
Karnataka
-Manohara M
ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ‘ಆಟೋ ಮ್ಯುಟೇಶನ್’ ವ್ಯವಸ್ಥೆಯ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಮಾಹಿತಿ ಹಂಚಿಕೊಂಡರು. ಆಸ್ತಿ ನೋಂದಣಿ ಮಾಡಿಸಿದ ನಂತರ ಖಾತೆ (ಮ್ಯುಟೇಶನ್) ಬದಲಾವಣೆಗಾಗಿ ಕಚೇರಿಗಳಿಗೆ ಅಲೆಯುವ ಮತ್ತು ಮಧ್ಯವರ್ತಿಗಳ ಮೊರೆ ಹೋಗುವುದಕ್ಕೆ ಕಡಿವಾಣ ಹಾಕಲಾಗಿದೆ. ರಾಜ್ಯ ಕಂದಾಯ ಇಲಾಖೆ ಜಾರಿಗೆ ತಂದಿರುವ ‘ಆಟೋ ಮ್ಯುಟೇಶನ್’ ತಂತ್ರಜ್ಞಾನದಿಂದಾಗಿ ಸದ್ಯ ಶೇ.98ರಷ್ಟು ಖಾತೆಗಳು ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತಿವೆ ಎಂದು ತಿಳಿಸಿದರು.
ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ತಂದಿರುವ ಡಿಜಿಟಲ್ ಸುಧಾರಣೆಗಳ ರಿಪೋರ್ಟ್ ಕಾರ್ಡ್ ಮುಂದಿಟ್ಟರು. ಆಟೋ ಮ್ಯುಟೇಶನ್ ವೇಗ ನೀಡಲಾಗಿದೆ. ಕಳೆದ ವರ್ಷವಷ್ಟೇ ಶೇ. 66ರಷ್ಟಿದ್ದ ಸ್ವಯಂಚಾಲಿತ ಖಾತೆ ಬದಲಾವಣೆ ಪ್ರಮಾಣ, ಕಳೆದ ತಿಂಗಳು ಜಾರಿಗೆ ತಂದ ಹೊಸ ಸುಧಾರಣೆಯಿಂದಾಗಿ ಈಗ ಶೇ 98ಕ್ಕೆ ಏರಿಕೆಯಾಗಿದೆ. ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅಥವಾ ಗರಿಷ್ಠ 16 ದಿನಗಳ ಒಳಗಾಗಿ ಯಾವುದೇ ತಕರಾರು ಇಲ್ಲದಿದ್ದಲ್ಲಿ ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಮೂಗರ್ಜಿ ತಕರಾರುಗಳಿಗೆ ಕಡಿವಾಣ
ಹಿಂದೆ ಕಂದಾಯ ನಿರೀಕ್ಷಕರು (RI) ವಿನಾಕಾರಣ ತಕರಾರು ಅರ್ಜಿಗಳನ್ನು ಸಲ್ಲಿಸಿ ಪ್ರಕ್ರಿಯೆ ವಿಳಂಬ ಮಾಡುತ್ತಿದ್ದರು ಎಂಬ ದೂರುಗಳಿದ್ದವು. ಇದನ್ನು ಹೋಗಲಾಡಿಸಲು ಸರ್ಕಾರ ಈಗ ಕಠಿಣ ನಿಯಮ ಜಾರಿಗೆ ತಂದಿದೆ. ಇನ್ನು ಮುಂದೆ ಖಾಸಗಿ ಆಸ್ತಿ ವಿಚಾರದಲ್ಲಿ ಆರ್ಐಗಳು ತಕರಾರು ಸಲ್ಲಿಸುವಂತಿಲ್ಲ. ಕೇವಲ ಸರ್ಕಾರದ ಹಿತಾಸಕ್ತಿ ಇದ್ದಾಗ ಮಾತ್ರ ಅವರು ಮಧ್ಯಪ್ರವೇಶಿಸಬಹುದು. ಅಷ್ಟೇ ಅಲ್ಲದೆ, ತಕರಾರು ಸಲ್ಲಿಸುವವರಿಗೆ ‘ಆಧಾರ್ ಇ-ಕೆವೈಸಿ’ ಕಡ್ಡಾಯಗೊಳಿಸಲಾಗಿದೆ. ಇದರಿಂದ ಒಂದೇ ವ್ಯಕ್ತಿ ಅನಾಮಧೇಯವಾಗಿ ಹತ್ತಾರು ಅರ್ಜಿಗಳನ್ನು ಸಲ್ಲಿಸಿ ಜನರಿಗೆ ಕಿರುಕುಳ ನೀಡಲು ಸಾಧ್ಯವಿಲ್ಲ. ಈ ಮೂಲಕ ‘ಮೂಗರ್ಜಿ’ ತಕರಾರುಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದರು.
ಆಸ್ತಿ ದಾಖಲೆಗಳಲ್ಲಿನ ಸಣ್ಣಪುಟ್ಟ ತಿದ್ದುಪಡಿಗಳನ್ನು (RRT Correction) ಸುಲಭಗೊಳಿಸಲು ಈಗ ಆನ್ಲೈನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಹಿಂದೆ ಈ ಪ್ರಕ್ರಿಯೆಯು ಅತ್ಯಂತ ಜಟಿಲವಾಗಿದ್ದು, ಜನರಿಗೆ ಅರ್ಥವಾಗುತ್ತಿರಲಿಲ್ಲ. ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ, ಯಾವ ಅಧಿಕಾರಿಯ ಬಳಿ ಎಷ್ಟು ದಿನಗಳಿಂದ ಕಡತ ಬಾಕಿ ಇದೆ ಎಂಬುದನ್ನು ಪತ್ತೆಹಚ್ಚಲು ಸುಲಭವಾಗುತ್ತದೆ. ಹೆಚ್ಚು ದಿನ ಬಾಕಿ ಇರುವ ಪ್ರಕರಣಗಳನ್ನು ಗುರುತಿಸಿ ಶೀಘ್ರವಾಗಿ ವಿಲೇವಾರಿ ಮಾಡಲು ಈ ತಂತ್ರಜ್ಞಾನ ಪೂರಕವಾಗಿದೆ ಎಂದು ಸಚಿವರು ವಿವರಿಸಿದರು.
ಹತ್ತಾರು ವರ್ಷಗಳ ಕೇಸ್ ವಿಲೇವಾರಿ
ಸಚಿವರು ಜವಾಬ್ದಾರಿ ವಹಿಸಿಕೊಂಡ ಸಮಯದಲ್ಲಿ ತಹಶೀಲ್ದಾರ್ ಮತ್ತು ಎಸಿ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇದ್ದವು. ಇವುಗಳ ವಿಲೇವಾರಿಗಾಗಿ ಬೆಂಗಳೂರಿಗೆ 8 ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯಾದ್ಯಂತ 27 ವಿಶೇಷ ಎಸಿಗಳನ್ನು ನೇಮಕ ಮಾಡಲಾಗಿದೆ. ಪರಿಣಾಮವಾಗಿ ತಹಶೀಲ್ದಾರ್ ನ್ಯಾಯಾಲಯದಲ್ಲಿದ್ದ 10,774 ಪ್ರಕರಣಗಳಲ್ಲಿ ಈಗ ಕೇವಲ 137 ಮಾತ್ರ ಬಾಕಿ ಇವೆ. ಎಸಿ ನ್ಯಾಯಾಲಯಗಳಲ್ಲಿದ್ದ 73,634 ಪ್ರಕರಣಗಳ ಪೈಕಿ ಶೇ.90ರಷ್ಟು ಇತ್ಯರ್ಥವಾಗಿದ್ದು, ಪ್ರಸ್ತುತ 10,255 ಪ್ರಕರಣಗಳು ಮಾತ್ರ ಬಾಕಿ ಇವೆ. ಈ ಬೃಹತ್ ಸುಧಾರಣೆಯು ಜನಸಾಮಾನ್ಯರಿಗೆ ನ್ಯಾಯ ಸಿಗುವಂತೆ ಮಾಡಿದೆ ಎಂದು ಹೇಳಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/property-mutation-98-percent-auto-updated-after-registration-revenue-minister-krishna-byre-gowda-011-447535.html. xn--babytilbehr-pgb.com does not claim ownership of this content. All rights remain with the original publisher.
