
India
oi-Madhusudhan KR
Adani Group: ದಿವಾಳಿಯಾಗಿರುವ ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ನ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಶಸ್ವಿ ಬಿಡ್ದಾರರಾಗಿ ಅದಾನಿ ಗ್ರೂಪ್ ಅನ್ನು ಆಯ್ಕೆ ಮಾಡಿದ ಸಾಲದಾತರ ನಿರ್ಧಾರಕ್ಕೆ ಜೈಪ್ರಕಾಶ್ ಅಸೋಸಿಯೇಟ್ಸ್ ಸಂಸ್ಥಾಪಕ ಜೈಪ್ರಕಾಶ್ ಗೌರ್ ಅವರು ಶುಕ್ರವಾರ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು ಕಂಪನಿಯ ಪ್ರಸ್ತುತ ದಿವಾಳಿ ಪರಿಹಾರ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಜೈಪ್ರಕಾಶ್ ಗೌರ್ ಅವರು ವಿಸ್ತೃತ ಪ್ರಕಟಣೆಯಲ್ಲಿ, “ಸಾಲದಾತರ ಸಮಿತಿ (CoC) ನಡೆಸಿದ ಚರ್ಚೆಗಳ ಫಲಿತಾಂಶವನ್ನು ಶ್ಲಾಘಿಸಿದ್ದಾರೆ. ದಿವಾಳಿ ಪರಿಹಾರ ಪ್ರಕ್ರಿಯೆಯಲ್ಲಿ ಅದಾನಿ ಗ್ರೂಪ್ಗೆ ಬಿಡ್ ನೀಡಿದ ನಿರ್ಧಾರವು ದಿವಾಳಿತನ ಮತ್ತು ದಿವಾಳಿತನ ಸಂಹಿತೆ ಅಡಿಯಲ್ಲಿ ನಡೆಸಲಾದ ವಿಶ್ವಾಸಾರ್ಹ ಹಾಗೂ ಪಾರದರ್ಶಕ ಪ್ರಕ್ರಿಯೆಯ ಪ್ರತಿಫಲವಾಗಿದೆ. ಈ ಪ್ರಕ್ರಿಯೆಯನ್ನು ಸಮಗ್ರ ಪರಿಶೀಲನೆ ಹಾಗೂ ನ್ಯಾಯಯುತವಾಗಿ ನಡೆಸಲಾಗಿದೆ. ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಬಾಧಿತರಾಗಿರುವ ಸಾಲದಾತರು, ಮನೆ ಖರೀದಿದಾರರು, ಉದ್ಯೋಗಿಗಳು ಮತ್ತು ವ್ಯಾಪಾರ ಪಾಲುದಾರರು ಸೇರಿದಂತೆ ಎಲ್ಲರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಕ್ರಿಯೆಯನ್ನು ಅತ್ಯಂತ ನಿಷ್ಠೆ ಮತ್ತು ನ್ಯಾಯಸಮ್ಮತವಾಗಿ ನಡೆಸಲಾಗಿದೆ,” ಎಂದು ಅವರು ಒತ್ತಿ ಹೇಳಿದ್ದಾರೆ.

“ಜೈಪ್ರಕಾಶ್ ಅಸೋಸಿಯೇಟ್ಸ್ ಕೇವಲ ಒಂದು ಕಾರ್ಪೊರೇಟ್ ಸಂಸ್ಥೆಯಾಗಿ ಉಳಿಯದೆ, ದಶಕಗಳ ಕಾಲ ಭಾರತದ ಮೂಲಸೌಕರ್ಯ ಬೆಳವಣಿಗೆಗೆ ಶ್ರಮಿಸಿದ ಒಂದು ಸುದೀರ್ಘ ಇತಿಹಾಸವಿರುವ ಸಂಸ್ಥೆಯಾಗಿದೆ. ವಿದ್ಯುತ್, ಸಿಮೆಂಟ್, ರಿಯಲ್ ಎಸ್ಟೇಟ್ ಮತ್ತು ಸಮಗ್ರ ಟೌನ್ಶಿಪ್ಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಬೃಹತ್ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕಂಪನಿಯು ದೇಶದ ಪ್ರಗತಿಗೆ ಕೊಡುಗೆ ನೀಡಿದೆ. 1979ರಲ್ಲಿ ಆರಂಭವಾದ ಕಂಪನಿಯ ಈ ಪ್ರಯಾಣವು ರಾಷ್ಟ್ರ ನಿರ್ಮಾಣದ ದೃಷ್ಟಿಕೋನ ಮತ್ತು ಬೃಹತ್ ಪ್ರಮಾಣದ ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ಗುರಿಯನ್ನು ಹೊಂದಿತ್ತು. ಹೀಗಾಗಿ, ಕಂಪನಿಯ ಪರಂಪರೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಪ್ರಸ್ತುತ ನಡೆಯುತ್ತಿರುವ ಈ ‘ಪರಿಹಾರ ಪ್ರಕ್ರಿಯೆ’ಯು ಸವಾಲಿನಿಂದ ಕೂಡಿದ್ದರೂ ಸಹ ಅತ್ಯಂತ ನಿರ್ಣಾಯಕವಾಗಿದೆ ಎಂದು,” ಜೈಪ್ರಕಾಶ್ ಗೌರ್ ಅವರು ತಿಳಿಸಿದ್ದಾರೆ.
ಸಂಸ್ಥೆಯ ಸುಸ್ಥಿರತೆ ಮತ್ತು ಜವಾಬ್ದಾರಿಯುತ ನಿರ್ವಹಣೆಯ ಮಹತ್ವವನ್ನು ಒತ್ತಿಹೇಳಿದ ಗೌರ್ ಅವರು, ಗೌತಮ್ ಅದಾನಿ ಅವರ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಜೈಪ್ರಕಾಶ್ ಅಸೋಸಿಯೇಟ್ಸ್ನ ಕಾರ್ಯಚಟುವಟಿಕೆಗಳು ಮತ್ತು ಬದ್ಧತೆಗಳನ್ನು ಮುಂದುವರಿಸಲು ಅಗತ್ಯವಿರುವ ಸಾಮರ್ಥ್ಯ ಮತ್ತು ಅನುಭವವನ್ನು ಅದಾನಿ ಸಮೂಹವು ಹೊಂದಿದೆ. ಅದಾನಿ ಅವರ ನೇತೃತ್ವದಲ್ಲಿ, ಸಂಸ್ಥೆಯು ವ್ಯವಹಾರಕ್ಕೆ ಹೊಸ ಚೈತನ್ಯವನ್ನು ತುಂಬಲಿದೆ. ಬಾಕಿ ಉಳಿದಿರುವ ಜವಾಬ್ದಾರಿಗಳನ್ನು ಮತ್ತು ಹಿತಾಸಕ್ತಿ ಹೊಂದಿರುವವರ ನಿರೀಕ್ಷೆಗಳನ್ನು ಕ್ರಮಬದ್ಧವಾದ ರೀತಿಯಲ್ಲಿ ಪೂರೈಸಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವೇದಾಂತ ಸಮೂಹದ ಬಗ್ಗೆಯೂ ಗೌರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಈ ಬಿಡ್ನಲ್ಲಿ ಸ್ಪರ್ಧಾತ್ಮಕ ಆಸಕ್ತಿ ತೋರಿರುವುದು ಜೈಪ್ರಕಾಶ್ ಅಸೋಸಿಯೇಟ್ಸ್ ಹೊಂದಿರುವ ಆಸ್ತಿಗಳ ನೈಜ ಮೌಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಆರ್ಥಿಕ ಪುನರ್ರಚನೆ ಪ್ರಕ್ರಿಯೆಯನ್ನು ಅತ್ಯಂತ ದಕ್ಷತೆಯಿಂದ ಮುನ್ನಡೆಸಿದ ರೆಸಲ್ಯೂಶನ್ ಪ್ರೊಫೆಷನಲ್ (Resolution Professional) ಮತ್ತು ಸಾಲದಾತರ (Lenders) ಕಾರ್ಯವೈಖರಿಯನ್ನು ಗೌರ್ ಶ್ಲಾಘಿಸಿದ್ದಾರೆ.
ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ನ (NCLT) ಅಲಹಾಬಾದ್ ಪೀಠವು ಈ ಹಿಂದೆ ಜೆಪಿ ಅಸೋಸಿಯೇಟ್ಸ್ (JAL) ಆಸ್ತಿಗಳ ಸ್ವಾಧೀನಕ್ಕಾಗಿ ಅದಾನಿ ಸಮೂಹ ಸಲ್ಲಿಸಿದ್ದ ₹14,535 ಕೋಟಿ ಮೊತ್ತದ ಪರಿಹಾರ ಯೋಜನೆಯನ್ನು ಅನುಮೋದಿಸಿತ್ತು. ಆದರೆ, ಈ ಪ್ರಕ್ರಿಯೆಯು ಈಗ ಹೊಸ ತಿರುವು ಪಡೆದುಕೊಂಡಿದೆ. ಅದಾನಿ ಬಿಡ್ಗಿಂತಲೂ ಹೆಚ್ಚಿನ ಮೊತ್ತದ ಅಂದರೆ ₹17,926 ಕೋಟಿಗಳ ಬಿಡ್ ಅನ್ನು ನಾವು ಸಲ್ಲಿಸಿದ್ದೇವೆ ಎಂದು ಪ್ರತಿಪಾದಿಸಿರುವ ವೇದಾಂತ ಸಮೂಹವು, NCLT ನೀಡಿದ ಅನುಮೋದನೆಯನ್ನು ಪ್ರಶ್ನಿಸಿ ನ್ಯಾಷನಲ್ ಕಂಪನಿ ಲಾ ಅಪ್ಪೆಲೇಟ್ ಟ್ರಿಬ್ಯೂನಲ್ (NCLAT) ಮೆಟ್ಟಿಲೇರಿದೆ.
ಜೈಪ್ರಕಾಶ್ ಅಸೋಸಿಯೇಟ್ಸ್ ಸಂಸ್ಥೆಯ ಈ ಪರಿಹಾರ ಪ್ರಕ್ರಿಯೆಯನ್ನು ಭಾರತದ ದಿವಾಳಿತನ ನಿಯಮಾವಳಿಗಳ ಅಡಿಯಲ್ಲಿ ಅತ್ಯಂತ ಪ್ರಮುಖ ಪ್ರಕರಣಗಳಲ್ಲಿ ಒಂದೆಂದು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಂಸ್ಥೆಯ ವ್ಯಾಪಕ ಕಾರ್ಯಚಟುವಟಿಕೆಗಳು ಮತ್ತು ಇದರಲ್ಲಿ ಭಾಗಿಯಾಗಿರುವ ಅಪಾರ ಸಂಖ್ಯೆಯ ಹಿತಾಸಕ್ತಿ ಹೊಂದಿರುವವರನ್ನು ಪರಿಗಣಿಸಿದರೆ, ಈ ಪ್ರಕರಣವು ಅತ್ಯಂತ ನಿರ್ಣಾಯಕವಾಗಿದೆ. ಈ ಪ್ರಕ್ರಿಯೆಯ ಅಂತಿಮ ಫಲಿತಾಂಶವು ಆಸ್ತಿ ಮೌಲ್ಯದ ಗರಿಷ್ಠೀಕರಣ, ಪಾರದರ್ಶಕತೆ ಮತ್ತು ಕಾರ್ಪೊರೇಟ್ ದಿವಾಳಿತನ ಚೌಕಟ್ಟಿನೊಳಗೆ ಇರುವ ಪೈಪೋಟಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ಒಂದು ಪ್ರಮುಖ ನಿದರ್ಶನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/jaiprakash-gaur-backs-adani-group-s-bid-for-jal-assets-vedanta-moves-nclat-over-higher-offer-450049.html. xn--babytilbehr-pgb.com does not claim ownership of this content. All rights remain with the original publisher.
