‘ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ: ಸಚಿವರ ಹೇಳಿಕೆಗೆ ಡಿಕೆ ಸುರೇಶ್ ಟಾಂಗ್ | Ardent Congressmen are not Street Dogs, DK Suresh Hits Back to HC Mahadevappa Dog Statement

Karnataka

oi-Shankrappa Parangi

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರುವ ಲಕ್ಷಣಗಳು ಕಂಡು ಬರುತ್ತಿವೆ. ಸ್ವಪಕ್ಷ ಕಾಂಗ್ರೆಸ್‌ನಲ್ಲೇ ನಾಯಕರ ಪರಸ್ಪರ ಹೇಳಿಕೆಗಳು ಹೆಚ್ಚು ಸುದ್ದು ಮಾಡುತ್ತಿವೆ. ‘ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳೇ ಹೊರತು, ಬೀದಿ ನಾಯಿಗಳಲ್ಲ’ ಎಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ಹೇಳಿದ್ದಾರೆ. ಇದು ಮೂಲ ಕಾಂಗ್ರೆಸ್ಸಿಗರ ಪರ ಹಾಗೂ ವಲಸೆ ಬಂದವರ ವಿರುದ್ಧದ ಹೇಳಿಕೆ ಅಂತಲೂ ಹೊಸದೊಂದು ಚರ್ಚೆ ನಾಂದಿ ಹಾಡಿದೆ.

ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಿಎಂ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯ ಪೈಪೋಟಿ ನಡೆದಿರುವುದು ಗುಟ್ಟಾಗೇನು ಉಳಿದಿಲ್ಲ. ಉಭಯ ನಾಯಕರ ಬಣದ ಸದಸ್ಯರು ಸಹ ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದ್ದು, ತೆರೆ ಹಿಂದೆ ಕಸರತ್ತು ನಡೆಸಿದ್ದರು. ಈ ಮಧ್ಯೆ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಚಿವ ಎಚ್‌ಸಿ ಮಹಾದೇವಪ್ಪ ಅವರ ‘ನಾಯಿ ಹೇಳಿಕೆ’ ಡಿಕೆ ಬ್ರದರ್ಸ್ ಕಣ್ಣು ಕೆಂಪಾಗಿಸಿದೆ.

Ardent Congressmen

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ.ಸುರೇಶ್ ಅವರು, ‘ಎಚ್‌ಸಿ ಮಹಾದೇವಪ್ಪ ಅವರ ಹೇಳಿಕೆಗೆ ಬಗ್ಗೆ ನನಗೆ ಮಾಹಿತಿ ಇಲ್ಲ. ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳೇ ಹೊರತು, ಬೀದಿ ನಾಯಿಗಳಲ್ಲ ಎಂದರು. ಹಾಗಾದರೆ ‘ವಲಸಿಗರು ಬೀದಿ ನಾಯಿಗಳಾ?’ ಎಂಬ ಸುದ್ದಿಗಾರರ ಮರು ಪ್ರಶ್ನೆಗೆ ಅವರು, ‘ನಾನು ಅದನ್ನು ಹೇಳಿಲ್ಲವಲ್ಲ?. ಕಾಂಗ್ರೆಸ್ಸಿಗರು ಯಾವತ್ತಿಗೂ ಋಣ ತೀರಿಸುವಂತಹ ನಾಯಿಗಳು. ಯಜಮಾನನಿಗೆ ಋಣ ತೀಸುವವರು. ಮಾಲೀಕನಿಗೆ ನಿಯತ್ತಿನ ನಾಯಿಗಳು ಋಣ ತೀರಿಸುತ್ತವೆ. ಅದು ನಾಯಿಗಳ ವ್ಯಕ್ತಿತ್ವ’ ಎಂದು ಟಾಂಗ್ ನೀಡಿದರು.

ವಿಶ್ವಾಸಕ್ಕೆ ಶಾಸಕರು ವಿದೇಶಕ್ಕೆ ಹೋಗುತ್ತಿರಬಹುದು!

ಶಾಸಕರ ವಿದೇಶಿ ಪ್ರವಾಸ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಅವರೆಲ್ಲ ಶಾಸಕರಾಗಿದ್ದಾರೆ, ಹೀಗಾಗಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ವಿಶ್ವಾಸಕ್ಕೆ ಕೆಲವರು ಹೋಗಿರುತ್ತಾರೆ. ಕೆಲವರು ದೇಶ ನೋಡಲು, ಅಧ್ಯಯನ ಮಾಡಲು ಹೋಗಿರುತ್ತಾರೆ. ಅದರ ಬಗ್ಗೆ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ಆಗಾಗ್ಗೆ ಶಾಸಕರು ವಿದೇಶಗಳಿಗೆ ಹೋಗಿ ಬರುತ್ತಾರೆ. ಅಪಾರ್ಥ ಕಲ್ಪಪಿಸುವುದು ಬೇಡ. ಅವರಿಗೂ ಒಂದಷ್ಟು ಒತ್ತಡ, ಗೊಂದಲ ಇರುತ್ತದೆ. ಅಲ್ಲಿಗೆ ಹೋಗಿ ನೆಮ್ಮದಿಯಾಗಿದ್ದ ಬಂದರೆ ಮೈಂಡ್ ಫ್ರೆಶ್ ಆಗುತ್ತದೆ ಎಂದು ಹೋಗಿರಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವ ಎಚ್‌ಸಿ ಮಹಾದೇವಪ್ಪ ಹೇಳಿದ್ದೇನು?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಮಿಕವಾಗಿ ಮಾತನಾಡಿರುವ ಸಚಿವ ಎಚ್‌.ಸಿ. ಮಹಾದೇವಪ್ಪ ಅವರ ಹೇಳಿಕೆ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ‘ಇಲ್ಲಿ ನಾಯಕತ್ವ ಚರ್ಚೆ ಎಲ್ಲಿದೆ?. ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲ ಪದೇ ಪದೆ ಹಿಡಿದು ಒಳಗೆ ಹಾಕಿ ಅಂತ ಹೇಳುತ್ತಿದೆ. ರಾಜ್ಯದಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ’ ಎಂದು ಹೇಳಿದರು.

ಇದೇಕೆ ಈ ರೀತಿ ಹೇಳುತ್ತಿದ್ದೀರಿ ಎಂದು ಕೇಳಿದರೆ ‘ಹೈಕೋರ್ಟ್ ಹೇಳಿದ್ದನ್ನು ನಾನು ಹೇಳಿದ್ದೇನೆ. ನಾನು ನಾಯಕರು ನಾಯಿಗಳು ಅಂತ ಹೇಳಿದ್ನಾ?. ಹೈಕಮಾಂಡ್‌ಗೆ ನಿರ್ದೇಶನ ಕೊಡುವವರು ಯಾರು? ನಾನಾ ನೀವಾ? ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ….?” ಎಂದು ತಮ್ಮ ಮಾತಿಗೆ ಪೂರ್ಣ ವಿರಾಮ ನೀಡಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ. ಅವರ ಈ ಮಾರ್ಮಿಕ ಹೇಳಿಕೆಯು ಸಿಎಂ ಹುದ್ದೆಗೆ ಸಿದ್ದರಾಮಯ್ಯ ನವರಿಗೆ ಪೈಪೋಟಿ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹೇಳಿದ್ದಾರೆ ಅಂತಲೂ ವಿಶ್ಲೇಷಿಸಲಾಗುತ್ತಿದೆ.

ರಾಹುಲ್ ಗಾಂಧಿ ಭೇಟಿ ಯತ್ನ ವಿಫಲ

‘ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳೇ ಹೊರತು, ಬೀದಿ ನಾಯಿಗಳಲ್ಲ’ ಎನ್ನುವ ಮೂಲಕ ಸಚಿವರಿಗೆ ಡಿ.ಕೆ.ಶಿವಕುಮಾರ್ ಸಹೋದರ ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಏಕೆಂದರೆ ಸಿಎಂ ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸ್ಸಿಗರಲ್ಲ. ನಾಯಕತ್ವ ಬದಲಾವಣೆ ವಿಚಾರ ಸಂಬಂಧ, ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಇತ್ತೀಚೆಗೆ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ನಿರಂತರ ಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.

ಎಐಸಿಸಿ ಅಧ್ಯಕ್ಷರು ಮೌನ

ಇದೆಲ್ಲ ಬೆಳವಣಿಗೆಗಳು ಮಧ್ಯ ಕಾಂಗ್ರೆಸ್ ನಾಯಕರ ಹೇಳಿಕೆಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿವೆ. ಸಚಿವರ ಹೇಳಿಕೆಗೆ ಬಿಜೆಪಿ ಸಹ ಟಾಂಗ್ ನೀಡಿದೆ. ಎಚ್‌ಸಿ ಮಹಾದೇವಪ್ಪ ಅವರ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್, ನಾಯಿ ಯಾರು, ನಾಯಿ ಬಾಲ ಯಾರು ಎಂದು ಪ್ರಶ್ನಿಸುವ ಮುಖೇನ ಕಾಲೆಳೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರು ಆಗ್ರಹಿಸಿದ್ದಾರೆ. ಇದೆಲ್ಲ ನಡೆದರೂ ಸಹಿತ ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರು ಮೌನ ವಹಿಸಿದ್ದಾರೆ. ಇನ್ನೂ ಸಿಎಂ ಬಣದಲ್ಲಿ ಗುರುತಿಸಿಕೊಂಡವರ ಪೈಕಿ 25ಶಾಸಕರು ವಿದೇಶಕ್ಕೆ ತೆರಳುವುದು ನಿಕ್ಕಿಯಾಗಿದೆ. ಅಭಿವೃದ್ಧಿ ಮಾಡಬೇಕಾದ ಜನಪ್ರತಿನಿಧಿಗಳು ಜನಪರ ಕಾಳಜಿ ವಹಿಸದೇ ಅಧಿಕಾರ ಗದ್ದುಗೆಗಾಗಿ, ಪರಸ್ಪರ ವಾಕ್ಸಮರದಲ್ಲಿ ಕಾಲ ಕಳೆಯುತ್ತಿರುವುದಕ್ಕೆ ರಾಜ್ಯದ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/ardent-congressmen-are-not-street-dogs-dk-suresh-hits-back-to-hc-mahadevappa-dog-statement-444085.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo