ಅಸ್ಸಾಂ ಚುನಾವಣೆ ಅಖಾಡಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭರ್ಜರಿ ಎಂಟ್ರಿ, ಹೊಸ ಆಟ ಶುರು… Karnataka DCM | Karnataka DCM DK Shivakumar Entry To The Assam Campaign To Counter The Himanta Biswa Sarma and BJP

India

-Malathesha M

ಚುನಾವಣೆ ಪರ್ವ ಮತ್ತೆ ಶುರುವಾಗಿ ದೇಶದಲ್ಲಿ ಒಂದೇ ಬಾರಿಗೆ 4 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಕ್ಕೆ ಮತದಾನ ಇನ್ನೇನು 2 ತಿಂಗಳಲ್ಲಿ ನಡೆಯಲಿದೆ. ಅದರಲ್ಲೂ ಈ ಬಾರಿಯ ಚುನಾವಣೆ ಬಿಜೆಪಿ ನೇತೃತ್ವದ ಎನ್‌ಡಿಎ & ವಿರೋಧ ಪಕ್ಷಗಳ ಒಕ್ಕೂಟದ ನಡುವೆ ನೇರ ರಾಜಕೀಯ ಯುದ್ಧವಾಗಿ ತಿರುವನ್ನು ಪಡೆಯುತ್ತಿದೆ. ಈ ಪೈಕಿ ಅಸ್ಸಾಂ ಚುನಾವಣೆ ಅಖಾಡ ರಂಗೇರಿದ್ದು, ಗೆದ್ದೇ ಗೆಲ್ಲಬೇಕು ಎಂದು ರಾಜಕೀಯ ಪಕ್ಷಗಳು ಪಣತೊಟ್ಟಿವೆ. ಈ ಪರಿಸ್ಥಿತಿಯಲ್ಲೇ ಅಸ್ಸಾಂ ಚುನಾವಣೆ ಅಖಾಡಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ಹೊಸ ಆಟ ಇದೀಗ ಶುರುವಾದಂತೆ ಕಾಣುತ್ತಿದೆ.

ಒಟ್ಟಾರೆ 126 ಸದಸ್ಯ ಬಲ ಹೊಂದಿರುವ ಅಸ್ಸಾಂ ವಿಧಾನಸಭೆ ಚುನಾವಣೆಯನ್ನ ಏಪ್ರಿಲ್‌ನಲ್ಲಿ ನಡೆಸಲು ಸಕಲ ಸಿದ್ಧತೆ ಸಾಗಿದೆ. ಅಸ್ಸಾಂ ಹಾಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು, ಬಿಜೆಪಿ ಪಕ್ಷವನ್ನ ಸತತ 3ನೇ ಬಾರಿ ಅಧಿಕಾರಕ್ಕೆ ತರಲು ಸಜ್ಜಾಗಿದ್ದು, ವಿಧಾನಸಭೆ ಚುನಾವಣೆಗೆ ಬಿಜೆಪಿ ನಾಯಕರು ಈಗ ಭರ್ಜರಿ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದಾರೆ. ಅಸ್ಸಾಂನ ಹಾಲಿ ವಾತಾವರಣ ಕೂಡ ನಮ್ಮ ಗೆಲುವಿಗೆ ಪೂರಕ ಎಂದು ಬಿಜೆಪಿ ಲೀಡರ್ಸ್ ಪ್ರತಿಪಾದನೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಸ್ಥಳೀಯವಾಗಿ ಖಡಕ್ ನಾಯಕ ಇಲ್ಲ ಎಂಬ ಚರ್ಚೆ ನಡುವೆ ದಕ್ಷಿಣ ಭಾರತದಿಂದ, ಅದರಲ್ಲೂ ನಮ್ಮ ಕರ್ನಾಟಕದ ನೆಲದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.

Karnataka DCM

ಏಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ

ಕಾಂಗ್ರೆಸ್ ಪಕ್ಷ ಬಲಪ್ರದರ್ಶನ ಮಾಡಲು ಇದೇ ಏಪ್ರಿಲ್ ತಿಂಗಳಲ್ಲಿ ಎದುರಾಗುತ್ತಿರುವ ಚುನಾವಣೆಗಳಲ್ಲಿ ಗೆಲ್ಲಲೇಬೇಕು ಎಂಬ ಅನಿವಾರ್ಯತೆಗೆ ಸಿಲುಕಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ಪೈಕಿ ಒಂದಾದ ತಮಿಳುನಾಡು ಹಾಗೂ ಕೇರಳ ಸೇರಿದಂತೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಇದೇ ಏಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅಧಿಕೃತ ಘೋಷಣೆ ಒಂದೇ ಇದೀಗ ಬಾಕಿ ಉಳಿದಿದ್ದು, ಗೆಲುವಿಗಾಗಿ ರಾಜಕೀಯ ಪಕ್ಷಗಳ ರಣತಂತ್ರ ಶುರುವಾಗಿದೆ.

ಕರ್ನಾಟಕ ಡಿಸಿಎಂ ಹೆಗಲಿಗೆ ಜವಾಬ್ದಾರಿ

ಅದರಲ್ಲೂ ಈ ಬಾರಿ ಅಸ್ಸಾಂ ರಾಜ್ಯದಲ್ಲಿ ಗೆಲುವು ಪಡೆಯಲು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಫೈಟ್ ಬಲು ಜೋರಾಗಿದೆ. ಇದೇ ಕಾರಣಕ್ಕೆ ಅಸ್ಸಾಂ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್‌ಗೆ ಬಲ ತುಂಬಲು, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಈ ಮೂಲಕ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಜೊತೆಗೆ ಅಸ್ಸಾಂ ಚುನಾವಣೆ ಪ್ರಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗಿ ಆಗಲಿದ್ದಾರೆ. ಅಲ್ಲದೆ ಅಸ್ಸಾಂ ಚುನಾವಣೆಯಲ್ಲಿ ಈಗ ಕಾಂಗ್ರೆಸ್ ಗೆಲುವಿಗಾಗಿ ರಣತಂತ್ರ ಕೂಡ ಹೆಣೆಯಲಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಹೊಸ ರಣತಂತ್ರ?

ದೇಶದಲ್ಲಿ ಕಾಂಗ್ರೆಸ್ ಪಕ್ಷ ಕೆಲವೇ ಕೆಲವು ರಾಜ್ಯಗಳಲ್ಲಿ ಇದೀಗ ಅಧಿಕಾರ ಉಳಿಸಿಕೊಂಡಿದ್ದು, ಇನ್ನು ಉಳಿದ ರಾಜ್ಯಗಳನ್ನು ಕೈಯಿಂದ ಕಳೆದುಕೊಂಡಿದೆ. ಆದರೆ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಲು ಹೊಸ ಹುರುಪು ಕಾಂಗ್ರೆಸ್ ನಾಯಕರಿಗೆ ಬೇಕಾಗಿದೆ. ಹೀಗಿದ್ದಾಗ ರಾಹುಲ್ ಗಾಂಧಿ ಅವರ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಹಿರಿಯ ನಾಯಕರು ರಾಹುಲ್ ಗಾಂಧಿ ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ಆರೋಪಗಳು ಇವೆ. ಅಲ್ಲದೆ ಚುನಾವಣೆಗೆ ಇನ್ನೇನು ಕೆಲ ದಿನ ಬಾಕಿ ಇರುವಾಗಲೇ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿದೆ.

ರಾಹುಲ್ ಗಾಂಧಿ ಬದಲಾಗಿ ಇದೀಗ, ಸಂಸದೆ ಹಾಗೂ ರಾಹುಲ್ ಗಾಂಧಿ ಅವರ ಸಹೋದರಿ ಆಗಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಅಧಿಕಾರವನ್ನ ಕೊಡಲು ವರಿಷ್ಠರು ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಇದರ ಭಾಗವಾಗಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅವರನ್ನ ಪಕ್ಷದ ಅಭ್ಯರ್ಥಿಗಳ ಪರಿಶೀಲನಾ ಸಮಿತಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಹಾಗೂ ಕರ್ನಾಟಕದ ಉಪಮುಖ್ಯಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನ ಹಿರಿಯ ಕೇಂದ್ರ ವೀಕ್ಷಕರಲ್ಲಿ ಒಬ್ಬರಾಗಿ ನೇಮಕ ಮಾಡಲಾಗಿದೆ. ಇವರ ಜೊತೆಗೆ ಛತ್ತೀಸ್‌ಗಢ ರಾಜ್ಯದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರಿಗೂ ವೀಕ್ಷಕರ ಸ್ಥಾನ ನೀಡಲಾಗಿದೆ. ಆ ಮೂಲಕ ಕಾಂಗ್ರೆಸ್ ವರಿಷ್ಠರು ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/karnataka-dcm-dk-shivakumar-entry-to-the-assam-campaign-to-counter-the-himanta-biswa-sarma-and-bjp-011-444407.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo