
Entertainment
oi-Manohara M
ಕಾಂತಾರ ಚಾಪ್ಟರ್-1 ಚಿತ್ರದ ಅದ್ಭುತ ಯಶಸ್ಸಿನ ಬಳಿಕ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಮತ್ತೊಂದು ಪೌರಾಣಿಕ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ನಿಯೊಂದಿಗೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ರಿಷಬ್ ಮೆಟ್ಟಿಲು ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಹು ನಿರೀಕ್ಷಿತ ‘ಜೈ ಹನುಮಾನ್’ ಚಿತ್ರದಲ್ಲಿ ರಿಷಬ್ ಮುಖ್ಯಪಾತ್ರದಲ್ಲಿ ನಟಿಸಲಿದ್ದು, ಚಿತ್ರದ ಮುಹೂರ್ತ ಸಮಾರಂಭವು ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಮೂಲಕ ರಿಷಬ್ ಜೈ ಹನುಮಾನ್ ಟೀಂ ಸೇರಿಕೊಂಡಿದ್ದಾರೆ.
ಹನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ಬೆಳಗಿನ ಜಾವವೇ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಘಂಟಾನಾದ, ವೇದಮಂತ್ರಗಳ ಮಧ್ಯೆ ನಡೆದ ಪೂಜಾ ಕಾರ್ಯಗಳು ‘ಜೈ ಹನುಮಾನ್’ ಚಿತ್ರದ ಪ್ರಯಾಣಕ್ಕೆ ಶುಭಾರಂಭ ಸೂಚಿಸಿದೆ. ಈ ವೇಳೆ ಚಿತ್ರತಂಡದ ಸದಸ್ಯರು, ಸ್ಥಳೀಯ ಭಕ್ತರು ಹಾಗೂ ಸಿನಿ ಅಭಿಮಾನಿಗಳು ಕೂಡ ಇದ್ದರು.

ರಿಷಬ್ ಶೆಟ್ಟಿಯ ಹೊಸ ಅವತಾರ
‘ಕಾಂತಾರ’ ಚಿತ್ರದ ಮೂಲಕ ಭಾರತೀಯ ಸಿನಿರಂಗದಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡ ರಿಷಬ್ ಶೆಟ್ಟಿ, ಇದೀಗ ಮತ್ತೆ ಪೌರಾಣಿಕ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅವರ ಆಯ್ಕೆಗಳು ಸದಾ ವಿಭಿನ್ನವಾಗಿರುವುದು ವಿಶೇಷ. ಈ ಬಾರಿ ಜೈ ಹನುಮಾನ್ ಚಿತ್ರದಲ್ಲಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯೂ ಹೆಚ್ಚಾಗಿದೆ. ಈ ಚಿತ್ರಕ್ಕೆ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೌರಾಣಿಕ ಕಥಾಹಂದರದೊಂದಿಗೆ ಆಧುನಿಕ ಸಿನಿ ತಂತ್ರಜ್ಞಾನಗಳ ಸಂಯೋಜನೆಯಲ್ಲಿ ಈ ಸಿನಿಮಾ ಹೇಗೆ ಮೂಡಿಬರಲಿದೆ ಎಂಬುದು ಕಾದುನೋಡಬೇಕಿದೆ.
ಪ್ಯಾನ್ ಇಂಡಿಯಾ ಆಗುವ ಸಾಧ್ಯತೆ
‘ಕಾಂತಾರ’ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಹೀಗಾಗಿ ‘ಜೈ ಹನುಮಾನ್’ ಚಿತ್ರವೂ ಬಹುಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಭಕ್ತಿ, ಪೌರಾಣಿಕತೆ ಮತ್ತು ಭವ್ಯ ತಂತ್ರಜ್ಞಾನಗಳ ಸಂಯೋಜನೆಯಾಗಿ ಈ ಚಿತ್ರ ಮೂಡಿಬರಲಿದೆ. ಅಂಜನಾದ್ರಿಯಲ್ಲಿ ನಡೆದ ಮುಹೂರ್ತದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹನುಮಂತನ ಆಶೀರ್ವಾದದೊಂದಿಗೆ ಶುರುವಾದ ಚಿತ್ರ ಖಂಡಿತ ಯಶಸ್ವಿಯಾಗಲಿ ಎಂಬ ಶುಭಹಾರೈಸುತ್ತಿದ್ದಾರೆ. ‘ಜೈ ಹನುಮಾನ್’ ಕೇವಲ ಒಂದು ಸಿನಿಮಾ ಅಲ್ಲ, ಅದು ಆಧ್ಯಾತ್ಮಿಕ ನಂಬಿಕೆಯಾಗಿರುವುದರಿಂದ ಎಲ್ಲರ ಕಣ್ಣು ಈ ಸಿನಿಮಾದ ಮೇಕಿಂಗ್ನತ್ತ ನೆಟ್ಟಿದೆ.
ಪೌರಾಣಿಕ ಅಂಶಗಳನ್ನು ಆಧುನಿಕ ಸಿನೆಮಾ ತಂತ್ರಜ್ಞಾನಗಳೊಂದಿಗೆ ಸಂಯೋಜಿಸುವಲ್ಲಿ ಪರಿಣತಿ ಹೊಂದಿರುವ ಪ್ರಶಾಂತ್ ವರ್ಮಾ, ‘ಜೈ ಹನುಮಾನ್’ ಚಿತ್ರವನ್ನು ಭಕ್ತಿಯ ಜತೆ ಜತೆಗೆ ಆ್ಯಕ್ಷನ್, ಭಾವನಾತ್ಮಕ ಅಂಶಗಳ ಸಮನ್ವಯದಲ್ಲಿ ಮೂಡಿ ಬರಲಿದೆ ಎಂದಿದ್ದಾರೆ. ಕಥೆಯ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗದಿದ್ದರೂ, ಹನುಮಂತನ ಶೌರ್ಯ, ಭಕ್ತಿ ಮತ್ತು ಧರ್ಮದ ಸಂದೇಶ ಈ ಚಿತ್ರದ ಕೇಂದ್ರವಾಗಿರಲಿದೆ.
ಕಾಂತಾರ ಚಿತ್ರ ಶೂಟಿಂಗ್ ವೇಳೆಯೇ ಈ ಚಿತ್ರದ ಕಥೆ ಬಗ್ಗೆ ಪ್ರಶಾಂತ್ ವರ್ಮಾ ನನ್ನೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ನಾನು ಈ ಚಿತ್ರದ ಕಥೆ ಕೇಳಿದಾಗ ಬೇಡ ಎನ್ನಲು ಮನಸ್ಸಾಗಲಿಲ್ಲ. ಕಥೆ ಜತೆ ಕರ್ನಾಟಕದ ನಂಟು ಹೊಂದಿರುವುದರಿಂದ ನಾನು ಈ ಚಿತ್ರ ಮಾಡಲು ಒಪ್ಪಿಕೊಂಡೆ ಎಂದಿದ್ದಾರೆ ರಿಷಬ್ ಶೆಟ್ಟಿ. ರಿಷಬ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದರಿಂದ ತೆಲುಗು ಚಿತ್ರರಂಗದಿಂದ ಹೆಚ್ಚಾಗಿ ಆಫರ್ ಪಡೆಯುತ್ತಿದ್ದಾರೆ. ಜೈಹನುಮಾನ್ ಮೂಲಕ ಟಾಲಿವುಡ್ನಲ್ಲಿಯೂ ಮೋಡಿ ಮಾಡಲು ರಿಷಬ್ ಸಜ್ಜಾಗಿದ್ದಾರೆ. ರಿಷಬ್ ಶೆಟ್ಟಿ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rishab-shetty-joins-jai-hanuman-team-grand-muhurat-at-anjanadri-hills-after-kantara-success-444695.html. xn--babytilbehr-pgb.com does not claim ownership of this content. All rights remain with the original publisher.
