
Karnataka
oi-Pragathi S
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಇಂದು (ಮಾರ್ಚ್ 28, 2026) ರಾಜ್ಯಾದ್ಯಂತ ಕರ್ನಾಟಕ ಎಸ್ಎಸ್ಎಲ್ಸಿ ಗಣಿತ ವಾರ್ಷಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:15 ರವರೆಗೆ ನಡೆದ ಈ ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ವಿಷಯ ತಜ್ಞರು ಮತ್ತು ಶಿಕ್ಷಕರು ಪ್ರಶ್ನೆಪತ್ರಿಕೆಯ ಸಂಪೂರ್ಣ ವಿಶ್ಲೇಷಣೆ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಬಾರಿಯ ಗಣಿತ ಪ್ರಶ್ನೆಪತ್ರಿಕೆಯು ‘ಸಾಧಾರಣ ಅಥವಾ ಮಧ್ಯಮ’ ಕಠಿಣತೆಯಿಂದ ಕೂಡಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ವಿಶ್ಲೇಷಣೆ
ರಾಜ್ಯ ಪಠ್ಯಕ್ರಮದಂತೆ ಒಟ್ಟು 80 ಅಂಕಗಳಿಗೆ ನಡೆದ ಈ ಗಣಿತ ಪರೀಕ್ಷೆಯಲ್ಲಿ ಬಹುಆಯ್ಕೆಯ ಪ್ರಶ್ನೆಗಳು (MCQs), 1 ಅಂಕ, 2 ಅಂಕ, 3 ಅಂಕ, 4 ಅಂಕ ಹಾಗೂ ಒಂದು 5 ಅಂಕದ ದೀರ್ಘ ಉತ್ತರ ಬರೆಯುವ ಪ್ರಶ್ನೆಯನ್ನು (ಒಟ್ಟು 38 ಪ್ರಶ್ನೆಗಳು) ಕೇಳಲಾಗಿತ್ತು.

ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳ ಪ್ರತಿಕ್ರಿಯೆಯ ಪ್ರಕಾರ, 1 ಅಂಕದ ಬಹುಆಯ್ಕೆಯ ಪ್ರಶ್ನೆಗಳು ಹಾಗೂ 2 ಅಂಕದ ಪ್ರಶ್ನೆಗಳು ಸಾಕಷ್ಟು ಸುಲಭವಾಗಿದ್ದವು. ಪ್ರಮುಖ ಸೂತ್ರಗಳು (Formulas) ಮತ್ತು ನೇರ ಲೆಕ್ಕಾಚಾರಗಳನ್ನು ಆಧರಿಸಿದ್ದ ಕಾರಣ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಉತ್ತರಿಸಿದ್ದಾರೆ.
ಅತಿ ಹೆಚ್ಚು ಅಂಕಗಳ ಅಧ್ಯಾಯಗಳು
ಶಿಕ್ಷಣ ಇಲಾಖೆಯು ಮುಂಚಿತವಾಗಿ ನೀಡಿದ್ದ ಬ್ಲೂಪ್ರಿಂಟ್ (Blueprint) ಪ್ರಕಾರವೇ ಪ್ರಶ್ನೆಗಳು ಬಂದಿದ್ದವು ಎಂಬುದು ಬಹುಪಾಲು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.
1. ತ್ರಿಭುಜಗಳು(Triangles): 9 ಅಂಕಗಳು.
2. ಸಮಾಂತರ ಶ್ರೇಢಿಗಳು(Arithmetic Progressions) : 8 ಅಂಕಗಳು.
3. ರೇಖಾತ್ಮಕ ಸಮೀಕರಣಗಳ ಜೋಡಿಗಳು(Pair of Linear Equations in Two Variables): 8 ಅಂಕಗಳು.
4 ಅಂಕಗಳ ಗ್ರಾಫ್ (Graph) ಮತ್ತು ಥೇಲ್ಸ್ / ಪೈಥಾಗರಸ್ ಪ್ರಮೇಯಗಳು (Theorems) ವಿದ್ಯಾರ್ಥಿಗಳಿಗೆ ಮೊದಲೇ ನಿರೀಕ್ಷಿತವಾಗಿದ್ದ ಕಾರಣ ಸ್ಕೋರಿಂಗ್ ಮಾಡಲು ಹೆಚ್ಚು ಸಹಕಾರಿಯಾಗಿದೆ. ಮೇಲ್ಮೈ ವಿಸ್ತೀರ್ಣ ಮತ್ತು ಘನಫಲಗಳು ಅಧ್ಯಾಯದ ಪ್ರಶ್ನೆಗಳು ಕೊಂಚ ಯೋಚಿಸಿ ಬರೆಯುವಂತಿದ್ದವು ಎಂದು ಕೆಲವರು ಹೇಳಿಕೊಂಡಿದ್ದಾರೆ.
ಈ ಬಾರಿಯ ಪ್ರಶ್ನೆಪತ್ರಿಕೆಯಲ್ಲಿ ದೀರ್ಘ ಉತ್ತರದ (3 ಮತ್ತು 4 ಅಂಕಗಳ) ವಿಭಾಗಗಳಲ್ಲಿ ಉತ್ತಮ ಆಂತರಿಕ ಆಯ್ಕೆಗಳನ್ನು ನೀಡಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಕಠಿಣವೆನಿಸಿದ ಪ್ರಶ್ನೆಗಳನ್ನು ಬಿಟ್ಟು, ತಮಗೆ ಚೆನ್ನಾಗಿ ತಿಳಿದಿರುವ ಪರ್ಯಾಯ ಪ್ರಶ್ನೆಗಳನ್ನು ಆಯ್ಕೆ ಮಾಡಿ ಬರೆಯಲು ಸಾಧ್ಯವಾಗಿದೆ. ಇದು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ ಎಂದು ಶಿಕ್ಷಣ ತಜ್ಞರು ವಿಶ್ಲೇಷಿಸಿದ್ದಾರೆ.
ಶೀಘ್ರದಲ್ಲೇ ‘ಆನ್ಸರ್ ಕೀ’ ಪ್ರಕಟ
ಕೆಎಸ್ಇಎಬಿ ಮಂಡಳಿಯು ಶೀಘ್ರದಲ್ಲೇ (ಏಪ್ರಿಲ್ನಲ್ಲಿ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ (kseab.karnataka.gov.in) ಅಧಿಕೃತ ಕೀ ಉತ್ತರಗಳನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶವೂ ಇರಲಿದೆ.
ಮುಂದೇನು?
ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ, ಪರೀಕ್ಷೆಗೆ ಉತ್ತಮವಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳು ಈ ಬಾರಿಯ ಗಣಿತ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸುವ ವಿಶ್ವಾಸದಲ್ಲಿದ್ದಾರೆ. ಗಣಿತ ಪರೀಕ್ಷೆ ಯಶಸ್ವಿಯಾಗಿ ಮುಗಿದಿದ್ದು, ವಿದ್ಯಾರ್ಥಿಗಳು ಇದೀಗ ಮಾರ್ಚ್ 31ರಂದು ನಡೆಯಲಿರುವ ತೃತೀಯ ಭಾಷೆ (ಹಿಂದಿ/ಇತರೆ) ಪರೀಕ್ಷೆಗೆ ಹಾಗೂ ಏಪ್ರಿಲ್ 2ರಂದು ನಡೆಯಲಿರುವ ಸಮಾಜ ವಿಜ್ಞಾನ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿ ಕೊಳ್ಳಬೇಕಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-sslc-maths-exam-analysis-2026-students-find-paper-moderate-answer-key-expected-soon-448647.html. xn--babytilbehr-pgb.com does not claim ownership of this content. All rights remain with the original publisher.
