
Karnataka
oi-Shankrappa Parangi
ವಿಜಯನಗರ: ಕರ್ನಾಟಕ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶ್ರೀ ಕೊಟ್ಟೂರು ಗುರು ಬಸವೇಶ್ವರ (ಗುರು ಕೊಟ್ಟೂರೇಶ್ವರ) ಜಾತ್ರೆಯ ಆರಂಭವಾಗಿದೆ. ಇಂದು ಫೆಬ್ರವರಿ 12ರಂದು ಶುಕ್ರವಾರ ಸಂಜೆ ಮೂಲಾ ನಕ್ಷತ್ರದಲ್ಲಿ ಅದ್ಧೂರಿ ರಥೋತ್ಸವ ಜರುಗಲಿದೆ. ಕೊಪ್ಪಳದ ಗವಿಮಠದ ಜಾತ್ರೆ ನಂತರ ಅತ್ಯಧಿಕ ಜನರು ಸೇರುವ ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ಕೊಟ್ಟೂರು ಜಾತ್ರೆಯು ಒಂದು.
ಮೂಢನಂಬಿಕೆಗೆ ಸೆಡ್ಡು ಹೊಡೆದು, ನಂಬಿದ ಭಕ್ತರಿಗೆ ವರ ಕರುಣಿಸುವ, ಕೇಳಿದ್ದು ಕೊಟ್ಟು ಕಾಪಾಡುವ ಕೊಟ್ಟೂರಲ್ಲಿ ಕೊಟ್ಟೂರು ದೊರೆಯ ಶ್ರೀ ಬಸವೇಶ್ವರ ದೇವರ ಪವಾಡಗಳು ನಡೆಯುತ್ತವೆ. ಅಂದುಕೊಂಡಿದ್ದೆಲ್ಲ ನಡೆಯುತ್ತವೆ ಎಂಬ ನಂಬಿಕೆಗಳು ಸಹಸ್ರಾರು ಭಕ್ತರಲ್ಲಿದೆ. ಈ ಜಾತ್ರೆಯು ಪ್ರತಿ ವರ್ಷ ನಡೆಯುತ್ತಿದೆ. ಇಂದು ಅದ್ಧೂರಿ ರಥೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ.

ಸಮಾನತೆಯ ಹರಿಕಾರ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಕೊಟ್ಟೂರಿಗೆ ಶರಣ ಪರಂಪರೆ ಇದೆ. ಶತಮಾನಗಳ ಇತಿಹಾಸ ಇದೆ. ಇಂಥಹ ನೆಲದಲ್ಲಿ ನಡೆಯುವ ಈ ಜಾತ್ರೆಯ ಮತ್ತೊಂದು ವಿಶೇಷತೆ ಎಂದರೆ ಮಾದಿಗ ಸಮುದಾಯ ಮಹಿಳೆಯರು ಬಂದು ತೇರಿಗೆ ಆರತಿ ಮಾಡುತ್ತಾರೆ. ಅವರ ಮನೆಯ ನೈವೇದ್ಯ ಅರ್ಪಿಸಿದ ಬಳಿಕವೇ ತೇರು ಮುಂದೆ ಸಾಗುತ್ತದೆ. ಇಲ್ಲದೆ ಹೋದರೆ ಒಂದಿಂಚು ಕದಲುವುದಿಲ್ಲ. ಇದು ಶತಮಾನಗಳಿಂದಲೂ ನಡೆದುಕೊಂಡು ಧಾರ್ಮಿಕ ಪದ್ಧತಿ, ಆಚಾರಗಳಲ್ಲಿ ಒಂದಾಗಿದೆ. ಕೊಟ್ಟೂರೇಶ್ವರನ ಜಾತ್ರೆ ವೇಳೆ ಪ್ರತಿ ವರ್ಷ ಮಾದಿಗ ಸಮುದಾಯದವರ ಮನೆಯಲ್ಲಿ ಪಶು ಕರು ಹಾಕುತ್ತದೆ. ಅದರ ಹಾಲಿನ ಗಿಣ್ಣು ಮಾಡಿ ನೈವೇಧ್ಯ ಅರ್ಪಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.
ನಿರ್ದಿಷ್ಟ ಜಾತಿ, ಧರ್ಮದವರೆನ್ನದೇ ಎಲ್ಲ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಬಾಳೆ ಹಣ್ಣು ತೇರಿಗೆ ಎಸೆದು ಭಕ್ತಿ ಅರ್ಪಿಸುತ್ತಾರೆ. ತೇರು ಸಾಗುತ್ತಿದ್ದಂತೆ ಭಕ್ತ ಸಮೂಹದಿಂದ ಹರ ಹರ ಮಹಾದೇವ ಎಂಬ ಹರ್ಷೋಧ್ಘಾರ ಮೊಳಗುತ್ತದೆ. ಇಷ್ಟಾರ್ಥ ನೆರವೇರಿಸುವಂತೆ ಕೊಟ್ಟೂರೇಶ್ವರನಲ್ಲಿ ಏಕಚಿತ್ತದಿಂದ ಭಕ್ತರು ಪ್ರಾರ್ಥಿಸುತ್ತಾರೆ. ಈ ಸುದಿನದಂದು ದೇವರ ದರ್ಶನ ಮಾಡಿ ಪುನೀತರಾಗುತ್ತಾರೆ.
ಪಾದಯಾತ್ರೆ ಮೂಲಕ ಭಕ್ತರು ಆಗಮನ, ಸಕಲ ವ್ಯವಸ್ಥೆ
ಮೂರು ದಿನಗಳ ಈ ಕೊಟ್ಟೂರು ಜಾತ್ರೆಗಾಗಿ ಅದರಲ್ಲೂ ರಥೋತ್ಸವ ಸಂಬಂಧ ವಿಜಯನಗರ ಜಿಲ್ಲೆ (ಮೊದಲಿಗೆ ಬಳ್ಳಾರಿ ಜಿಲ್ಲೆ) ಸುತ್ತಮುತ್ತಲಿನ ದಾವಣಗೆರೆ, ಹಾವೇರಿ, ಕೊಪ್ಪಳ ಹೀಗೆ ನಾನಾ ಕಡೆಗಳಿಂದ ಭಕ್ತರು ಪಾದಯಾತ್ರೆ ಮೂಲಕ ಬರುತ್ತಾರೆ. ಈ ಭಕ್ತರಿಗೆ ದಾರಿಯುದ್ಧಕ್ಕೂ ಆಯಾ ಗ್ರಾಮ, ಪಟ್ಟಣದ ಕೊಟ್ಟೂರು ಭಕ್ತರು ತಿಂಡಿ, ಊಟ, ಮಿರ್ಚಿ, ಮಂಡಕ್ಕಿ, ಉಪ್ಪಿಟ್ಟು ಹೀಗೆ ತರಹೇವಾರಿ ಪದಾರ್ಥಗಳನ್ನು ಪಾದಯಾತ್ರೆಯ ಭಕ್ತರಿಗೆ ನೀಡಲಾಗುತ್ತದೆ. ಅಲ್ಲಲ್ಲಿ ಉಚಿತ ನೀರಿನ ಬಾಟಲಿ ವ್ಯವಸ್ಥೆ, ಪಾನಕ, ಮಜ್ಜಿಗೆ, ಎಳನೀರು ವಿತರಿಸಲಾಗುತ್ತದೆ.
ವಿವಿಧೆಡೆ ಛತ್ರದ ರೀತಿಯಲ್ಲಿ ಭಕ್ತರೇ ತಾತ್ಕಲಿಕ ವ್ಯವಸ್ಥೆ ಮಾಡಿರುತ್ತಾರೆ. ಆ ದಾರಿಯಲ್ಲಿ ನಡೆದು ಕೊಟ್ಟೂರಿಗೆ ತೆರಳುವವರಿಗೆ ತಿಂಡಿ, ತಿನಿಸು ಮಾಡಿ ವಿತರಿಸಲಾಗುತ್ತದೆ. ರಥೋತ್ಸವ ದಿನ ಇಲ್ಲವೇ ಒಂದು ಮುನ್ನ ಕೊಟ್ಟೂರು ತಲುಪುವಂತೆ ಮೊದಲೇ ಯೋಜಿಸಿ ಪಾದಾಯತ್ರಿಗಳು ತಮ್ಮೂರಿನಿಂದ ಹೊರಟಿರುತ್ತಾರೆ. ಇವರಿಗೆ ರಾತ್ರಿ ಕಳೆಯಲು ಅಲ್ಲಲ್ಲಿ ವ್ಯವಸ್ಥೆ ಇರುತ್ತದೆ. ಅತ್ಯಂತ ಅಚ್ಚುಕಟ್ಟಾಗಿ ನಡೆಯುವ ಕೊಟ್ಟೂರು ಪಾದಯಾತ್ರೆ ಇದಾಗಿದೆ.
ಮದ್ಯ ಮಾರಾಟ ನಿಷೇಧ
ಕೊಟ್ಟೂರು ರಥೋತ್ಸವ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಮದ್ಯ ಮರಾಟವನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಆದೇಶಿಸಿದ್ದಾರೆ. ಭಕ್ತರಿಗೆ ತೊಂದರೆ ಆಗದಂತೆ ಸೂಕ್ತ ಬಿಗಿ ಭದ್ರತೆಯಲ್ಲಿ ಸುಗಮವಾಗಿ ಜಾತ್ರೆ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚರಿಕೆ ವಹಿಸಲು ಪೊಲೀಸರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/kottureshwara-jathre-2026-rathotsava-today-feb-12-at-kottur-vijayanagara-check-history-speciality-443407.html. xn--babytilbehr-pgb.com does not claim ownership of this content. All rights remain with the original publisher.

