
Karnataka
oi-Hitesh Y
HD Kumaraswamy vs Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಚ್.ಡಿ ಕುಮಾರಸ್ವಾಮಿ ಅವರು ಸಾಮಾಜಿಕ ನ್ಯಾಯಸಂಹಾರಿ ಎಂದು ಟೀಕಿಸಿದ್ದಾರೆ. ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು ಎನ್ನುವ ವಿವರ ನೋಡೋಣ.
ಸಿದ್ದರಾಮಯ್ಯನವರೇ, ನಾನು ಸುತ್ತಿಬಳಸಿ ಮಾತನಾಡಲ್ಲ. ನೇರವಾಗಿ ವಿಷಯಕ್ಕೇ ಬರುತ್ತೇನೆ. ಸಿದ್ದರಾಮಯ್ಯನವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂದು ನಾನು ತಮಾಷೆಗೆ ಹೇಳಿದ್ದಲ್ಲ, ಸೀರಿಯಸ್ಸಾಗೇ ಹೇಳಿದ್ದೇನೆ. ತಮಾಷೆಗೆ ಹೇಳಿದ್ದೇನೆ ಎಂದಿಟ್ಟುಕೊಳ್ಳಿ, ನೀವು ಇಷ್ಟುದ್ದ ಉತ್ತರ ಬರೆಯುವ ಅಗತ್ಯವಿರಲಿಲ್ಲ. ಈ ಬಗ್ಗೆ ನೀವು ಸೀರಿಯಸ್ ಆಗಿದ್ದೀರಿ ಎಂಬುದನ್ನು ಬಲ್ಲೆ. ಹಾಗಿದ್ದರೂ ನನ್ನ ಹೇಳಿಕೆಯನ್ನು ನೀವು ತಮಾಷೆಯಾಗಿಯೇ ಸ್ವೀಕರಿಸಿ, ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಸಾಮಾಜಿಕ ನ್ಯಾಯದ ಸೋಗುಕಾರ, ಸಾಮಾಜಿಕ ನ್ಯಾಯದ ಸಂಹಾರಿ ನೀವು. ನಿಮಗೆ ರಾಜಕೀಯ ಶಕ್ತಿ-ಬದುಕು ಕೊಟ್ಟ ದೇವೇಗೌಡರ ಕಡೆ ಬೆಟ್ಟು ಮಾಡುವುದು ಆಘಾತಕಾರಿ. ಇವತ್ತು ನಿಮಗೆ ಸಿಕ್ಕಿರುವ ಅಧಿಕಾರ, ಸಾಮಾಜಿಕ ನ್ಯಾಯಕಾರ ಎಂಬ ಪೋಷಾಕು ಎಲ್ಲವೂ ದೇವೇಗೌಡರ ದೇಣಿಗೆ. ನೀವೂ ಅವರ ಸಾಮಾಜಿಕ ನ್ಯಾಯದ ಫಲ ಮತ್ತು ಫಲಾನುಭವಿ. ಸ್ವಜಾತಿ, ಕುಟುಂಬ ಎಂದು ಅವರು ಆವತ್ತೇ ಭಾವಿಸಿದ್ದಿದ್ದರೆ ನೀವು ಹಣಕಾಸು ಮಂತ್ರಿ ಆಗುವುದಿರಲಿ, ಅಟ್ಲೀಸ್ಟ್ ಒಂದು ನಿಗಮದ ಅಧ್ಯಕ್ಷಗಿರಿಯೂ ದಕ್ಕುತ್ತಿರಲಿಲ್ಲ. ಅಂದು ನಿಮ್ಮನ್ನು ಹಣಕಾಸು ಮಂತ್ರಿ ಮಾಡಲೇಬೇಕೆಂದು ಹಠತೊಟ್ಟ ಗೌಡರಿಗೆ ಅವತ್ತಿನ ಅವರ ಸಮಕಾಲೀನರು ನಿಮ್ಮ ಬಗ್ಗೆ ಏನೆಲ್ಲಾ ಗುಣಾವಗಾನ ಮಾಡಿ ಬಣ್ಣಿಸಿದ್ದರೆನ್ನುವುದು ನಿಮಗೆ ತಿಳಿದಿರಬೇಕಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಒಕ್ಕಲಿಗ ನಾಯಕರ ಹೆಸರು; ಅಪಹಾಸ್ಯ ಮಾಡಿದ್ದೀರಿ
ನೀವು ಪಟ್ಟಿ ಮಾಡಿರುವ ಒಕ್ಕಲಿಗ ನಾಯಕರ ಹೆಸರುಗಳನ್ನು ಓದಿದೆ. ಪಾಪ.. ನೀವು ಅವರ ಹೆಸರುಗಳನ್ನ ಉಲ್ಲೇಖಿಸಿ ಅವರನ್ನೂ ಅಪಹಾಸ್ಯ ಮಾಡಿದ್ದೀರಿ. ನೀವೂ ಅಪಹಾಸ್ಯಕ್ಕೆ ತುತ್ತಾಗಿದ್ದಲ್ಲದೆ, ನಗೆಪಾಟಲಿಗೀಡಾಗಿದ್ದೀರಿ. ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಆ 13 ಜನರ ಶೆಲ್ಟರ್ ಪಡೆದಿದ್ದೀರಿ, ಸರಿ. ಹಾಗಿದ್ದರೆ ಅವರೆಲ್ಲರೂ ದೇವೇಗೌಡರಿಂದ ಅಧಿಕಾರ ಅನುಭವಿಸಲೇ ಇಲ್ಲವೇ. ಆಗ ಅವರೆಲ್ಲರೂ ಕೂತಿದ್ದ ಅಧಿಕಾರ ಸ್ಥಾನಗಳಲ್ಲಿ ದೇವೇಗೌಡರೇ ಕೂತಿದ್ದರಾ. ಅವರೆಲ್ಲರೂ ನಿಮ್ಮಂತೆಯೇ ದೇವೇಗೌಡರ ಶ್ರಮ, ತ್ಯಾಗದಿಂದ ಅಧಿಕಾರ ಉಂಡು, ಪೊಗದಸ್ತಾಗಿ ಬೆಳೆದು ಬೇಲಿ ಹಾರಿದವರು! ನೀವು ಹೇಳಿದಂತೆ ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದಿದ್ದರೆ ಈ ಪಟ್ಟಿಯಲ್ಲಿನ ಒಬ್ಬರೂ ಶಾಸಕ, ಮಂತ್ರಿ, ಎಂಪಿ ಆಗುತ್ತಲೇ ಇರಲಿಲ್ಲ.. ನಿಮ್ಮನ್ನೂ ಸೇರಿಸಿ! ಏನಂತೀರಿ? ನೀವೆಲ್ಲರೂ ನೆರಳು ಕೊಟ್ಟ ವೃಕ್ಷಕ್ಕೆ ನಿರ್ದಯದಿಂದ ಕೊಡಲಿ ಹಾಕಿದಿರಿ. ಉಂಡು ಹೋದರಿ, ಕೊಂಡು ಹೋದರಿ!
ಸಿದ್ದರಾಮಯ್ಯನವರೇ.. ನಿಮ್ಮ ಸ್ವಾರ್ಥಕ್ಕೆ ಜಾತಿ ಎಳೆದು ತಂದಂತೆ ಹಿರಿಯರಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರನ್ನು ಏಕೆ ಎಳೆದು ತರುತ್ತೀರಿ? ಎಸ್.ಎಂ.ಕೃಷ್ಣ ಅವರ ಹೆಸರೇಳುವ ಸಾಸಿವೆ ಕಾಳಷ್ಟು ಯೋಗ್ಯತೆ, ನೈತಿಕತೆ ನಿಮಗಿದೆಯೇ? ಹಿ ಈಸ್ ಅನ್ ಪಾಲಿಷ್ಡ್ ಡೈಮಂಡ್ ಎಂದು ಸೋನಿಯಾ ಗಾಂಧಿ ಅವರ ಮುಂದೆ ಹೇಳಿ ನೀವು ಕಾಂಗ್ರೆಸ್ ಮೆಟ್ಟಿಲತ್ತಲು ಕಾರಣರಾದ ಎಸ್.ಎಂ.ಕೃಷ್ಣರನ್ನು ಎಷ್ಟು ಕ್ರೂರವಾಗಿ ವಂಚಿಸಿದಿರೆನ್ನುವುದು ಜಗತ್ತು ಬಲ್ಲ ಸತ್ಯ. ರಾಜಕೀಯದ ಕಡೆಗಾಲದಲ್ಲಿ ಅವರನ್ನು ನೀವೆಷ್ಟು ತುಚ್ಛವಾಗಿ ನಡೆಸಿಕೊಂಡಿರಿ ಎನ್ನುವುದನ್ನು ಜನ ಮರೆತಿಲ್ಲ. ಅನ್ ಪಾಲಿಷ್ಡ್ ಡೈಮಂಡ್ ಕೃಷ್ಣರಿಗೆ ಚೂರಿ ಆಗಿದ್ದು ಎಲ್ಲರೂ ಬಲ್ಲರು.
ಒಕ್ಕಲಿಗರನ್ನು ಬೆಳೆಸಿದ್ದು ಕಾಂಗ್ರೆಸ್ಸು ಅಂತೀರಿ.. ಬರೀ ಬುರಡೆ.. ವಿಧಾನಸೌಧ ಕಟ್ಟಿದ ಕೆಂಗಲ್ ಅವರಿಗೆ ನಿಮ್ಮ ನೆಹರು ಕೊಟ್ಟ ಕಿರುಕುಳ, ಮಾಡಿದ ಅಪಮಾನ ಅಷ್ಟಿಷ್ಟಾ? ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರಿಗೆ ಬೆನ್ನಿಗಿರಿದ ದೂರ್ತರು ಯಾರು? ಯಾವ ಪಕ್ಷದವರು? ಒಕ್ಕಲಿಗರನ್ನು ಸಿಎಂ ಮಾಡುವುದು ಕಾಂಗ್ರೆಸ್ಸೇ ಎನ್ನುವುದಾದರೆ, ತತ್ʼಕ್ಷಣಕ್ಕೇ ನೀವು ಕುರ್ಚಿ ಬಿಡಬೇಕಲ್ಲವೇ? ಒಕ್ಕಲಿಗರ ಮೇಲೆ ನಿಮ್ಮ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ!
ಸಿದ್ದರಾಮಯ್ಯನವರೇ.. ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ? ಈಗ ನೀವು ಉದಾರತೆ ತೋರಬೇಕು. ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಅಗ್ರಿಮೆಂಟ್ ಆಗಿತ್ತಲ್ಲಾ, ಅದನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ. ದಿಲ್ಲಿಯಲ್ಲಿ ನಿಮ್ಮಿಬ್ಬರ ನಡುವೆ ಆಗಿದ್ದ ಆ ಅಗ್ರಿಮೆಂಟ್ʼಗೆ ಸಾಕ್ಷಿ ಆಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜಿವಾಲಾಗೆ ನಿಮ್ಮ ಸಾಮಾಜಿಕ ನ್ಯಾಯ, ಒಕ್ಕಲಿಗ ಪ್ರೀತಿಯ ಪರಾಕಾಷ್ಠೆ ಈಗೀಗ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಅವರೆಲ್ಲರ ಮಾನಸಿಕ ಸ್ವಾಸ್ಥ್ಯ ಸರಿ ಇದೆ ಎಂದು ನಾನಾದರೂ ನಂಬಿದ್ದೇನೆ.
ಸಾಮಾಜಿಕ ನ್ಯಾಯದ ಸಂಹಾರಿ
ಸಾಮಾಜಿಕ ನ್ಯಾಯದ ಸಂಹಾರಿಯೇ ಅದೇ ಸಾಮಾಜಿಕ ನ್ಯಾಯ ಬಗ್ಗೆ ಪದೇಪದೆ ಮಾತನಾಡುವುದು ಅಸಹ್ಯ ತರಿಸುತ್ತದೆ. ನಿಮ್ಮ ಸಾಮಾಜಿಕ ನ್ಯಾಯಕ್ಕೆ ಅಂತಃಕರಣವಿಲ್ಲ. ಇದ್ದಿದ್ದರೆ ನಿಮಗಿಂತ ಮೊದಲೇ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕಿತ್ತು. ಇದ್ದ ಪ್ರತಿಪಕ್ಷ ಸ್ಥಾನವನ್ನೂ ಕಿತ್ತುಕೊಂಡು ಅವರನ್ನು ಅತ್ಯಂತ ಅಪಮಾನಕರವಾಗಿ ದಿಲ್ಲಿಗೆ ಓಡಿಸಿದಿರಿ. ಇನ್ನೊಬ್ಬ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರನ್ನು ನಿಮ್ಮ ದಾರಿಗೆ ಅಡ್ಡ ಬರುತ್ತಾರೆಂದು ಚುನಾವಣೆ ಕಣದಲ್ಲೇ ಮುಗಿಸಿದಿರಿ, ನಿಮ್ಮನ್ನು ಕಾಂಗ್ರೆಸ್ಸಿಗೆ ಕರೆತಂದ ಹೆಚ್. ವಿಶ್ವನಾಥ್’ರನ್ನು ಎಲ್ಲಿ ಇಟ್ಟಿದ್ದೀರಿ? ನೀವು ಸಿಎಂ ಪಟ್ಟಕ್ಕೆ ಏರಿ ಕೂತಿರಿ? ಎರಡು ಸಲ ನೀವು ಸಿಎಂ ಆಗಿದ್ದಲ್ಲ, ಅರ್ಹತೆಯಿಂದ ಆಗಿದ್ದೂ ಅಲ್ಲವೇ ಅಲ್ಲ. ಪಕ್ಷದಲ್ಲಿದ್ದ ಸಮರ್ಥರನ್ನು ಸಾಮಾಜಿಕ ನ್ಯಾಯದ ನೆಪಲ್ಲಿ #ರಾಜಕೀಯನರಮೇಧ ಮಾಡಿ ಆಕ್ರಮಿಸಿದ್ದು.
ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಇನ್ನೆಷ್ಟು ದಿನ ಈ ಊಸರವಳ್ಳಿ ಅವತಾರ? ಅಸಲಿಗೆ ಅಹಿಂದಾ ನಾಯಕ, ಸಾಮಾಜಿಕ ನ್ಯಾಯದ ಪ್ರತಿನಿಧಿಯೇ ನೀವಾಗಿದ್ದಿದ್ದರೆ ಈ ಸೂಕ್ಷ್ಮ ಸಂದರ್ಭದಲ್ಲಿ ನೀವು ಹುಟ್ಟಿದ ಜಾತಿಯನ್ನು ಎಳೆದು ತರುತ್ತಿರಲಿಲ್ಲ. ಇದನ್ನೇ ನಾನು ಪ್ರಶ್ನಿಸಿದ್ದು.
ಬಸವಣ್ಣ, ನಾರಾಯಣ ಗುರು, ಕುವೆಂಪು, ದೇವರಾಜ ಅರಸು ಅವರುಗಳ ವಿಚಾರ, ತತ್ವಾದರ್ಶಗಳನ್ನು ನಂಬಿದನು ಎನ್ನುವ ನೀವು, ಇನ್ನು ಮುಂದೆ ಆ ಮಹನೀಯರ ಹೆಸರೇಳಬೇಡಿ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ನಾನು ನಿಮಗೆ ನೀಡುವ ವಿನಮ್ರ ಸಲಹೆ ಇದು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸುದೀರ್ಘ ಟ್ವೀಟ್ ಮಾಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/hd-kumaraswamy-vs-siddaramaiah-you-axed-tree-that-gave-you-shade-says-hd-kumaraswamy-political-row-444681.html. xn--babytilbehr-pgb.com does not claim ownership of this content. All rights remain with the original publisher.
