
Karnataka
oi-Shankrappa Parangi
ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಏಪ್ರಿಲ್ 10ರಿಂದ ದೇಶದ ಹೆದ್ದಾರಿ ಟೋಲ್ಗಳಲ್ಲಿ ಶುಲ್ಕ ಪಾವತಿ ನಿಯಮದಲ್ಲಿ ಬದಲಾವಣೆ ತಂದಿದೆ. ನಗದು ಪಾವತಿ ರದ್ದುಗೊಳಿಸಿ ಫ್ಯಾಸ್ಟ್ಯಾಗ್ ಮತ್ತು ಡಿಜಿಟಲ್ ಪಾವತಿಗೆ ಮಾತ್ರವೇ ಅವಕಾಶ ನೀಡಿದೆ. ಹೆದ್ದಾರಿ ಹೊಸ ನಿಯಮ ಜಾರಿಗೆ ಎರಡೇ ದಿನ ಬಾಕಿ ಇದೆ. ಹೀಗಿರುವಾಗಲೇ ವಾಹನ ಸವಾರರಿಗೆ ಆರ್ಥಿಕ ತೊಂದರೆ ಆಗುತ್ತಾ? ಎಂಬ ದೃಷ್ಟಿಯಿಂದ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಎಫ್ಕೆಸಿಸಿ ನಿರ್ದೇಶಕರಾದ ಕೆ. ರಾಧಾಕೃಷ್ಣ ಹೊಳ್ಳ ಅವರು ಸದರಿ ನಿರ್ಧಾರವನ್ನು ವಿಶ್ಲೇಷಿಸಿದ್ದಾರೆ.
‘ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯವು ಕಳೆದ ಎರಡು ದಶಕಗಳಲ್ಲಿ ವೇಗವಾಗಿ ಅಭಿವೃದ್ಧಿಯಾಗಿದೆ. ಸುಮಾರು 1.46 ಲಕ್ಷ ಕಿ.ಮೀ. ವರೆಗೆ ವಿಸ್ತರಿಸಿರುವ ಹೆದ್ದಾರಿ ಜಾಲದಲ್ಲಿ 1,150 ಕ್ಕೂ ಹೆಚ್ಚು ಟೋಲ್ ಪ್ಲಾಸಗಳು ಕಾರ್ಯ ನಿರ್ವಹಿಸುತ್ತಿವೆ. ದೇಶದಾದ್ಯಂತ ವರ್ಷಕ್ಕೆ ಸುಮಾರು 82,000 ಕೋಟಿ ರೂ.ಗೂ ಹೆಚ್ಚು ಟೋಲ್ ಸಂಗ್ರಹವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಈ ವ್ಯವಸ್ಥೆ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯಕವಾದರೂ, ಟೋಲ್ ನೀತಿಯ ಅನುಷ್ಠಾನ ಸಾಮಾನ್ಯ ರಸ್ತೆ ಬಳಕೆದಾರರಿಗೆ ನ್ಯಾಯಸಮ್ಮತವಾಗಿದೆಯೇ ಎಂಬ ಪ್ರಶ್ನೆ ಕೇಳಿ ಬರುತ್ತಿದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.

2026 ಏಪ್ರಿಲ್ 10ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ.100ರಷ್ಟು ನಗರದು ರಹಿತ (cashless toll) ವ್ಯವಸ್ಥೆ ಜಾರಿಗೆ ಬರಲಿದೆ ಎಂಬ ಮಾಹಿತಿ ಇದೆ. ಹೊಸ ನಿಯಮಗಳ ಪ್ರಕಾರ ಫಾಸ್ಟ್ಯಾಗ್ ಅಥವಾ ಇತರ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಮಾತ್ರ ಟೋಲ್ ಪಾವತಿಸಬೇಕಾಗುತ್ತದೆ. ಫಾಸ್ಟ್ಯಾಗ್ ಇಲ್ಲದಿದ್ದರೆ ಅಥವಾ ಬ್ಯಾಲೆನ್ಸ್ ಕಡಿಮೆ ಇದ್ದರೆ ಹೆಚ್ಚುವರಿ ದಂಡ (ನಿಗದಿತ ದರದ ಶೇ.25ರಷ್ಟು) ವಿಧಿಸುವ ನಿಯಮವೂ ಜಾರಿಯಾಗಲಿದೆ. ಸಂಚಾರವನ್ನು ವೇಗವಾಗಿ ಸಾಗಿಸಲು, ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲು ಕಡಿಮೆ ಮಾಡಲು ಮತ್ತು ಇಂಧನ ಉಳಿತಾಯ ಮಾಡಲು ಡಿಜಿಟಲ್ ವ್ಯವಸ್ಥೆ ಸಹಾಯಕವಾಗುತ್ತದೆ ಎಂಬುದು ಸತ್ಯ.
ರಸ್ತೆ ಬಳಕೆದಾರರಿಗೆ ಹೆಚ್ಚುವರಿ ಒತ್ತಡ
ಆದರೆ, ಸಾಮಾನ್ಯ ನಾಗರಿಕರು ಈಗಾಗಲೇ ಆದಾಯ ತೆರಿಗೆ, ಜಿಎಸ್ಟಿ, ವಾಹನ ತೆರಿಗೆ, ಇಂಧನ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ಪಾವತಿಸುತ್ತಿರುವ ಸಂದರ್ಭದಲ್ಲಿ, ರಸ್ತೆ ಬಳಕೆ ಮಾಡಲು ಮತ್ತೆ ಟೋಲ್ ರೂಪದಲ್ಲಿ ದೊಡ್ಡ ಮೊತ್ತ ಪಾವತಿಸಬೇಕಾಗಿದೆ. ಇದರ ಜೊತೆಗೆ ಫಾಸ್ಟ್ಯಾಗ್ ಕಡ್ಡಾಯ, ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ, ಡಬಲ್ ಟೋಲ್ ಎಂಬ ಕಠಿಣ ನಿಯಮಗಳು ರಸ್ತೆ ಬಳಕೆದಾರರಿಗೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಅವರ ವಿವರಿಸಿದ್ದಾರೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಜನರು, ಹಿರಿಯ ನಾಗರಿಕರು, ಸಣ್ಣ ಉದ್ಯಮಿಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಸುವವರಿಗೆ ಶೇ.100ರಷ್ಟು ನಗದು ರಹಿತ ವ್ಯವಸ್ಥೆ ಕೆಲವೊಮ್ಮೆ ತೊಂದರೆ ಉಂಟು ಮಾಡಬಹುದು. ತಾಂತ್ರಿಕ ದೋಷಗಳು, ನೆಟ್ವರ್ಕ್ ಸಮಸ್ಯೆಗಳು ಅಥವಾ ಫಾಸ್ಟ್ಯಾಗ್ ಸ್ಕ್ಯಾನ್ ಸಮಸ್ಯೆಗಳ ಕಾರಣದಿಂದ ಅನಗತ್ಯ ದಂಡ ವಿಧಿಸುವ ಪರಿಸ್ಥಿತಿ ಉಂಟಾದರೆ ಅದು ರಸ್ತೆ ಬಳಕೆದಾರರಿಗೆ ಕಿರುಕುಳವಾಗುವ ಸಾಧ್ಯತೆ ಇದೆ. ಈಗಾಗಲೇ ಇಂಧನ ವೆಚ್ಚ ಏರಿಕೆ, ವಾಹನ ನಿರ್ವಹಣಾ ವೆಚ್ಚ, ಬ್ಯಾಂಕ್ ಬಡ್ಡಿ ಹಾಗೂ ಇತರ ಕಾರ್ಯಾಚರಣಾ ವೆಚ್ಚಗಳ ನಡುವೆ ಬದುಕುತ್ತಿರುವ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರದವರಿಗೆ ಈ ನಿಯಮಗಳು ಹೆಚ್ಚುವರಿ ಆರ್ಥಿಕ ಭಾರವಾಗುವ ನಿರೀಕ್ಷೆಯೂ ಇದೆ.
ಹೊರೆ ಜನಸಾಮಾನ್ಯರ ಮೇಲೇಕೆ?
ಮೂಲಸೌಕರ್ಯ ಅಭಿವೃದ್ಧಿ ದೇಶದ ಪ್ರಗತಿಗೆ ಅಗತ್ಯವಾದರೂ, ಅದರ ಹೊರೆ ಸಂಪೂರ್ಣವಾಗಿ ಸಾಮಾನ್ಯ ಜನರ ಮೇಲೆ ಬೀಳಬಾರದು. ಟೋಲ್ ದರ ನಿರ್ಧಾರ, ಸಂಗ್ರಹವಾಗಿರುವ ಒಟ್ಟು ಮೊತ್ತ, ಟೋಲ್ ಅವಧಿ ಹಾಗೂ ಡಿಜಿಟಲ್ ನಿಯಮಗಳ ಬಗ್ಗೆ ಪಾರದರ್ಶಕ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವುದು ಅಗತ್ಯವಾಗಿದೆ. ಡಿಜಿಟಲ್ ವ್ಯವಸ್ಥೆಯ ಉದ್ದೇಶ ರಸ್ತೆ ಬಳಕೆದಾರರಿಗೆ ಅನುಕೂಲವಾಗಬೇಕು, ಕಿರುಕುಳವಾಗಬಾರದು ಎಂದು ತಿಳಿಸಿದ್ದಾರೆ.
ಜಾರಿಗೆ ಮುನ್ನ ಸ್ಪಷ್ಟ ಮಾರ್ಗಸೂಚಿಗಳು ಇರಲಿ
ಈ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಟೋಲ್ ನೀತಿ ಮತ್ತು ಫಾಸ್ಟ್ಯಾಗ್ ಸಂಬಂಧಿತ ನಿಯಮಗಳನ್ನು ಸಮತೋಲನದ ದೃಷ್ಟಿಯಿಂದ ಪರಿಶೀಲಿಸಬೇಕು. ರಸ್ತೆ ಬಳಕೆದಾರರಿಗೆ ಅನುಕೂಲವಾಗುವ ಸರಳ ಹಾಗೂ ಜನಸ್ನೇಹಿ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯವಾಗಿದೆ. ಶೇ.100ರಷ್ಟು ನಗದು ರಹಿತ ವ್ಯವಸ್ಥೆಯನ್ನು ಜಾರಿಗೊಳಿಸುವಾಗ ಜನರಿಗೆ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ, ಪರ್ಯಾಯ ವ್ಯವಸ್ಥೆ ಮತ್ತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದರು.
ದೇಶದ ಆರ್ಥಿಕ ಬೆಳವಣಿಗೆಗೆ ಮೂಲಸೌಕರ್ಯ ಅಭಿವೃದ್ಧಿ ಅಗತ್ಯವಾದರೂ, ಸಾರ್ವಜನಿಕರ ವಿಶ್ವಾಸ ಮತ್ತು ಸಹಕಾರ ಕಾಪಾಡಿಕೊಳ್ಳಲು ಪಾರದರ್ಶಕ, ನ್ಯಾಯಸಮ್ಮತ ಮತ್ತು ಸಮತೋಲನದ ಟೋಲ್ ನೀತಿ ಜಾರಿಯಾಗಬೇಕು ಎಂಬ ಆಶಯ ಅವರು ವ್ಯಕ್ತಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/no-cash-at-toll-plazas-fastag-mandatory-from-april-10-experts-warn-may-financial-burden-on-drivers-449803.html. xn--babytilbehr-pgb.com does not claim ownership of this content. All rights remain with the original publisher.
