
Sports
oi-Madhusudhan KR
Anil Kumble: ಈಗಾಗಲೇ ಐಪಿಎಲ್ 2026 ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ನಟ ಶಾರುಖ್ ಖಾನ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮಾಡಿದ ದೊಡ್ಡ ಎಡವಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಇದರ ಲಾಭವನ್ನು ಯಾರು ಪಡೆದುಕೊಂಡರು ಅಂತಲೂ ಹೇಳಿ ಗಮನ ಸೆಳೆದಿದ್ದಾರೆ.
ಕೆಕೆಆರ್ ತಂಡವು ಐಪಿಎಲ್ 2024ರ ಪ್ರಶಸ್ತಿಯನ್ನು ಗೆದ್ದ ಬಳಿಕ, ತಮ್ಮ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸ್ಟಾರ್ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಬಳಿಕ ಅದೇ ವರ್ಷದ ಮೆಗಾ ಹರಾಜಿನಲ್ಲಿ ಈ ಇಬ್ಬರು ಆಟಗಾರರು ಮತ್ತೆ ಹರಾಜಿಗೆ ಬಂದರು.

ಆ ವೇಳೆ ಹರಾಜಿನಲ್ಲಿ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದ್ದು, ಅವರ ನಾಯಕತ್ವದಲ್ಲಿ 2025ರ 18ನೇ ಆವೃತ್ತಿಯಲ್ಲಿ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್ವರೆಗೆ ತಲುಪಿತು. ಮತ್ತೊಂದೆಡೆ, ಫಿಲ್ ಸಾಲ್ಟ್ ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾದರು. ಈ ಇಬ್ಬರು ಪ್ರಮುಖ ಆಟಗಾರರನ್ನು ಕೆಕೆಆರ್ ಕೈಬಿಟ್ಟ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಭಾರತದ ಮಾಜಿ ನಾಯಕ ಹಾಗೂ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು, ಇದು ತಪ್ಪಾದ ನಿರ್ಧಾರ ಎಂದು ನೇರವಾಗಿ ಹೇಳಿದ್ದಾರೆ.
ಕೆಕೆಆರ್ ಮಾಡಿದ ತಪ್ಪುಗಳು
ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ ನಂತರ ಆಟಗಾರರ ಸಮತೋಲನವನ್ನು ಕಾಯ್ದುಕೊಳ್ಳುವ ಬದಲು, ಇಂತಹ ಪ್ರಮುಖ ಆಟಗಾರರನ್ನು ಕಳೆದುಕೊಂಡಿದ್ದು ತಂಡಕ್ಕೆ ಹಿನ್ನಡೆಯಾಯಿತು ಎಂಬುದು ಕುಂಬ್ಳೆ ಅವರ ಆಶಯವಾಗಿದೆ. “ಎರಡು ವರ್ಷಗಳ ಹಿಂದೆ ಕೆಕೆಆರ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಮೂರನೇ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಆ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್. ಈ ಇಬ್ಬರೂ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದರೂ, ಕೆಕೆಆರ್ ಈ ಇಬ್ಬರನ್ನೂ ಕೈಬಿಟ್ಟು ತಪ್ಪು ಮಾಡಿತು,” ಎಂದು ಹೇಳಿದರು.
ಟ್ರೋಫಿ ಗೆದ್ದುಕೊಟ್ಟ ನಾಯಕನನ್ನೇ ಕೈಬಿಟ್ಟ ಕೆಕೆಆರ್
“ಆಟಗಾರರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಕೆಕೆಆರ್ ಬಳಿ ಯಾವುದೇ ಸ್ಥಿರತೆ ಕಾಣಿಸುತ್ತಿಲ್ಲ. ಅಯ್ಯರ್ ಮತ್ತು ಸಾಲ್ಟ್ ಅವರನ್ನು ಬಿಡುವ ನಿರ್ಧಾರ ತಪ್ಪಾಗಿತ್ತು. ಈ ನಿರ್ಧಾರದಿಂದಾಗಿ ಕೆಕೆಆರ್ ತಂಡವು ಐಪಿಎಲ್ ಗೆದ್ದ ನಾಯಕನನ್ನೇ ಕಳೆದುಕೊಂಡಂತಾಗಿದೆ,” ಎಂದು ಅನಿಲ್ ಕುಂಬ್ಳೆ ಅವರು ಹೇಳಿದ್ದಾರೆ.
ಕೆಕೆಆರ್ ಪರ ಮಿಂಚಿದ್ದ ಅಯ್ಯರ್, ಫಿಲ್ ಸಾಲ್ಟ್
ನಾಯಕತ್ವದ ಜವಾಬ್ದಾರಿಯ ಜೊತೆಗೆ, ಶ್ರೇಯಸ್ ಅಯ್ಯರ್ ಅವರು 2024ರ ಐಪಿಎಲ್ನಲ್ಲಿ ಕೆಕೆಆರ್ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು 15 ಪಂದ್ಯಗಳಲ್ಲಿ 39.00 ಸರಾಸರಿಯಲ್ಲಿ ಮತ್ತು 146.86 ಸ್ಟ್ರೈಕ್ ರೇಟ್ನೊಂದಿಗೆ ಒಟ್ಟು 351 ರನ್ ಗಳಿಸಿದ್ದರು. ಅದೇ ಸೀಸನ್ನಲ್ಲಿ ಫಿಲ್ ಸಾಲ್ಟ್ ಕೂಡ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಅವರು 39.55 ಸರಾಸರಿ ಮತ್ತು 182.01 ಸ್ಟ್ರೈಕ್ ರೇಟ್ನೊಂದಿಗೆ ಒಟ್ಟು 435 ರನ್ ಗಳಿಸಿ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದರು.
2024ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದ ನಂತರ, ನಂತರದ ಸೀಸನ್ನಲ್ಲಿ ಕೆಕೆಆರ್ ತಂಡದ ಪ್ರದರ್ಶನ ಕುಸಿತ ಕಂಡಿತು. ಅಜಿಂಕ್ಯ ರಹಾನೆ ಅವರ ನಾಯಕತ್ವದಲ್ಲಿ ಆಡಿದ ತಂಡವು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಯಿತು. ಆ ಸೀಸನ್ನಲ್ಲಿ ಕೆಕೆಆರ್ ಒಟ್ಟು 14 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳನ್ನು ಮಾತ್ರ ಗೆದ್ದು, ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಮುಕ್ತಾಯಗೊಳಿಸಿತು. ಇದು ತಂಡಕ್ಕೆ ನಿರಾಶಾದಾಯಕ ಫಲಿತಾಂಶವಾಗಿ ಪರಿಣಮಿಸಿತು.
ರಹಾನೆ ನಾಯಕತ್ವದ ಬಗ್ಗೆ ಕುಂಬ್ಳೆ ಹೇಳಿದ್ದೇನು?
“ಅಜಿಂಕ್ಯ ರಹಾನೆ ಅನುಭವಿ ಆಟಗಾರ. ಅವರು ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ತಂಡ ಹಾಗೂ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ಅವರು ಇನ್ನೂ ನಾಯಕನಾಗಿ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಟ್ರೋಫಿ ಗೆದ್ದ ನಾಯಕ ತಂಡದಲ್ಲಿದ್ದರೆ, ಅದು ದೊಡ್ಡ ಪ್ರಯೋಜನವಾಗುತ್ತದೆ. ಆ ರೀತಿಯ ಅವಕಾಶವನ್ನು ಕೆಕೆಆರ್ ಕೈಬಿಟ್ಟಿದೆ,” ಎಂದು ಕುಂಬ್ಳೆ ಹೇಳಿದ್ದಾರೆ.
“ತಂಡದ ಪ್ರಮುಖ ಆಟಗಾರರನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಕೆಕೆಆರ್ ಕಲಿಯಬೇಕು. ಇಲ್ಲವಾದರೆ ಅವರು ನಿರಂತರವಾಗಿ ಸಂಕಷ್ಟ ಅನುಭವಿಸುತ್ತಾರೆ ಮತ್ತು ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಇರಲು ಸಾಧ್ಯವಾಗುವುದಿಲ್ಲ,” ಎಂದು ಅನಿಲ್ ಕುಂಬ್ಳೆ ಅವರು ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ. ಇನ್ನೂ ಅಜಿಂಕ್ಯ ರಹಾನೆ ಅವರು ಕೆಕೆಆರ್ ತಂಡವನ್ನು ಐಪಿಎಲ್ 2026ರ ಸೀಸನ್ನಲ್ಲಿಯೂ ಮುನ್ನಡೆಸುವ ಸಾಧ್ಯತೆಯಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ತನ್ನ ಅಭಿಯಾನವನ್ನು ಮಾರ್ಚ್ 29ರಂದು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/anil-kumble-slams-kkr-for-releasing-shreyas-iyer-and-phil-salt-after-ipl-2024-title-win-know-detail-447213.html. xn--babytilbehr-pgb.com does not claim ownership of this content. All rights remain with the original publisher.
