ನ್ಯಾಯಾಂಗಕ್ಕೆ ಮಸಿ ಬಳಿಯುವ ಷಡ್ಯಂತ್ರ, ಸುಮ್ಮನಿರಲ್ಲ: NCERT ಪಠ್ಯದ ಬಗ್ಗೆ ಸುಪ್ರೀಂ ಕೋರ್ಟ್ ಸಿಜೆಐ ಆಕ್ಷೇಪ | NCERT Class 8 Textbook Judicial Corruption Row: CJI Takes Suo Motu Action Against Defamation Move

India

-Pragathi S

ನವದೆಹಲಿ: 8ನೇ ತರಗತಿಯ ಹೊಸ ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಕುರಿತು ಉಲ್ಲೇಖಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು “ಪೂರ್ವನಿಯೋಜಿತ ಮತ್ತು ವ್ಯವಸ್ಥಿತ” ಸಂಚು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನ್ಯಾಯಾಂಗ ವ್ಯವಸ್ಥೆಯನ್ನು ನಿಂದಿಸಲು ಅಥವಾ ಅದರ ಘನತೆಗೆ ಕುಂದು ತರಲು ತಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಈ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸ್ವಯಂ ಪ್ರೇರಿತ (Suo motu) ದೂರು ದಾಖಲಿಸಿಕೊಂಡಿದೆ. ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ಕಾನೂನು ವಲಯದ ಅನೇಕರಿಂದ ತಮಗೆ ಕರೆಗಳು ಹಾಗೂ ಸಂದೇಶಗಳು ಬರುತ್ತಿದ್ದು, ಇಡೀ ವಕೀಲರ ಸಮುದಾಯ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

NCERT Class 8 Textbook

ಹಿರಿಯ ವಕೀಲರ ಆಕ್ರೋಶ

ಬುಧವಾರ ಸುಪ್ರೀಂ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ಈ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದರು. “ಎಳೆಯ ವಯಸ್ಸಿನ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಪುಸ್ತಕಗಳಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಬಗ್ಗೆ ಬೋಧಿಸುತ್ತಿರುವುದು ಇಡೀ ವಕೀಲರ ಸಮುದಾಯದಲ್ಲಿ ತೀವ್ರ ಕಳವಳ ಹಾಗೂ ಆತಂಕ ಮೂಡಿಸಿದೆ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ವಕೀಲರ ಪರವಾಗಿ ನಾನು ಇದನ್ನು ಪ್ರಸ್ತಾಪಿಸುತ್ತಿದ್ದೇನೆ” ಎಂದರು.

ಇದಕ್ಕೆ ಧ್ವನಿಗೂಡಿಸಿದ ಮತ್ತೋರ್ವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ಪಠ್ಯಪುಸ್ತಕದಲ್ಲಿ ಕೇವಲ ನ್ಯಾಯಾಂಗವನ್ನು ಮಾತ್ರ ಗುರಿಯಾಗಿಸಿಕೊಂಡು (Selectively targeted) ಬರೆಯಲಾಗಿದೆ. ರಾಜಕಾರಣಿಗಳು, ಸಚಿವರು, ಅಧಿಕಾರಿಗಳು ಅಥವಾ ಸಾರ್ವಜನಿಕ ಜೀವನದ ಇತರ ರಂಗಗಳಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಎಲ್ಲಿಯೂ ಯಾವುದೇ ಉಲ್ಲೇಖವಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ನ್ಯಾಯಾಂಗ ವ್ಯವಸ್ಥೆಯನ್ನೇ ಟಾರ್ಗೆಟ್ ಮಾಡಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಪೀಠದಲ್ಲಿದ್ದ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು ಸಹ, ಪಠ್ಯಪುಸ್ತಕದ ಈ ಉಲ್ಲೇಖಗಳು ಸಂವಿಧಾನದ ಮೂಲ ರಚನೆಗೇ ವಿರುದ್ಧವಾಗಿರುವಂತೆ ಕಾಣುತ್ತಿದೆ ಎಂದು ಗಂಭೀರ ಅಭಿಪ್ರಾಯಪಟ್ಟರು.

ಪಠ್ಯಪುಸ್ತಕದಲ್ಲೇನಿದೆ?

ಇತ್ತೀಚೆಗಷ್ಟೇ ಬಿಡುಗಡೆಯಾದ ಎನ್‌ಸಿಇಆರ್‌ಟಿಯ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕದ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಅಧ್ಯಾಯದಲ್ಲಿ “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಎಂಬ ಪ್ರತ್ಯೇಕ ವಿಭಾಗವನ್ನು ಸೇರಿಸಲಾಗಿದೆ. ವಿವಿಧ ಹಂತದ ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರ ಮತ್ತು ಅಗತ್ಯವಿರುವಷ್ಟು ನ್ಯಾಯಾಧೀಶರ ಕೊರತೆಯಿಂದಾಗಿ ಬಾಕಿ ಉಳಿದಿರುವ ಕೋಟ್ಯಂತರ ಪ್ರಕರಣಗಳನ್ನು ನ್ಯಾಯಾಂಗದ ಮುಂದಿರುವ ಪ್ರಮುಖ ‘ಸವಾಲುಗಳು’ ಎಂದು ಇದರಲ್ಲಿ ವ್ಯಾಖ್ಯಾನಿಸಲಾಗಿತ್ತು.

ಸಿಜೆಐ ಕಟ್ಟುನಿಟ್ಟಿನ ಎಚ್ಚರಿಕೆ

ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಹೊಸ ಸಂಘರ್ಷಕ್ಕೆ ಕಾರಣವಾಗಿರುವ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, “ನ್ಯಾಯಾಂಗ ಸಂಸ್ಥೆಗೆ ಮಸಿ ಬಳಿಯುವ ಮತ್ತು ತೇಜೋವಧೆ ಮಾಡುವ ಇಂತಹ ಪ್ರಯತ್ನಗಳು ಎಷ್ಟೇ ಉನ್ನತ ಮಟ್ಟದಿಂದ ಬಂದರೂ ನಾವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಬಾರ್ ಮತ್ತು ಬೆಂಚ್ (ವಕೀಲರು ಮತ್ತು ನ್ಯಾಯಾಧೀಶರು) ಇಬ್ಬರೂ ಈ ಬೆಳವಣಿಗೆಯಿಂದ ತೀವ್ರ ವಿಚಲಿತರಾಗಿದ್ದಾರೆ. ಇದು ಇಡೀ ಸಂಸ್ಥೆಯ ಘನತೆಯ ಪ್ರಶ್ನೆ. ಈ ವಿಚಾರದಲ್ಲಿ ಕಾನೂನು ತನ್ನದೇ ಆದ ಕಠಿಣ ಕ್ರಮ ಜರುಗಿಸಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ, ಎನ್‌ಸಿಇಆರ್‌ಟಿ ಪಠ್ಯದಲ್ಲಿನ ಒಂದು ಅಧ್ಯಾಯ ಇದೀಗ ನ್ಯಾಯಾಂಗ ವ್ಯವಸ್ಥೆ ಮತ್ತು ಕೇಂದ್ರ ಸರ್ಕಾರದ ನಡುವಿನ ದೊಡ್ಡ ವಿವಾದವಾಗಿ ಮಾರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/ncert-class-8-textbook-judicial-corruption-row-cji-takes-suo-motu-action-against-defamation-move-011-445041.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo