆಯಲ್ಲಿ 189 ಪ್ರಕರಣಗಳು ಪತ್ತೆಯಾಗಿವೆ.
ತಪಾಸಣೆ ನಡೆದರೂ ‘ಶೂನ್ಯ’ ಫಲಿತಾಂಶ
ಒಂದು ಕಡೆ ಪ್ರಕರಣಗಳ ಸಂಖ್ಯೆ ಏರುತ್ತಿದ್ದರೆ, ಮತ್ತೊಂದೆಡೆ ಲಕ್ಷಾಂತರ ಜನರನ್ನು ತಪಾಸಣೆ ಮಾಡಿದರೂ ‘ಶೂನ್ಯ’ ಪ್ರಕರಣ ವರದಿ ಮಾಡುತ್ತಿರುವ ಜಿಲ್ಲೆಗಳೂ ಇವೆ. ಉದಾಹರಣೆಗೆ, ಯಾದಗಿರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕ್ರಮವಾಗಿ 50,000 ಮತ್ತು 84,000 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಆದರೆ, ಸರ್ಕಾರಿ ದಾಖಲೆಗಳಲ್ಲಿ ಅಲ್ಲಿ ಒಂದೂ ಕ್ಯಾನ್ಸರ್ ಪ್ರಕರಣ ಪತ್ತೆಯಾಗಿಲ್ಲ. ವಿಜಯಪುರ ಮತ್ತು ಕೊಡಗಿನಲ್ಲಿ ತಲಾ ಎರಡು, ಮಂಡ್ಯದಲ್ಲಿ ಮೂರು ಹಾಗೂ ಉಡುಪಿ ಮತ್ತು ಬಳ್ಳಾರಿಯಲ್ಲಿ ತಲಾ ನಾಲ್ಕು ಪ್ರಕರಣಗಳು ಮಾತ್ರ ವರದಿಯಾಗಿವೆ. ಇದು ರೋಗವೇ ಇಲ್ಲದ ಸ್ಥಿತಿಯೋ ಅಥವಾ ರೋಗ ಪತ್ತೆ ಹಚ್ಚುವಲ್ಲಿನ ವೈಫಲ್ಯವೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸರ್ಕಾರದ ಮುಂದಿನ ನಡೆ ಏನು?
ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ (NP-NCD) ಅಡಿಯಲ್ಲಿ ರಾಜ್ಯ ಸರ್ಕಾರವು ತಪಾಸಣೆಯನ್ನು ಚುರುಕುಗೊಳಿಸಿದೆ. ‘ಗೃಹ ಆರೋಗ್ಯ’ ಯೋಜನೆಯಡಿ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಅಪಾಯದ ಲಕ್ಷಣಗಳು ಕಂಡುಬರುವ ವ್ಯಕ್ತಿಗಳನ್ನು ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಮತ್ತು ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (PHC) ಹೆಚ್ಚಿನ ತಪಾಸಣೆಗೆ ಕಳುಹಿಸಲಾಗುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ 19 ರಾಜ್ಯ ಕ್ಯಾನ್ಸರ್ ಸಂಸ್ಥೆಗಳು ಮತ್ತು 20 ಮೂರನೇ ಹಂತದ ಚಿಕಿತ್ಸಾ ಕೇಂದ್ರಗಳು (Tertiary Care Centers) ಕಾರ್ಯನಿರ್ವಹಿಸುತ್ತಿವೆ. 2025-26ನೇ ಸಾಲಿಗೆ 16 ಹೊಸ ಜಿಲ್ಲಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದರೂ, ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ತಜ್ಞರ (Oncologists) ಕೊರತೆ ಇರುವುದು ಚಿಕಿತ್ಸೆಗೆ ದೊಡ್ಡ ತಡೆಯಾಗಿದೆ ಎಂದು ವರದಿ ಹೇಳಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/cancer-cases-in-karnataka-dakshina-kannada-hassan-and-kalaburagi-top-the-list-in-5-years-443169.html. xn--babytilbehr-pgb.com does not claim ownership of this content. All rights remain with the original publisher.
