
Sports
oi-Madhusudhan KR
Robin Uthappa: ಭಾರತದ ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಅವರು ಅಚ್ಚರಿ ಭವಿಷ್ಯವಾಣಿ ನುಡಿದಿದ್ದಾರೆ. 2026ರ ಐಪಿಎಲ್ ಟೂರ್ನಿಯೇ ಎಂ.ಎಸ್.ಧೋನಿ ಅವರ ಕೊನೆಯ ಐಪಿಎಲ್ ಸೀಸನ್ ಆಗಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ನಾಯಕತ್ವದ ಬದಲಾವಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಧೋನಿ ಅವರ ಪ್ರತಿಯೊಂದು ಐಪಿಎಲ್ ಸೀಸನ್ ಕೂಡ ಅಭಿಮಾನಿಗಳಿಗೆ ಭಾವನಾತ್ಮಕವಾಗಿರುತ್ತದೆ. ಹೀಗಾಗಿ, ಇದು ನಿಜವಾಗಿಯೂ ಅವರ ಕೊನೆಯ ಟೂರ್ನಿ ಆಗಲಿದೆಯೇ ಎಂಬ ಚರ್ಚೆ ಈಗ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. ಧೋನಿ ಮೈದಾನದಲ್ಲಿ ಇರಲಿ, ಇಲ್ಲದಿರಲಿ ಅವರ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.

ಸಿಎಸ್ಕೆ ಸಿಇಒ ಹೇಳುವುದೇನು?
44 ವರ್ಷ ವಯಸ್ಸಿನ ಎಂ.ಎಸ್.ಧೋನಿ ಅವರು ಈ ಬಾರಿಯ ಐಪಿಎಲ್ನ ಎಲ್ಲಾ ಪಂದ್ಯಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದಾರೆ. ವಯಸ್ಸು ಮತ್ತು ಫಿಟ್ನೆಸ್ ಕುರಿತಾದ ಎಲ್ಲಾ ಊಹಾಪೋಹಗಳನ್ನು ಅವರು ತಳ್ಳಿಹಾಕಿದ್ದಾರೆ. ಇದು ಸಿಎಸ್ಕೆ ಪರ ಧೋನಿ ಆಡುತ್ತಿರುವ 17ನೇ ಐಪಿಎಲ್ ಸೀಸನ್ ಆಗಿರಲಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯೂ ಇವರ ಹೆಸರಿನಲ್ಲಿರಲಿದೆ.
ರಾಬಿನ್ ಉತ್ತಪ್ಪ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು, ಇದು ಧೋನಿ ಅವರ ಕೊನೆಯ ಐಪಿಎಲ್ ಸೀಸನ್ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಬಗ್ಗೆ ಧೋನಿ ಅಥವಾ ಸಿಎಸ್ಕೆ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಧೋನಿ ಅವರು ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುತ್ತಾರೋ ಅಥವಾ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿಯುತ್ತಾರೋ ಎಂಬುದನ್ನು ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ ಎಂದು ಸಿಎಸ್ಕೆ ಸಿಇಒ ತಿಳಿಸಿದ್ದಾರೆ.
ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಉತ್ತಪ್ಪ ಹೇಳಿದ್ದೇನು?
“ಇದು ಧೋನಿಯವರ ಕೊನೆಯ ಐಪಿಎಲ್ ಸೀಸನ್ ಆಗಬಹುದು. ಈ ವರ್ಷ ಅವರು ಆಟಗಾರನ ಜೊತೆಗೆ ಮಾರ್ಗದರ್ಶಕ ಪಾತ್ರದಲ್ಲೂ ಕಾಣಿಸಿಕೊಳ್ಳಬಹುದು. ಹಿಂದಿನಂತೆ ದೊಡ್ಡ ಪಾತ್ರವಹಿಸುವುದಿಲ್ಲ ಎಂದು ನನಗೆ ಅನಿಸುತ್ತದೆ. ಅವರು ಈ ಹಿಂದೆ ಆಡುತ್ತಿದ್ದಂತೆ 7ನೇ ಕ್ರಮಾಂಕದಲ್ಲಿ ಬರುವ ಬದಲು, 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಧೋನಿ ಅವರು ನಾಯಕ ರುತುರಾಜ್ ಗಾಯಕ್ವಾಡ್ಗೆ ಸ್ವತಂತ್ರವಾಗಿ ತಂಡವನ್ನು ಮುನ್ನಡೆಸಲು ಮತ್ತು ತಮ್ಮದೇ ಆದ ‘ಛಾಪು’ ಮೂಡಿಸಲು ಅವಕಾಶ ನೀಡಲಿದ್ದಾರೆ,” ಎಂದು ಉತ್ತಪ್ಪ ಹೇಳಿದ್ದಾರೆ.
ಸಿಎಸ್ಕೆ ತಂಡವು ರಾಜಸ್ಥಾನ್ ರಾಯಲ್ಸ್ನಿಂದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಅವರನ್ನು ಟ್ರೇಡ್ ಮಾಡಿಕೊಂಡಿದೆ. ಈ ಡೀಲ್ನ ಭಾಗವಾಗಿ ಸಿಎಸ್ಕೆ ತಂಡವು ತನ್ನ ದೀರ್ಘಕಾಲದ ಆಟಗಾರರಾದ ರವೀಂದ್ರ ಜಡೇಜಾ ಮತ್ತು ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ರಾಜಸ್ಥಾನ್ ರಾಯಲ್ಸ್ಗೆ ಬಿಟ್ಟುಕೊಟ್ಟಿದೆ.
‘ರುತುರಾಜ್ ನಾಯಕರಾಗಿ ಮುಂದುವರೆಯಬೇಕು’
ಎಂ.ಎಸ್.ಧೋನಿ ಅವರ ನಿವೃತ್ತಿಯ ನಂತರ ತಂಡವನ್ನು ಮುನ್ನಡೆಸಲು ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಲು ಸಂಜು ಸ್ಯಾಮ್ಸನ್ ಸೂಕ್ತ ಆಯ್ಕೆ ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ಭಾವಿಸಿದೆ ಎಂದು ವರದಿಯಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ, ನಾಯಕತ್ವದ ಜವಾಬ್ದಾರಿಯನ್ನು ರುತುರಾಜ್ ಗಾಯಕ್ವಾಡ್ ಅವರಿಂದ ಕಸಿದುಕೊಳ್ಳಬಾರದು ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
“ರುತುರಾಜ್ ಗಾಯಕ್ವಾಡ್ ಅವರಿಗೆ ತಂಡವನ್ನು ಮುನ್ನಡೆಸಲು ಇನ್ನಷ್ಟು ಸಮಯ ನೀಡಬೇಕು. ಅವರು ಇನ್ನೂ ನಾಯಕತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಧೋನಿ ಆಡದ ಸಮಯದಲ್ಲಿ ನೀವು ತಂಡವನ್ನು ಮುನ್ನಡೆಸಿ, ನಿಮ್ಮದೇ ಶೈಲಿಯಲ್ಲಿ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸಬೇಕು. ಫ್ರಾಂಚೈಸಿಗೆ ಗಾಯಕ್ವಾಡ್ ತುಂಬಾ ತಪ್ಪುಗಳನ್ನು ಮಾಡುತ್ತಿದ್ದಾರೆ ಎನ್ನುವ ಭಾವನೆ ಬಂದರೆ ಅದು ಬೇರೆ ವಿಷಯ. ಆದರೆ ಸಂಜು ಸ್ಯಾಮ್ಸನ್ ತಂಡಕ್ಕೆ ಬಂದಿದ್ದಾರೆ ಎಂಬ ಕಾರಣಕ್ಕೆ ನಾಯಕತ್ವವನ್ನು ಬದಲಾಯಿಸಬಾರದು,” ಎಂದು ಉತ್ತಪ್ಪ ಹೇಳಿದ್ದಾರೆ.
ರಾಬಿನ್ ಉತ್ತಪ್ಪ ಅವರು ಯುವ ನಾಯಕ ರುತುರಾಜ್ ಗಾಯಕ್ವಾಡ್ ಅವರ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಿದ್ದು, ಅವರಿಗೆ ಬೆಂಬಲ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಸಿಎಸ್ಕೆ ಮ್ಯಾನೇಜ್ಮೆಂಟ್ ಕೂಡ ರುತುರಾಜ್ ಗಾಯಕ್ವಾಡ್ ಅವರನ್ನೇ ನಾಯಕರನ್ನಾಗಿ ಮುಂದುವರಿಸಲು ಈಗಾಗಲೇ ಅಧಿಕೃತವಾಗಿ ಖಚಿತಪಡಿಸಿದೆ. ಒಟ್ಟಿನಲ್ಲಿ ಧೋನಿ ಅವರು ಈ ಬಾರಿಯೂ ಸಿಎಸ್ಕೆ ತಂಡದ ಪ್ರಮುಖ ಭಾಗವಾಗಿದ್ದು, ಅವರ ಉಪಸ್ಥಿತಿಯಿಂದ ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶನ ಸಿಕ್ಕಂತಾಗಲಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/robin-uthappa-predicts-ipl-2026-could-be-ms-dhoni-s-final-season-backs-ruturaj-as-csk-captain-447207.html. xn--babytilbehr-pgb.com does not claim ownership of this content. All rights remain with the original publisher.
