
India
-Hitesh Y
Bengaluru Second Airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ. ಅಲ್ಲದೆ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವನ್ನು 2033ರ ವರೆಗೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಹೇಳಿದೆ. ಇದು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯಲ್ಲಿ ಕರ್ನಾಟಕಕ್ಕೆ ಆಗಿರುವ ಬಹುದೊಡ್ಡ ಹಿನ್ನಡೆ ಆಗಿದೆ. ಆದರೆ ಇದೇ ಸಂದರ್ಭದಲ್ಲಿ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಿಯೇ ಸಿದ್ಧ ಎನ್ನುವ ಶಪಥ ಮಾಡಿದಂತಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮತ್ತೆ ಕೇಂದ್ರದ ಕದ ತಟ್ಟಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಬ್ರ್ಯಾಂಡ್ ಬಳಸಿಕೊಳ್ಳುವುದು ತಮಿಳುನಾಡಿನ ಉದ್ದೇಶವಾಗಿದೆ. ಅಲ್ಲದೆ ಹೊಸೂರು ಕೈಗಾರಿಕೆಗೆ ಉತ್ತೇಜನ ನೀಡುವುದು ಮುಖ್ಯವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿತ್ತು.

ಈಚೆಗೆ ಕೇಂದ್ರ ಸರ್ಕಾರವು ವಾಯುಪ್ರದೇಶ ಸಮಸ್ಯೆಯ ಕಾರಣಕ್ಕೆ ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಈ ಯೋಜನೆಯನ್ನು ತಮಿಳುನಾಡು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಇದೇ ವರ್ಷ ತಮಿಳುನಾಡಿನ ವಿಧಾನಸಭೆ ಚುನಾವಣೆಯು ಸಹ ಇರುವುದರಿಂದ ತಮಿಳುನಾಡು ಸರ್ಕಾರವು ಶತ ಪ್ರಯತ್ನ ಮಾಡುತ್ತಿದೆ.
ಹೊಸೂರು ವಿಮಾನ ನಿಲ್ದಾಣ: ವಾಯುಪ್ರದೇಶ ಮರುಪರಿಶೀಲನೆಗೆ ಡಿಮ್ಯಾಂಡ್
ಇನ್ನು ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾಯುಪ್ರದೇಶ ವಿಚಾರದ ಬಗ್ಗೆ ಮರುಪರಿಶೀಲನೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಕ್ಕೆ ತಮಿಳುನಾಡು ಸರ್ಕಾರವು ಮುಂದಾಗಿದೆ.
ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಟಿಡೋ) ಯೋಜನೆಗೆ ಸ್ಥಳ ಅನುಮತಿ ಕೋರಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿತ್ತು. ಕಳೆದ ವಾರ ರಾಜ್ಯಸಭೆಯಲ್ಲಿ ಉತ್ತರಿಸಿದ್ದ ನಾಗರಿಕ ವಿಮಾನಯಾನ ಸಚಿವರು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕೈಗೆತ್ತಿಕೊಳ್ಳುತ್ತಿರುವ ಪ್ರಮುಖ ರಕ್ಷಣಾ ಯೋಜನೆಗಳ ವಾಯುಪ್ರದೇಶದ ಅಗತ್ಯವನ್ನು ಗಮನದಲ್ಲಿರಿಸಿಕೊಂಡು, ಹೊಸೂರಿನಲ್ಲಿ ವಾಯುಪ್ರದೇಶ ನೀಡಲು ಈಗ ಇರುವ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ವಿಸ್ತಾರವಾದ ಪತ್ರವನ್ನು ಬರೆಯುವುದಕ್ಕೆ ತಮಿಳುನಾಡು ಸರ್ಕಾರವು ಮುಂದಾಗಿದೆ.
Bengaluru Second Airport ತಮಿಳುನಾಡಿನ ವಾದವೇನು
ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಇದರಿಂದ ಹೊಸೂರು ಮಾತ್ರವಲ್ಲ, ದಕ್ಷಿಣ ಬೆಂಗಳೂರಿಗೂ ಸಹಾಯವಾಗಲಿದೆ. ಎರಡೂ ನಗರಗಳು ಸಹ ಬೆಳೆಯಲಿವೆ ಎನ್ನುವುದು ತಮಿಳುನಾಡಿನ ವಾದವಾಗಿದೆ. ಆದರೆ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಅದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪೆಟ್ಟು ಬೀಳಲಿದೆ ಎನ್ನುತ್ತಾರೆ ತಜ್ಞರು.
ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದನ್ನು ತಮಿಳುನಾಡು ಸರ್ಕಾರವು ಪ್ರತಿಷ್ಠೆಯಾಗಿ ಪರಿಗಣಿಸಿದೆ. ಮೊದಲು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ತಮಿಳುನಾಡು ಸರ್ಕಾರವು ಸಲ್ಲಿಸಿತ್ತು. ನಮ್ಮ ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಿಸಬೇಕು ಎನ್ನುವುದು ಈ ಪ್ರಸ್ತಾವನೆಯಾಗಿತ್ತು. ಆದರೆ ಇದಕ್ಕೆ ಕನ್ನಡಿಗರಿಂದ ವಿರೋಧ ವ್ಯಕ್ತವಾದ ಮೇಲೆ ಈ ಯೋಜನೆ ಹೆಚ್ಚು ಚರ್ಚೆ ಆಗಲಿಲ್ಲ. ಇದರ ಬೆನ್ನಲ್ಲೇ ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯನ್ನು ತಮಿಳುನಾಡು ಸರ್ಕಾರವು ಚುರುಕುಗೊಳಿಸಿತ್ತು.
ತಮಿಳುನಾಡಿನ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಈಗಾಗಲೇ ಹೊಸೂರು ತಾಲ್ಲೂಕಿನ 12 ಕಂದಾಯ ಗ್ರಾಮಗಳು, ಕೃಷ್ಣಗಿರಿ ಜಿಲ್ಲೆಯ ಶೂಲಗಿರಿ ಗ್ರಾಮದ 3 ಸಾವಿರ ಎಕರೆ ಭೂಮಿಯನ್ನು ಈಗಾಗಲೇ ಗುರುತು ಮಾಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/bengaluru-second-airport-row-tamil-nadu-govt-renews-new-demand-clearance-international-airport-in-011-443999.html. xn--babytilbehr-pgb.com does not claim ownership of this content. All rights remain with the original publisher.
