Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ | Harish Rana First Passive Euthanasia Recipient in India Passes Away At Delhi after 13 years Battle

India

oi-Manohara M

ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ (Passive Euthanasia) ಸುಪ್ರೀಂಕೋರ್ಟ್‌ನಿಂದ ಮೊದಲ ಬಾರಿಗೆ ಅನುಮತಿ ಪಡೆದಿದ್ದ 31 ವರ್ಷದ ಹರೀಶ್ ರಾಣಾ ಅವರು ಮಂಗಳವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ರಾಣಾ ಅವರ ಹೋರಾಟವು ಇಂದು ಅಂತ್ಯಗೊಂಡಿದೆ.

2013ರ ಆಗಸ್ಟ್‌ನಲ್ಲಿ ಹರೀಶ್ ರಾಣಾ ಅವರ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿತ್ತು. ಚಂಡೀಗಢದ ಕಟ್ಟಡವೊಂದರಿಂದ ಕೆಳಗೆ ಬಿದ್ದಿದ್ದ ಇವರಿಗೆ ತೀವ್ರವಾದ ಮೆದುಳಿನ ಗಾಯವಾಗಿತ್ತು. ಅಂದಿನಿಂದ ಅವರು ಜೀವಂತವಾಗಿದ್ದರೂ ಯಾವುದೇ ಚಲನವಲನ, ಸಂವಹನ ಅಥವಾ ಪ್ರಜ್ಞೆ ಇಲ್ಲದ ಸ್ಥಿತಿ ತಲುಪಿದ್ದರು. ಬರೋಬ್ಬರಿ 13 ವರ್ಷಗಳ ಕಾಲ ಅವರು ಇದೇ ಸ್ಥಿತಿಯಲ್ಲಿ ಕಾಲ ಕಳೆದಿದ್ದರು.

Harish Rana

ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು

ಹರೀಶ್ ಅವರ ಸ್ಥಿತಿಯನ್ನು ಕಂಡು ನೊಂದಿದ್ದ ಕುಟುಂಬಸ್ಥರು, ಅವರು ಅನುಭವಿಸುತ್ತಿರುವ ಅಸಹನೀಯ ನೋವಿನಿಂದ ಮುಕ್ತಿ ನೀಡಲು ‘ದಯಾಮರಣ’ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆಯ ನಂತರ, ಇತ್ತೀಚೆಗೆ ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರಿಗೆ ದಯಾಮರಣಕ್ಕೆ ಅನುಮತಿ ನೀಡಿತ್ತು. ಭಾರತದಲ್ಲಿ ಈ ರೀತಿಯ ಕಾನೂನುಬದ್ಧ ದಯಾಮರಣಕ್ಕೆ ಅನುಮತಿ ಪಡೆದ ಮೊದಲ ವ್ಯಕ್ತಿ ಎಂಬ ಪಟ್ಟಕ್ಕೆ ಹರೀಶ್ ರಾಣಾ ಭಾಜನರಾಗಿದ್ದರು.

ಏನಿದು ಪ್ಯಾಸಿವ್ ಯುಥಾನೇಷಿಯಾ? (Passive Euthanasia)

ಇದು ಸಕ್ರಿಯ ದಯಾಮರಣಕ್ಕಿಂತ ಭಿನ್ನವಾಗಿದೆ. ಇದರಲ್ಲಿ ರೋಗಿಗೆ ನೇರವಾಗಿ ವಿಷ ನೀಡಿ ಸಾಯಿಸುವುದಿಲ್ಲ. ಬದಲಿಗೆ, ರೋಗಿಯನ್ನು ಬದುಕಿಸಿಟ್ಟಿರುವ ಕೃತಕ ಜೀವರಕ್ಷಕ ವ್ಯವಸ್ಥೆಗಳನ್ನು (ವೆಂಟಿಲೇಟರ್ ಅಥವಾ ಟ್ಯೂಬ್ ಮೂಲಕ ನೀಡುವ ಆಹಾರ) ಸ್ಥಗಿತಗೊಳಿಸುವ ಮೂಲಕ ನೈಸರ್ಗಿಕವಾಗಿ ಸಾವು ಸಂಭವಿಸಲು ಬಿಡಲಾಗುತ್ತದೆ. ಇದನ್ನು “ರೋಗಿ ಸಾಯಲು ಬಿಡುವುದು” ಎಂದು ಕರೆಯಲಾಗುತ್ತದೆ.

ಹರೀಶ್ ರಾಣಾ ಅವರ ಪ್ರಕರಣವು ದೇಶಾದ್ಯಂತ ದೊಡ್ಡ ಮಟ್ಟದ ನೈತಿಕ ಮತ್ತು ಕಾನೂನು ಚರ್ಚೆಯನ್ನು ಹುಟ್ಟುಹಾಕಿದೆ. ಜೀವನದ ಹಕ್ಕು ಮತ್ತು ನೋವಿನಿಂದ ಮುಕ್ತಿ ಪಡೆಯುವ ಹಕ್ಕಿನ ನಡುವಿನ ವ್ಯತ್ಯಾಸದ ಬಗ್ಗೆ ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಣಾ ಅವರ ಮೌನ ಹೋರಾಟ ಕೊನೆಗೂ ಅಂತ್ಯಗೊಂಡಿದೆ.

ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ

ಈ ದುಃಖದ ನಡುವೆಯೂ ಹರೀಶ್ ರಾಣಾ ಅವರ ಕುಟುಂಬದವರು ಕೈಗೊಂಡಿರುವ ನಿರ್ಧಾರ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹರೀಶ್ ನಿಧನರಾದ ಬೆನ್ನಲ್ಲೇ ಅವರ ನೇತ್ರದಾನ ಮತ್ತು ಹೃದಯದ ಕವಾಟಗಳನ್ನು (Heart Valves) ದಾನ ಮಾಡಲು ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರೆ ಎಂದು ಏಮ್ಸ್ ಮೂಲಗಳು ಖಚಿತಪಡಿಸಿವೆ.

2013ರಲ್ಲಿ ಕಟ್ಟಡದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಹರೀಶ್, ಅಂದಿನಿಂದ ಇಂದಿನವರೆಗೆ ಹೊರಗಿನ ಪ್ರಪಂಚವನ್ನೇ ನೋಡಿರಲಿಲ್ಲ. ಅಂಧಕಾರದಲ್ಲೇ 13 ವರ್ಷ ಕಳೆದಿದ್ದ ಹರೀಶ್, ಈಗ ತಮ್ಮ ನೇತ್ರದಾನದ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಲಿದ್ದಾರೆ. ದಯಾಮರಣದ ಮೂಲಕ ನೋವಿನಿಂದ ಮುಕ್ತಿ ಪಡೆದ ಹರೀಶ್, ಹೋಗುವಾಗ ನಾಲ್ವರಿಗೆ ಬದುಕು ನೀಡುವ ‘ಮಹಾದಾನಿ’ಯಾಗಿ ಹೊರಟಿದ್ದಾರೆ. ತಮ್ಮ ಮಗ ದಯಾಮರಣ ಹೊಂದಲಿ ಎಂದು ಕೋರ್ಟ್ ಮೆಟ್ಟಿಲೇರುವಾಗ ಈ ಕುಟುಂಬ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಈಗ ಮಗನನ್ನು ಕಳೆದುಕೊಂಡ ಕ್ಷಣದಲ್ಲೂ ಅಂಗಾಂಗ ದಾನಕ್ಕೆ ಮುಂದಾಗಿರುವ ಅವರ ಧೈರ್ಯ ಮತ್ತು ಔದಾರ್ಯವು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/harish-rana-first-passive-euthanasia-recipient-in-india-passes-away-at-delhi-after-13-years-battle-448225.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo