‘ಗ್ಯಾರಂಟಿ ಸಮಿತಿ’ ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. | Guarantee Committee Salaries Exceed Chief Secretary’s Pay: BJP Alleges Rs 6.6 Crore Annual Loot

Karnataka

oi-Shankrappa Parangi

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದೆಲ್ಲ ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಈ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ’ಯನ್ನು ಸರ್ಕಾರವೇ ರಚಿಸಿದೆ. ಈ ಸಮಿತಿ ಅಧ್ಯಕ್ಷರು, ಸಿಬ್ಬಂದಿಗೆ ನೀಡುತ್ತಿರುವ ಹಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಾಸಿಕ ವೇತನಕ್ಕಿಗಿಂತಲೂ ಅಧಿಕವಾಗಿದೆ. ಈ ಮೂಲಕ ಜನರ ತೆರಿಗೆ ಹಣ ಸರ್ಕಾರದಲ್ಲಿ ಅತೃಪ್ತಗೊಂಡ ನಾಯಕರಿಗೆ ನೀಡಲಾಗುತ್ತಿದೆ? ಎಂಬ ಆರೋಪ ಕೇಳಿ ಬಂದಿದೆ.

ಸದನಕ್ಕೆ ರಾಜ್ಯ ಸರ್ಕಾರವೇ ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೀಡುತ್ತಿರುವ ಮಾಸಿಕ ವೇತನದ ಲೆಕ್ಕ ನೀಡಿದೆ. ಅದರ ಆಧಾರದಲ್ಲಿ ಬಿಜೆಪಿ ನಾಯಕರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಕಟುವಾಗಿ ಪ್ರಶ್ನಿಸಿದ್ದಾರೆ. ಸಮಿತಿ ಸಿಬ್ಬಂದಿಗೆ ಮಾಸಿಕ ಲಕ್ಷ ಲಕ್ಷ ಸಂಬಂಧ ನೀಡುತ್ತಿದ್ದು, ಇದು ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಆಗುತ್ತದೆ.

Guarantee Committee Salaries

ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ಎಚ್‌.ಎಂ. ರೇವಣ್ಣ ಅವರಿಗೆ ತಿಂಗಳಿಗೆ ಬರೋಬ್ಬರಿ 5.98 ಲಕ್ಷ ರೂ ವೇತನವನ್ನು ನೀಡುತ್ತಿರುವುದು ಗೊತ್ತಾಗಿದೆ. ಗಾಯದ ಮೇಲೆ ಬರೆ ಇಟ್ಟಂತೆ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರ ವೇತನ ತಿಂಗಳಿಗೆ 4.43 ಲಕ್ಷ ಪಾವತಿಯಾಗುತ್ತಿದೆ. ಗ್ಯಾರಂಟಿ ಸಮಿತಿಯ ಅಧ್ಯಕ್ಷರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವೇತನ ತಿಂಗಳಿಗೆ 6.51 ಲಕ್ಷ ರೂ ಆಗುತ್ತಿದೆ ಎಂದು ಯತ್ನಾಳ್ ಅವರು ಎಕ್ಸ್‌ ಪೋಸ್ಟ್‌ ಮೂಲಕ ಸರ್ಕಾರದ ನಡೆ ಖಂಡಿಸಿದ್ದಾರೆ.

ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಮಾಸಿಕ ವೇತನ 20.63 ಲಕ್ಷ ರೂ ಆಗುತ್ತಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಮಾಸಿಕ ವೇತನವೇ 2.25 ಲಕ್ಷ ಇರುವಾಗ, ಗ್ಯಾರಂಟಿ ಸಮಿತಿಯ ಅಧ್ಯಕ್ಷರಿಗೆ ಬರೋಬ್ಬರಿ 5.98 ಲಕ್ಷ ಕೊಡುವ ಔಚಿತ್ಯವೇನು? ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಅವೈಜ್ಞಾನಿಕ ವೇತನ ಪಾವತಿ ತಡೆಗೆ ಆಗ್ರಹ

17 ಬಾರಿ ಬಜೆಟ್ ನೀಡಿದ ಮುಖ್ಯಮಂತ್ರಿಗಳು ಈ ರೀತಿಯಾದ ಅಳತೆಮೀರಿದ , ವಿವೇಚನಾರಹಿತ, ವ್ಯರ್ಥವ್ಯಯ ಮಾಡುತ್ತಿರುವ ಮುಖ್ಯ ಮಂತ್ರಿಗಳು ರಾಜ್ಯದ ಹಿತಕ್ಕೆ, ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಅನುಪಯುಕ್ತ ಕಾರ್ಯಗಳಿಗೆ ಉಪಯೋಗಿಸುತ್ತಿರುವುದು ನಿಜಕ್ಕೂ ದುರ್ದೈವ. ಮಾನ್ಯ ಮುಖ್ಯ ಮಂತ್ರಿಗಳು ಕೂಡಲೇ ಸಮಿತಿಯ ಎಲ್ಲ ಅಧ್ಯಕ್ಷರನ್ನು ಬರ್ಖಾಸ್ತು ಮಾಡುವ ಮೂಲಕ ಆರ್ಥಿಕ ಮೇಲ್ಪಂಕ್ತಿ ಹಾಕಿಕೊಡಬೇಕು. ಈ ರೀತಿಯಾದ ಅವೈಜ್ಞಾನಿಕ ವೇತನ ಪಾವತಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು.

“ಕಾಂಗ್ರೆಸ್ ಅತೃಪ್ತರ ಜೇಬು ತುಂಬಿಸುವ ಗಂಜಿ ಕೇಂದ್ರ’

ಆರ್.ಅಶೋಕ ಅವರು ಪ್ರತಿಕ್ರಿಯಿಸಿ ಇದೆನು ‘ಗ್ಯಾರಂಟಿ ಅನುಷ್ಠಾನ ಸಮಿತಿ”ಯೋ ಅಥವಾ “ಕಾಂಗ್ರೆಸ್ ಅತೃಪ್ತರ ಜೇಬು ತುಂಬಿಸುವ ಗಂಜಿ ಕೇಂದ್ರ”ವೋ? ಎಂದು ಕಿಡಿ ಕಾರಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಬಡವರ ಉದ್ದಾರ ಮಾಡುತ್ತಿದ್ದೇವೆ ಎಂದು ಡಂಗುರ ಸಾರುವ ಈ ಕಾಂಗ್ರೆಸ್ ಸರ್ಕಾರ, ಒಳಗೊಳಗೆ ತನ್ನ ಪಕ್ಷದ ಅತೃಪ್ತ ನಾಯಕರಿಗೆ ಲಕ್ಷ ಲಕ್ಷ ರೂಪಾಯಿ ಸಂಬಳದ ಉಡುಗೊರೆ ನೀಡುತ್ತಿದೆ! ಎಂದು ಕುಟಿಕಿದ್ದಾರೆ.

ಸರ್ಕಾರ ಸದನಕ್ಕೆ ನೀಡಿರುವ ಅಧಿಕೃತ ದಾಖಲೆಗಳೇ ಈ ‘ಲಕ್ಷಾಧಿಪತಿ’ ಗಂಜಿ ಕೇಂದ್ರದ ಸಾಕ್ಷಿ. ಗ್ಯಾರೆಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅತೃಪ್ತರ ಗಂಜಿ ಕೇಂದ್ರದ ಲೆಕ್ಕ ಇಲ್ಲಿದೆ ಎಂದು ಸರ್ಕಾರ ಪಾವತಿಸುತ್ತಿರುವ ವೇತನ ಪಟ್ಟಿ ಹಂಚಿಕೊಂಡಿದ್ದಾರೆ.

* ಸಮಿತಿ ಅಧ್ಯಕ್ಷರು (ಹೆಚ್.ಎಂ. ರೇವಣ್ಣ): ಮಾಸಿಕ ವೇತನ ₹5,98,487 (ಸುಮಾರು 6 ಲಕ್ಷ! ರೂ)
* 5 ಉಪಾಧ್ಯಕ್ಷರ ಒಟ್ಟು ಮಾಸಿಕ ವೇತನ: ₹22,19,325 (ತಲಾ 4,43,865 ರೂಪಾಯಿ)
* 6 ಕಚೇರಿಗಳ ಸಿಬ್ಬಂದಿ ವೆಚ್ಚ (ಫೆಬ್ರವರಿ ತಿಂಗಳ): ₹27,15,304
ಸಮಿತಿಯ ಒಟ್ಟು ಮಾಸಿಕ ವೆಚ್ಚ: ₹55,33,116 (55 ಲಕ್ಷಕ್ಕೂ ಅಧಿಕ!)

ವರ್ಷಕ್ಕೆ ₹6.6 ಕೋಟಿ ಲೂಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ನಿಮ್ಮ ಪಕ್ಷದ ಅತೃಪ್ತ ಆತ್ಮಗಳನ್ನು ಸಾಕಲು ವರ್ಷಕ್ಕೆ 6.6 ಕೋಟಿ ರೂಪಾಯಿ ಲೂಟಿ ಹೊಡೆಯುತ್ತಿದ್ದೀರಿ. ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಇಡೀ ಸರ್ಕಾರಿ ಯಂತ್ರವೇ ಇರುವಾಗ, ಈ ರಾಜಕೀಯ ಗಂಜಿ ಕೇಂದ್ರದ ಅಗತ್ಯವೇನಿತ್ತು?. ಇದನ್ನು “ಸಾಂಸ್ಥಿಕ ಭ್ರಷ್ಟಾಚಾರ”, ” ಸಾಂಸ್ಥಿಕ ಲೂಟಿ” ಅನ್ನದೆ ಇನ್ನೇನನ್ನಬೇಕು? ಗ್ಯಾರಂಟಿ ಹಣಕ್ಕೆ ಕಾಯುವ ಬಡವರಿಗೆ “ಪ್ರತಿ ತಿಂಗಳು ಸರಿಯಾಗಿ ಕೊಡೋದಕ್ಕೆ ಇದೇನು ಸಂಬಳಾನಾ” ಎನ್ನುತ್ತೀರಿ, ಆದರೆ ನಿಮ್ಮ ಪಕ್ಷದ ಅತೃಪ್ತರ ಜೇಬು ತುಂಬಿಸಲು ತಿಂಗಳಿಗೆ 55 ಲಕ್ಷ ಎಲ್ಲಿಂದ ಬರುತ್ತದೆ?

ಇದು ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲ, ಇದು “ಅತೃಪ್ತ ಕಾಂಗ್ರೆಸ್ಸಿಗರ ಪುನರ್ವಸತಿ ಕೇಂದ್ರ”. ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ಹೀಗೆ ಲೂಟಿ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರದ ‘ಪರ್ಸಂಟೇಜ್ ಮತ್ತು ಪೇಮೆಂಟ್’ ರಾಜಕಾರಣಕ್ಕೆ ಮಂಗಳ ಹಾಡುವ ಕಾಲ ಹತ್ತಿರ ಬಂದಿದೆ ಎಂದು ಅವರು ದೂರಿದ್ದಾರೆ. ಸರ್ಕಾರದ ಈನಿರ್ಧಾರಕ್ಕೆ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗುತ್ತಿದೆ. ಶಾಸಕ ಕ್ಷೇತ್ರಕ್ಕೆ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವುದು ಬಿಟ್ಟು ಈ ರೀತಿ ನಮ್ಮ ಹಣ ಪೋಲು ಮಾಡುತ್ತಿರುವುದೇಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/guarantee-committee-salaries-exceed-chief-secretarys-pay-bjp-alleges-rs-6-6-crore-annual-loot-448281.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo