Sirai: ಮಾಯದ ಗಾಯದ ಅನುಭವ ಗುಚ್ಛ ಸಿರೈ ಸಿನಿಮಾ: ಶರೀಫ್‌ ಕಾಡುಮಠ ಬರಹ | Sirai Review Experience of Illusion and Inner Wounds Written by Sharif Kadumath

Entertainment

oi-Hitesh Y

Sirai: ತಮಿಳಿನಲ್ಲಿ ಈಚೆಗೆ ಬಿಡುಗಡೆಯಾದ ಸಿರೈ ಸಿನಿಮಾ ಹಲವು ಕಾರಣಕ್ಕೆ ಸುದ್ದಿಯಲ್ಲಿದೆ. ಈ ಸಿನಿಮಾದ ಕಥಾ ವಸ್ತು ಮಾತ್ರವಲ್ಲ, ಪಾತ್ರಗಳ ಬಗ್ಗೆ, ಅಭಿನಯದ ಬಗ್ಗೆಯೂ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾಯದ ಗಾಯದ ಅನುಭವ ಗುಚ್ಛ ಸಿರೈ ಸಿನಿಮಾ: ಬರಹಗಾರ ಶರೀಫ್‌ ಕಾಡುಮಠ ಅವರ ಬರಹ ಇಲ್ಲಿದೆ.

‘ಅವಳ ನಗು ಮಾಯವಾಗಿ ಐದು ವರ್ಷವಾಯ್ತು ಸರ್. ಐದು ವರ್ಷಗಳಿಂದ ಪ್ರತಿ ಬಾರಿ ಪೊಲೀಸರು ನನ್ನನ್ನು ಕೋರ್ಟಿಗೆ ಕರೆದುಕೊಂಡು ಹೋಗುವಾಗ ತಪ್ಪದೆ ಹಾಜರಾಗುತ್ತಾಳೆ. ಕೈಗೆ ಕೋಳ ತೊಡಿಸಿರುವುದು ನೋಡಿ ಕಣ್ಣೀರಾಗುತ್ತಾಳೆ. ಈ ಬಾರಿಯಾದರೂ ಒಂದೇ ಒಂದು ಸಲ ನನಗೆ ಕೋರ್ಟಿನ ಬಳಿ ದಯಮಾಡಿ ಕೋಳ ತೊಡಿಸಬೇಡಿ ಸರ್. ನನಗೆ ಅವಳ ಮುಖದಲ್ಲಿ ಒಮ್ಮೆ ನಗು ನೋಡಬೇಕಿದೆ…’

Sirai Review Experience of Illusion and Inner Wounds

ಬರವಣಿಗೆಯ ತೀವ್ರತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವ ಬಿಗಿ ನಿರೂಪಣೆಯ ಸಿನಿಮಾ ತಮಿಳಿನ ‘ಸಿರೈ’. ನಿರ್ದೇಶಕ ವೆಟ್ರಿಮಾರನ್ ಗರಡಿಯಲ್ಲಿ ಪಳಗಿದ ಸುರೇಶ್ ರಾಜಕುಮಾರಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದು. ವೆಟ್ರಿಮಾರನ್ ಅವರ ಹೆಚ್ಚಿನ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಸುರೇಶ್, ಈವರೆಗಿನ ಅನುಭವವನ್ನು ‘ಸಿರೈ’ನಲ್ಲಿ ಧಾರೆ ಎರೆದಿದ್ದಾರೆ.

ಮಲಯಾಳಂನ ‘ಜೋಸೆಫ್’, ‘ನಾಯಟ್ಟು, ‘ರೋಂತ್’, ‘ಆಫೀಸರ್ ಆನ್ ಡ್ಯೂಟಿ’ ಸಿನಿಮಾಗಳು ನೆನಪಿರಬಹುದು. ದಶಕಕ್ಕೂ ಹೆಚ್ಚು ವರ್ಷಗಳ‌ ಕಾಲ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿ, ನಂತರ ಸಿನಿಮಾ ಕ್ಷೇತ್ರಕ್ಕಿಳಿದ ಶಾಹಿ ಕಬೀರ್ ನಿರ್ದೇಶನ, ಚಿತ್ರಕಥೆ ಹೊಂದಿರುವ ಸಿನಿಮಾಗಳವು. ವಿಶೇಷವೆಂದರೆ, ‘ಸಿರೈ’ ಸಿನಿಮಾದ ಕಥೆ ಬರೆದವರು ಶಾಹಿ ಕಬೀರ್ ಅವರಿಂದ ಪ್ರೇರಿತರಾದ, ಸುಮಾರು ಹದಿಮೂರು ವರ್ಷಗಳ ಕಾಲ ಪೊಲೀಸ್ ಸೇವೆಯಲ್ಲಿದ್ದು, ನಂತರ ಸಿನಿಮಾ ಕಡೆಗೆ ಬಂದ ನಟ, ನಿರ್ದೇಶಕ ತಮಿಝ್.

Sirai Review Experience of Illusion and Inner Wounds

‘ಮಲಯಾಳಂ ಚಿತ್ರರಂಗದಲ್ಲಿ ಪೊಲೀಸ್ ವೃತ್ತಿಬದುಕಿನ ಕಥೆಗಳನ್ನು ವಾಸ್ತವ ನೆಲೆಯಲ್ಲಿ ಚಿತ್ರಿಸುವುದಕ್ಕೆ ಹೆಸರಾದ ಶಾಹಿ ಕಬೀರ್ ಸಿನಿಮಾಗಳು ನನ್ನನ್ನು ತೀವ್ರವಾಗಿ ಪ್ರಭಾವಿಸಿವೆ. ನನ್ನ ಕಥೆಗಳನ್ನು ದಿಟ್ಟತನದಿಂದ ಬರೆಯುವುದಕ್ಕೆ ಅವರ ಸಿನಿಮಾಗಳು ಧೈರ್ಯ ನೀಡಿದೆ’ ಎನ್ನುತ್ತಾರೆ ತಮಿಝ್.

ಬಹಳಷ್ಟು ವರ್ಷಗಳ ಕಾಲ ಆರೋಪಿಗಳ ರಕ್ಷಣಾ ಸಿಬ್ಬಂದಿಯಾಗಿ ಅವರನ್ನು ಕೋರ್ಟಿಗೆ ಹಾಜರುಪಡಿಸುವ ಪ್ರಕ್ರಿಯೆಯನ್ನು ವೃತ್ತಿಯ ಭಾಗವಾಗಿ ನಿರ್ವಹಿಸುತ್ತಿದ್ದ ತಮಿಝ್, ಪ್ರಯಾಣದ ಅವಧಿಯಲ್ಲಿ ಆರೋಪಿಗಳನ್ನು ಮಾತಿಗೆಳೆಯುತ್ತಿದ್ದರು. ಅವರ ಮೇಲಿರುವ ಆರೋಪ, ಘಟನೆ ಹಿನ್ನೆಲೆ, ಬದುಕಿನ ಸ್ಥಿತಿ ಎಲ್ಲವನ್ನೂ ವಿಚಾರಿಸುತ್ತಿದ್ದರು. ಅದೇ ಮಾದರಿಯಲ್ಲಿ ಈ ಸಿನಿಮಾದ ಕಥೆಯೂ ತೆರೆದುಕೊಳ್ಳುತ್ತದೆ.

ಆರೋಪಿ ವೆಲ್ಲೋರ್ ಸೆಂಟ್ರಲ್ ಜೈಲಿನಿಂದ ಆರೋಪಿ ಅಬ್ದುಲ್ ರವೂಫ್ ನನ್ನು(ಎಲ್.ಕೆ.ಅಕ್ಷಯ್ ಕುಮಾರ್) ತಿರುಚಿರಾಪಳ್ಳಿ ಕೋರ್ಟಿಗೆ ಹಾಜರುಪಡಿಸಲು ಆರೋಪಿ ರಕ್ಷಣಾ ಸಿಬ್ಬಂದಿಯ (ಎಸ್ಕಾರ್ಟ್) ಜವಾಬ್ದಾರಿ ಈ ಬಾರಿ ಕಾನ್ ಸ್ಟೆಬಲ್ ವಿ.ಕದಿವರನ್ ಗೆ (ವಿಕ್ರಂ ಪ್ರಭು) ನೀಡಲಾಗುತ್ತದೆ. ಆತನ ಜೊತೆಗೆ ಇಬ್ಬರು ಸಿಬ್ಬಂದಿಯನ್ನೂ ಕಳುಹಿಸಲಾಗುತ್ತದೆ. ಬಸ್ಸಿನಲ್ಲಿ ಆರೋಪಿಯನ್ನು ಕರೆದುಕೊಂಡು ಹೋಗುತ್ತಾರೆ. ಪ್ರಯಾಣದ ನಡುವೆ ಬಸ್ಸು ಹೋಟೆಲ್ ಪಕ್ಕ ಹತ್ತು ನಿಮಿಷ ನಿಲ್ಲಿಸಿದಾಗ, ಆರೋಪಿಯನ್ನು ಬಸ್ಸಿನಲ್ಲೇ ಇರಲು ಬಿಟ್ಟು ಪೊಲೀಸರು ಶೌಚಾಲಯಕ್ಕೆ ಹೋಗುತ್ತಾರೆ. ಕ್ಷುಲ್ಲಕ ವಿಷಯಕ್ಕೆ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರ‌ ನಡುವೆ‌ ನಡೆಯುವ ವಾಗ್ವಾದ, ಜಗಳವಾಗಿ ಎಲ್ಲ ಮುಗಿಯುವಷ್ಟರಲ್ಲಿ ಬಸ್ಸು ಊರು ಬಿಟ್ಟಿರುತ್ತದೆ. ಗನ್ ಕೂಡ ಬಸ್ಸಿನಲ್ಲೇ ಮರೆತ ಪೊಲೀಸರು ನಂತರ ಆರೋಪಿಯನ್ನು ಎಲ್ಲಿ, ಹೇಗೆ ಪತ್ತೆಹಚ್ಚುತ್ತಾರೆ, ಅಲ್ಲಿ ಏನೇನಾಗುತ್ತದೆ ಎನ್ನುವುದು ಚಿತ್ರದ ಬಹುಮುಖ್ಯ ಭಾಗವೂ ಹೌದು.

ಅಲ್ಲಿಂದ ಲಾರಿಯೊಂದರಲ್ಲಿ ಪ್ರಯಾಣ ಸಾಗುತ್ತದೆ ಪಯಣದುದ್ದಕ್ಕೂ ಆರೋಪಿಯೊಂದಿಗೆ ನಡೆಯುವ ಸಂಭಾಷಣೆ, ಆತ ಹೇಳುವ ಕಥೆ ಎಲ್ಲವೂ ಕಣ್ಣು ತೇವಗೊಳಿಸುತ್ತವೆ. ಮುಳ್ಳುಹಾಸಿನ ನಡುವೆ ಹೆಜ್ಜೆಯಿಡುತ್ತ ಸಾಗಿ ಬಂದ ಪ್ರೇಮದ ಕಥೆ ತೆರೆದಿಡುತ್ತಾನೆ ರವೂಫ್. ಅವನನ್ನು ಪ್ರತಿಬಾರಿ ಅರಸಿಕೊಂಡು ಬರುವ ಅವಳ ಹೆಸರು ಕಲೈಯರಸಿ(ಅನಿಶ್ಮಾ ಅನಿಲ್ ಕುಮಾರ್). ರವೂಫ್ ಮೇಲಿರುವ ಆರೋಪ ಆ ಕಲೈಯರಸಿಯ ತಂದೆಯ ಕೊಲೆ ಮಾಡಿದ್ದಾನೆ ಎಂಬುದು. ನಿಜಕ್ಕೂ ಅಲ್ಲಿ ನಡೆದಿದ್ದೇನು, ರವೂಫ್ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದೇಕೆ, ತಂದೆಯನ್ನು ಕೊಂದ ಆರೋಪ ಹೊತ್ತ ಪ್ರಿಯಕರನನ್ನು ಕಾಣಲು ಪ್ರತಿ ಬಾರಿ ಮಗಳು ಬರುವುದೇಕೆ ಇವೆಲ್ಲವೂ ಸಿನಿಮಾ ನೋಡಿ ತಿಳಿಯಬೇಕು.

ಸಿರೈ ವಿಶೇಷ ಅನಿಸುವುದು, ಅದು ಇಸ್ಲಾಮೊಫೋಬಿಕ್ ವ್ಯವಸ್ಥೆಯೊಳಗಿನ ಕ್ರೌರ್ಯವನ್ನು ತೆರೆದಿಡುವ ಕಾರಣಕ್ಕೆ. ಕಳೆದ ಕೆಲ ವರ್ಷಗಳಿಂದ ಪಾ.ರಂಜಿತ್, ಮಾರಿ ಸೆಲ್ವರಾಜ್, ವೆಟ್ರಿಮಾರನ್ ದಲಿತ ಸಂದರ್ಭದ ಮೇಲಿನ ಕಥೆಗಳನ್ನು ಗಟ್ಟಿಯಾಗಿ, ನಿರ್ಭಿಡೆಯಿಂದ ತೆರೆ ಮೇಲೆ‌ ತರುತ್ತಿದ್ದಾರೆ. ಧ್ವನಿಯೇ ಇಲ್ಲದೆ, ನಿರಂತರ ನಿಂದನೆಗೆ ಒಳಗಾಗುತ್ತಿರುವ ಭಾರತೀಯ ಮುಸ್ಲಿಮರ ಸದ್ಯದ ಪರಿಸ್ಥಿತಿ ಕುರಿತು ಬಗ್ಗೆ ಮಾತನಾಡುವ ಸಿನಿಮಾದ ತುರ್ತು ಬಹಳ ಇತ್ತು. ಕೆಲವೊಂದು ಸಿನಿಮಾಗಳು ಸಂದರ್ಭಗಳಿಗನುಸಾರ ಮುಸ್ಲಿಂ ಸಂವೇದನೆಯ ವಿಷಯಗಳನ್ನು ಎತ್ತಿಕೊಂಡರೂ ಕೂಡ, ಸಿರೈ ಹಲವು ವಿಷಯಗಳನ್ನು ಮೊತ್ತವಾಗಿ ಮುಂದಿಡುತ್ತದೆ. ಹಾಗಾಗಿಯೇ ಈ ಸಿನಿಮಾ ನೋಡುತ್ತಲೇ ಐದು ವರ್ಷಗಳಿಂದ ವಿಚಾರಣೆಯೇ ನಡೆಯದೆ ಅನ್ಯಾಯವಾಗಿ ಜೈಲಿನಲ್ಲಿ ಕಳೆದಯುತ್ತಿರುವ ಉಮರ್ ಖಾಲಿದ್ ನೆನಪಾಗುತ್ತಾನೆ. ಇತ್ತೀಚೆಗಷ್ಟೇ ಆರು ವರ್ಷಗಳನ್ನು ಜೈಲಿನಲ್ಲಿ ಪೂರೈಸಿದ ಶಾರ್ಜೀಲ್ ಇಮಾಮ್ ನೆನಪಾಗುತ್ತಾನೆ. ಧರ್ಮ ದಾಟಿದ ಪ್ರತಿ ಪ್ರೇಮಕಥೆಗೂ ‘ಲವ್ ಜಿಹಾದ್’ ಹಣೆಪಟ್ಟಿ ಕಡ್ಡಾಯವಾಗಿರುವುದು ನೆನಪಾಗುತ್ತದೆ. ಖಚಿತತೆಯಿಲ್ಲದ ಬದುಕು, ಕಾನೂನು ಒದಗಿಸದ ನ್ಯಾಯ, ವ್ಯವಸ್ಥೆ ನಡೆಸುವ ಅನ್ಯಾಯ, ದೌರ್ಜನ್ಯ, ಅಗ್ಗವೆನಿಸಿದ ಜೀವದ ಬೆಲೆ, ಸುಲಭವೆನಿಸಿದ ಸಾವು ಇವೆಲ್ಲವೂ ಒಮ್ಮೆ ಕಣ್ಣ ಮುಂದೆ ಸುಳಿಯುವಂತೆ ಮಾಡುತ್ತದೆ ಸಿರೈ.

ಇಲ್ಲಿ ರವೂಫ್ ನ ಪ್ರೇಮಕಥೆ, ನಿರೂಪಣೆಯ ಆರಂಭಿಕ ಹಂತದಲ್ಲಿ ಹಿಂದೂ- ಮುಸ್ಲಿಂ ಪ್ರೇಮಕಥೆಯಾಗಿ ಕಾಣಿಸಿದರೂ, ಮುಂದಕ್ಕೆ ಸಾಗುತ್ತಲೇ ಅದು ಧರ್ಮವನ್ನು ಮರೆಮಾಚಿ ಮನಸ್ಸಿಗೆ ಇಳಿಯಲು ಶುರುವಾಗುತ್ತದೆ. ಅದು ನಿಜವಾದ ಪ್ರೇಮದ ಗೆಲುವು ಹಾಗೂ ಘಮಲು ಕೂಡ ಹೌದು ಎಂದು ಸಿನಿಮಾ ಮುಗಿಯುವ ಹೊತ್ತಿಗೆ ಅರ್ಥವಾಗುತ್ತದೆ. ಅವನ ಕಾಯುವಿಕೆ, ತುಡಿತ, ಜೀವಭಯ, ಅಸಹಾಯಕತೆ, ಅಳು, ಯಾತನೆ ಎಲ್ಲವೂ ನಮ್ಮದೇ ಆಗಿಬಿಡುತ್ತವೆ. ಹೀಗೆ ರವೂಫ್ ನ ಪಾತ್ರ ಪ್ರೇಕ್ಷಕನೊಳಗೆ ಆಳವಾದ ಪರಿಣಾಮ ಮೂಡಿಸುತ್ತದೆ.

ಕಲೈಯರಸಿ ಪಾತ್ರಕ್ಕೆ ಮಲಯಾಳಂನ ಅನಿಶ್ಮಾ ಅನಿಲ್ ಕುಮಾರ್ ಆಯ್ಕೆ ಸೂಕ್ತವೇ ಹೌದು. ಪ್ರೀತಿಯ ಜೀವಜಲಕ್ಕೆ ಕಾದು ಜೀವವೊಂದು ಬಸವಳಿದು ಹೋಗುವ ರೀತಿ, ಮತ್ತೆ ಚಿಲುಮೆಯಾಗುವ ಬಗೆ ಎಲ್ಲವೂ ಆಕೆಯ ನಟನೆಯ ಮೂಲಕ ಮನ ಕರಗಿಸುತ್ತವೆ. ವಿಕ್ರಂ ಪ್ರಭು, ಅಕ್ಷಯ್ ಕುಮಾರ್ ಸಹಜ ಹಾಗೂ ಪರಿಣಾಮಕಾರಿ ನಟನೆಯ ನಡುವೆ, ಇನ್ ಸ್ಟೆಕ್ಟರ್ ಪಾತ್ರದಲ್ಲಿ ಸಣ್ಣ ಅವಧಿಗೆ ಕಾಣಿಸಿಕೊಳ್ಳುವ ಮುನ್ನಾರ್ ರಮೇಶ್ ನಟನೆ, Screen presence, ಆ ಸಂಭಾಷಣೆ, ನೋಡಿಯೇ ಅನುಭವಿಸಬೇಕು. ಜಸ್ಟಿನ್ ಪ್ರಭಾಕರನ್ ಸಂಗೀತ, ಮಾದೇಶ್ ಮಾಣಿಕ್ಕಮ್ ಸಿನಿಮಾಟೊಗ್ರಫಿ ಚಿತ್ರದ ಕಥೆಗೆ, ಗೆಲುವಿಗೆ ಸಮರ್ಥವಾಗಿ ಜೊತೆನಿಂತಿವೆ.

ಕಥೆ ಹೆಣೆದ ರೀತಿ, ಪ್ರತಿ ಭಾಗವನ್ನು ಅಚ್ಚುಕಟ್ಟಾಗಿ, ಕುತೂಹಲ ಉಳಿಸುವಂತೆ ಜೋಡಿಸಿದ ಬಗೆ, ಸಣ್ಣ ಸಣ್ಣ ನಿರೂಪಣೆಯ ಸಂದರ್ಭವನ್ನು ಕೂಡ ಪರಿಣಾಮಕಾರಿ ಭಾಷೆಯಲ್ಲಿ ಕಟ್ಟಿಕೊಟ್ಟ ನಿರ್ದೇಶಕ ಸುರೇಶ್ ಅವರ ಪ್ರತಿಭೆ ಗಮನಾರ್ಹ. ಅಂದಹಾಗೆ, ‘ಸಿರೈ’, ತಮಿಳುನಾಡಿನಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ.

ಸಿರೈ (ಜೈಲು)

ಕಥೆ- ಚಿತ್ರಕಥೆ: ತಮಿಝ್

ನಿರ್ದೇಶನ: ಸುರೇಶ್ ರಾಜಕುಮಾರಿ

ನಿರ್ಮಾಣ: ಎಸ್.ಎಸ್.ಲಲಿತ್ ಕುಮಾರ್

ಸಂಗೀತ: ಜಸ್ಟಿನ್ ಪ್ರಭಾಕರನ್

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/sirai-review-experience-of-illusion-and-inner-wounds-written-by-sharif-kadumath-442329.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo