ಮನುಷ್ಯರು ತೋರಿದ ಕರುಣೆ ದೇವರು ತೋರಲಿಲ್ಲ: ನಟಿ ರಶ್ಮಿ ಲೀಲಾ ಪತಿ ಸಾರಕ್ಕಿ ಮಂಜು ಭಾವುಕ | Actress Rashmi Leela husband Sarakki Manju emotional God did not show the mercy shown by humans

Entertainment

oi-Manohara M

ಕನ್ನಡ ಕಿರುತೆರೆ ಲೋಕದ ಪರಿಚಿತ ಮುಖವಾಗಿದ್ದ ರಶ್ಮಿ ಲೀಲಾ ಅವರ ಅಕಾಲಿಕ ನಿಧನ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ ಆಳವಾದ ದುಃಖ ಮೂಡಿಸಿದೆ. ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದು, ಪತಿ ಸಾರಕ್ಕಿ ಮಂಜು ಮನಕಲುಕುವಂತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ಮನುಷ್ಯರು ತೋರಿದ ಕರುಣೆ ದೇವರು ತೋರಲಿಲ್ಲ” ಎಂಬ ಅವರ ಮಾತುಗಳು ಕುಟುಂಬ ಅನುಭವಿಸಿದ ಸಂಕಷ್ಟವನ್ನು ತೋರಿಸುತ್ತವೆ. ರಶ್ಮಿ ಲೀಲಾ ಅವರ ಅನಾರೋಗ್ಯದ ಹೋರಾಟ, ಕುಟುಂಬ ಜೀವನ ಮತ್ತು ವೃತ್ತಿ ಬದುಕಿನ ಕುರಿತಾಗಿ ಸಾರಕ್ಕಿ ಮಂಜು ಅವರು ಒನ್‌ಇಂಡಿಯಾ ಕನ್ನಡ ವೆಬ್‌ಸೈಟ್‌ ಜೊತೆಗೆ ಸುದೀರ್ಘವಾಗಿ ಮಾತನಾಡಿದ್ದಾರೆ.

ಪ್ರೀತಿಯಿಂದ ಆರಂಭವಾದ ಜೀವನ ಪಯಣ

ರಶ್ಮಿ ಲೀಲಾ ಮೂಲತಃ ಬೆಂಗಳೂರಿನ ತ್ಯಾಗರಾಜನಗರದವರು. ‘ಬಾಂಧವ್ಯ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದ ಅವರು, ನಂತರ ‘ಪಾಪ ಪಾಂಡು’ ಸೀರಿಯಲ್‌ನಲ್ಲಿ “ಸಂದೇಹ” ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದರು. ರಶ್ಮಿ ಲೀಲಾ ಮತ್ತು ಸಾರಕ್ಕಿ ಮಂಜು ಅವರ ಪರಿಚಯ 2001ರಲ್ಲಿ ಆರಂಭವಾಯಿತು. ಸ್ನೇಹ ಪ್ರೀತಿಗೆ ತಿರುಗಿ, ಐದು ವರ್ಷಗಳ ನಂತರ 2006ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನ್ನು ನೆನೆದರು. “ನಮ್ಮದು ಲವ್‌ ಮ್ಯಾರೇಜ್‌. ನಾವು ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದೆವು. ನಮ್ಮ ಮಗಳು ಆಹ್ಲಾದ ಹುಟ್ಟಿದ ನಂತರ ಜೀವನ ಇನ್ನಷ್ಟು ಸಂತೋಷದಿಂದ ಕೂಡಿತ್ತು” ಎಂದು ಮಂಜು ನೆನಪಿಸಿಕೊಂಡರು. ಕುಟುಂಬದ ನೆಮ್ಮದಿ, ವೃತ್ತಿ ಜೀವನದ ಬೆಳವಣಿಗೆ-ಎಲ್ಲವೂ ಸರಾಗವಾಗಿದ್ದ ಸಮಯದಲ್ಲಿ ವಿಧಿಯಾಟ ಅವರ ಬದುಕನ್ನು ತಲೆಕೆಳಗಾಗಿಸಿತು ಎಂದು ಭಾವುಕರಾದರು.

Rashmi Leela

ಮಗಳ ಹುಟ್ಟುಹಬ್ಬದ ದಿನವೇ ಆಘಾತ

“ಮಗಳ ಹುಟ್ಟುಹಬ್ಬದ ದಿನವೇ ರಶ್ಮಿಗೆ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೆವು. ಮೊದಲಿಗೆ ಸಾಮಾನ್ಯ ಸಮಸ್ಯೆ ಎಂದುಕೊಂಡಿದ್ದೆವು. ಆದರೆ ತಪಾಸಣೆಗಳ ಬಳಿಕ ಅದು ಗಂಭೀರ ಶ್ವಾಸಕೋಶ ಸಮಸ್ಯೆ ಎಂದು ತಿಳಿಯಿತು. ಪತ್ತೆಯಾಗುವಷ್ಟರಲ್ಲಿ ಅದು ಕೊನೆಯ ಹಂತ ತಲುಪಿತ್ತು” ಎಂದು ಮಂಜು ವಿವರಿಸಿದರು. ವೈದ್ಯರು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದರಿಂದ ಕುಟುಂಬವು ಚಿಕಿತ್ಸೆಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಆರಂಭಿಸಿತು. ವಿವಿಧ ಆಸ್ಪತ್ರೆಗಳಲ್ಲಿ ಸಲಹೆ ಪಡೆದರು. ಶಸ್ತ್ರಚಿಕಿತ್ಸೆ ನೆರವೇರಿದರೂ, ದೇಹ ಚಿಕಿತ್ಸೆ ಸ್ವೀಕರಿಸಲಿಲ್ಲ ಎಂದರು.

ಲಕ್ಷಾಂತರ ವೆಚ್ಚ, ಆರ್ಥಿಕ ಸಂಕಷ್ಟ

ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದು, ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. “ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲವೂ ಮಾಡಿದ್ದೆವು. ಆದರೂ ಹಣದ ಕೊರತೆ ಎದುರಾದಾಗ ಕೆಲವರು ನೆರವಿಗೆ ಬಂದರು. ಕೆಲ ಅಭಿಮಾನಿಗಳು, ಸ್ನೇಹಿತರು, ಪರಿಚಯವಿಲ್ಲದವರು ಕೂಡ ರಕ್ತದಾನ ಮಾಡಿದರು. ರಶ್ಮಿ ಲೀಲಾ ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಕೋರಿದ ವಿಚಾರವನ್ನು ಅವರು ಪ್ರಸ್ತಾಪಿಸಿದ ಅವರು, “ಕೆಲ ನಟರಿಗೂ ಟ್ಯಾಗ್‌ ಮಾಡಿ ಸಹಾಯ ಕೇಳಿದಳು. ಆದರೆ ದೊಡ್ಡವರಿಂದ ಪ್ರತಿಕ್ರಿಯೆ ಬಂದಿಲ್ಲ. ಆದರೂ ಸಾಮಾನ್ಯ ಜನ ತೋರಿದ ಕರುಣೆ ಎಂದಿಗೂ ಮರೆಯಲಾಗದು” ಎಂದು ಹೇಳಿದರು.

Rashmi Leela

ಪತ್ನಿಗಾಗಿ ಬರವಣಿಗೆ ಬಿಟ್ಟೆ

ನಟನೆಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುವುದು, ಪಾತ್ರಗಳ ಬಗ್ಗೆ ಚರ್ಚಿಸುವುದು ಅವರ ದಿನಚರಿಯಾಗಿತ್ತು ಎಂದರು. “ಅವಳಿಗೆ ಇನ್ನೂ ಹಲವಾರು ಪಾತ್ರಗಳು ಸಿಗಬೇಕಾಗಿತ್ತು. ಆದರೆ ನಾನು ನೇರ ನಿಷ್ಠುರವಾಗಿ ಇರುತ್ತಿದ್ದ ಕಾರಣದಿಂದ ಕೆಲ ಅವಕಾಶಗಳು ತಪ್ಪಿದವು ಎನ್ನುವ ಭಾವನೆ ಇದೆ. ಅವಳ ಕನಸುಗಳನ್ನು ಇನ್ನಷ್ಟು ಸಾಕಾರಗೊಳಿಸಲು ಆಗಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತದೆ” ಎಂದು ಮಂಜು ಬೇಸರ ಹೊರಹಾಕಿದರು. ಪತ್ನಿಯ ಅನಾರೋಗ್ಯದ ಸಮಯದಲ್ಲಿ ಅವರು ಬರವಣಿಗೆ ಹಾಗೂ ಸೀರಿಯಲ್ ಕೆಲಸಗಳನ್ನು ಬಹುತೇಕ ನಿಲ್ಲಿಸಿದ್ದರು. “ಅವಳನ್ನು ನೋಡಿಕೊಳ್ಳುವುದೇ ಮೊದಲ ಆದ್ಯತೆ. ಕೆಲಸವನ್ನೂ ಬಿಡಬೇಕಾಯಿತು,” ಎಂದರು.

“ಇನ್ನೂ ಕೆಲ ವರ್ಷಗಳು ನಮ್ಮ ಜೊತೆ ಇರಬಹುದಿತ್ತು”

“ವೈದ್ಯರು ಪ್ರಯತ್ನಿಸುತ್ತಿದ್ದರು. ನಾವು ಭರವಸೆಯಿಂದ ಕಾಯುತ್ತಿದ್ದೆವು. ಆದರೆ ಅಂತಿಮವಾಗಿ ದೇವರ ಇಚ್ಛೆ ಬೇರೆ ಆಗಿತ್ತು. ಇನ್ನೂ ಕೆಲವು ವರ್ಷಗಳಾದರೂ ನಮ್ಮ ಜೊತೆ ಇರಬಹುದಿತ್ತು” ಎಂದು ಮಂಜು ಕಣ್ಣೀರಿಟ್ಟರು. ರಶ್ಮಿ ಲೀಲಾ ಅವರ ಅಗಲಿಕೆ ಕನ್ನಡ ಕಿರುತೆರೆ ವಲಯಕ್ಕೆ ದೊಡ್ಡ ನಷ್ಟವಾಗಿದೆ. ಸಹನಟರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಅವರ ಸ್ನೇಹಪರ ಸ್ವಭಾವ ಮತ್ತು ವೃತ್ತಿ ಪ್ರೀತಿ ಎಲ್ಲರ ನೆನಪಿನಲ್ಲಿ ಉಳಿದಿದೆ. ಒಂದು ಪ್ರೀತಿಪೂರ್ಣ ದಾಂಪತ್ಯ, ಹೋರಾಟ, ಕಲಾವಿದೆಯ ಕನಸಗಳು ಎಲ್ಲವನ್ನೂ ಒಳಗೊಂಡ ಈ ಕಥೆ ಕೇವಲ ವೈಯಕ್ತಿಕ ನೋವಲ್ಲ. ಮನುಷ್ಯರು ಕರುಣೆ ತೋರಿದರು, ದೇವರು ಮಾತ್ರ ತೋರಲಿಲ್ಲ,” ಎಂಬ ಸಾರಕ್ಕಿ ಮಂಜು ಅವರ ಮಾತುಗಳು ಇಂದಿಗೂ ಕಣ್ಣೀರನ್ನು ತರಿಸುತ್ತಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/actress-rashmi-leela-husband-sarakki-manju-emotional-god-did-not-show-the-mercy-shown-by-humans-444219.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo