
Sports
oi-Madhusudhan KR
Gautam Gambhir: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಭಾರತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನ ನಂತರ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಮಹತ್ವದ ಹೇಳಿಕೆ ನೀಡಿ ಗಮನ ಸೆಳದಿದ್ದಾರೆ. ಇದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ಈ ಐತಿಹಾಸಿಕ ಗೆಲುವನ್ನು ಮಾಜಿ ಕೋಚ್ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಅರ್ಪಿಸಿದ್ದಾರೆ. ಅಲ್ಲದೆ, ಮಹತ್ವದ ಮಾಹಿತಿಗಳನ್ನು ಕೂಡ ಹಂಚಿಕೊಂಡು ಗಮನ ಸೆಳೆದಿದ್ದಾರೆ.

“ಈ ಗೆಲುವಿನ ಹಿಂದೆ ಕೇವಲ ನನ್ನ ಪ್ರಯತ್ನ ಮಾತ್ರವಲ್ಲ, ಈ ತಂಡವನ್ನು ರೂಪಿಸುವಲ್ಲಿ ಮತ್ತು ಬೆಂಬಲಿಸುವಲ್ಲಿ ಶ್ರಮಿಸಿದ ಪ್ರತಿಯೊಬ್ಬರ ಪಾತ್ರವಿದೆ. ಈ ತಂಡದ ಕಟ್ಟುವಿಕೆಯಲ್ಲಿ ರಾಹುಲ್ ದ್ರಾವಿಡ್ ಅವರ ಕೊಡುಗೆ ಅಪಾರ. ಹಾಗೆಯೇ ಲಕ್ಷ್ಮಣ್, ಅಜಿತ್ ಅಗರ್ಕರ್ ಮತ್ತು ಜಯ್ ಶಾ ಅವರ ಬೆಂಬಲ ಮತ್ತು ದೂರದೃಷ್ಟಿ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ,” ಎಂದು ಅವರು ತಿಳಿಸಿದರು. ಅಲ್ಲದೆ, “ಸೋಲುವ ಭಯವಿಲ್ಲದೆ ಆಡುವ ಮನಸ್ಥಿತಿಯನ್ನು ತಂಡದಲ್ಲಿ ಬೆಳೆಸಲು ಆಡಳಿತ ಮಂಡಳಿಯ ಬೆಂಬಲ ಬಹಳ ಮುಖ್ಯವಾಗಿತ್ತು,” ಎಂದು ಹೆಮ್ಮೆಯಿಂದ ಹೇಳಿಕೊಂಡರು. ಗಂಭೀರ್ ಅವರ ಈ ನಡೆ ಕ್ರೀಡಾ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ತವರು ನೆಲದಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ. ಈ ಗೆಲುವಿನೊಂದಿಗೆ ಭಾರತವು ತನ್ನ ಟಿ20 ವಿಶ್ವಕಪ್ ಟ್ರೋಫಿಗಳ ಸಂಖ್ಯೆಯನ್ನು ಮೂರಕ್ಕೆ ಏರಿಸಿಕೊಂಡಿದೆ. ಇಡೀ ಪಂದ್ಯಾವಳಿಯ ಉದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ತಂಡ, ಅಂತಿಮ ಪಂದ್ಯದಲ್ಲೂ ತಮ್ಮ ಆಧಿಪತ್ಯವನ್ನು ಮೆರೆದಿದೆ.
ಪತ್ರಿಕಾಗೋಷ್ಠಿಯಲ್ಲಿ ತಂಡದ ಸಾಧನೆ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, “ಭಾರತೀಯ ಕ್ರಿಕೆಟ್ ಇಂದು ಸತತವಾಗಿ ಯಶಸ್ಸನ್ನು ಸಾಧಿಸುತ್ತಿದೆ ಎಂದರೆ, ಅದರ ಹಿಂದೆ ಒಂದು ಬಲವಾದ ವ್ಯವಸ್ಥೆಯಿದೆ. ಈ ವ್ಯವಸ್ಥೆಯನ್ನು ರೂಪಿಸಲು ಮತ್ತು ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿದ ಪ್ರತಿಯೊಬ್ಬರ ಕೊಡುಗೆಯನ್ನು ನಾನು ಈ ಸಂದರ್ಭದಲ್ಲಿ ಗೌರವಿಸುತ್ತೇನೆ,” ಎಂದು ತಿಳಿಸಿದರು.
ಈ ಟ್ರೋಫಿಯನ್ನು ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅರ್ಪಿಸಿದರು. ತಮ್ಮ ಅವಧಿಯಲ್ಲಿ ತಂಡದ ರಚನೆ ಮತ್ತು ಸ್ಥಿರತೆಯನ್ನು ಅತ್ಯುತ್ತಮವಾಗಿ ಕಾಯ್ದುಕೊಂಡಿದ್ದಕ್ಕಾಗಿ ದ್ರಾವಿಡ್ ಅವರನ್ನು ಗಂಭೀರ್ ಮುಕ್ತಕಂಠದಿಂದ ಶ್ಲಾಘಿಸಿದರು. ಅಲ್ಲದೆ, ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ ಮುಖ್ಯಸ್ಥರಾಗಿರುವ ವಿ.ವಿ.ಎಸ್. ಲಕ್ಷ್ಮಣ್ ಅವರ ಪಾತ್ರವನ್ನೂ ಗಂಭೀರ್ ವಿಶೇಷವಾಗಿ ಉಲ್ಲೇಖಿಸಿದರು. ರಾಷ್ಟ್ರೀಯ ಮಟ್ಟದ ತಂಡಕ್ಕೆ ಅಗತ್ಯವಿರುವ ಪ್ರತಿಭಾವಂತ ಆಟಗಾರರನ್ನು ಬೆಳೆಸುವಲ್ಲಿ ಮತ್ತು ಅವರನ್ನು ಸಜ್ಜುಗೊಳಿಸುವಲ್ಲಿ ಲಕ್ಷ್ಮಣ್ ತೆರೆಮರೆಯಲ್ಲಿ ನಿರ್ವಹಿಸಿದ ಕಾರ್ಯವನ್ನು ಗಂಭೀರ್ ಕೊಂಡಾಡಿದರು.
ಅಗರ್ಕರ್ ಪ್ರಾಮಾಣಿಕತೆ ಬಗ್ಗೆ ಗಂಭೀರ್ ಹೇಳಿದ್ದಿಷ್ಟು
ಸಾಮಾನ್ಯವಾಗಿ ಆಯ್ಕೆ ಸಮಿತಿಯ ಕೆಲಸಗಳು ಟೀಕೆಗೆ ಗುರಿಯಾಗುವುದು ಸಹಜ. ಆದರೆ, ಅಜಿತ್ ಅಗರ್ಕರ್ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಾಗ ತೋರಿದ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಗಂಭೀರ್ ಹೊಗಳಿದರು.
“ಅಜಿತ್ ಅವರು ತಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ. ಅನೇಕ ಬಾರಿ ಅವರು ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೂ, ತಂಡದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರ ಬದ್ಧತೆಯನ್ನು ನಾನು ಗೌರವಿಸುತ್ತೇನೆ,” ಎಂದು ತಿಳಿಸಿದರು.
ಜಯ್ ಶಾ ಬಗ್ಗೆ ಗಂಭೀರ್ ಹೇಳಿದ್ದೇನು?
“ಕೊನೆಯದಾಗಿ, ನಾನು ಜಯ್ ಶಾ ಅವರಿಗೆ ಧನ್ಯವಾದ ಹೇಳಲೇಬೇಕು. ನನ್ನ ಅಧಿಕಾರಾವಧಿಯ ಅತೀ ಕೆಟ್ಟ ಸಮಯದಲ್ಲಿ, ಅಂದರೆ ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ಸರಣಿಯ ಸೋಲಿನ ನಂತರ, ಬಹಳ ಕಡಿಮೆ ಜನರು ನನಗೆ ಕರೆ ಮಾಡಿ ಧೈರ್ಯ ಹೇಳಿದ್ದರು. ಆ ಸಮಯದಲ್ಲಿ ನನಗೆ ಕರೆ ಮಾಡಿ ಬೆಂಬಲ ನೀಡಿದ ಏಕೈಕ ವ್ಯಕ್ತಿ ಜಯ್ ಭಾಯ್,” ಎಂದು ಹೇಳುವ ಮೂಲಕ ಗಂಭೀರ್ ಭಾವುಕರಾದರು.
ರವಿಶಾಸ್ತ್ರಿ ಕಾಮೆಂಟರಿಯಲ್ಲಿ ಎಡವಟ್ಟು
ಭಾರತದ ಗೆಲುವಿನ ಅಂತಿಮ ಕ್ಷಣದಲ್ಲಿ ಖ್ಯಾತ ಕಾಮೆಂಟೇಟರ್ ರವಿಶಾಸ್ತ್ರಿ ಮಾಡಿದ ಸಣ್ಣ ಎಡವಟ್ಟು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ಗಳ ಸುರಿಮಳೆಗೆ ಕಾರಣವಾಗಿದೆ. ಅಭಿಷೇಕ್ ಶರ್ಮಾ ಅವರು 10ನೇ ವಿಕೆಟ್ ಪಡೆದಾಗ, ಶಾಸ್ತ್ರಿ ಅದನ್ನು “9ನೇ ವಿಕೆಟ್” ಎಂದು ತಪ್ಪಾಗಿ ಕರೆದರು. ಕೂಡಲೇ ತಿದ್ದಿಕೊಂಡರೂ, ಆ ಐತಿಹಾಸಿಕ ಕ್ಷಣದ ಮ್ಯಾಜಿಕ್ ಮಿಸ್ ಆಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/gautam-gambhir-dedicates-india-s-t20-world-cup-2026-victory-to-rahul-dravid-vvs-laxman-agarkar-446517.html. xn--babytilbehr-pgb.com does not claim ownership of this content. All rights remain with the original publisher.
