
Karnataka
oi-Madhusudhan KR
Karnataka Budget 2026: ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಶುಕ್ರವಾರ (ಮಾರ್ಚ್ 6) 2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅವರ ರಾಜಕೀಯ ಜೀವನದ ದಾಖಲೆಯ 17ನೇ ಬಜೆಟ್ ಆಗಿದ್ದು, ಇದಕ್ಕಾಗಿ ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲೂ ಹೆಚ್ಚಿನ ಕುತೂಹಲ ಮೂಡಿದೆ. ಕಳೆದ ವರ್ಷ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತು. ಆದರೆ, ಈ ಬಾರಿ ಗ್ಯಾರಂಟಿಗಳ ಜೊತೆಗೆ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳು ಮತ್ತು ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸುಮಾರು ಒಂದು ತಿಂಗಳಿನಿಂದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಸಿದ್ಧಪಡಿಸಲಾಗಿದೆ. ಆದ್ದರಿಂದ ಈ ಬಾರಿಯ ಬಜೆಟ್ ಮೇಲೆ ರಾಜ್ಯದ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2026-27ನೇ ಸಾಲಿನ ಬಜೆಟ್ ಗಾತ್ರವು ಸುಮಾರು 4.50 ಲಕ್ಷ ಕೋಟಿ ರೂಪಾಯಿ ತಲುಪುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಿಂದಿನ 2025-26ನೇ ಸಾಲಿನಲ್ಲಿ 4.09 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ಗಾತ್ರದಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಳ ಕಾಣಿಸಬಹುದು. ರಾಜ್ಯದ ಹಣಕಾಸು ಸ್ಥಿತಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯೊಳಗೆ ಇರಬೇಕಿರುವುದರಿಂದ, ಪ್ರತಿ ವರ್ಷ ಸರ್ಕಾರ ಸಾಲ ಪಡೆಯುವ ಪ್ರಮಾಣವನ್ನು ಘೋಷಿಸುತ್ತದೆ. 2025-26ನೇ ಸಾಲಿಗೆ ಸರ್ಕಾರ 1.14 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವ ಯೋಜನೆ ಪ್ರಕಟಿಸಿತ್ತು. ಇದೇ ಪ್ರಮಾಣವನ್ನು 2026-27ನೇ ಸಾಲಿಗೂ ಮುಂದುವರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2026-27ನೇ ಸಾಲಿನ ಕರ್ನಾಟಕ ಬಜೆಟ್ ರಾಜ್ಯದ ಆರ್ಥಿಕ ದಿಕ್ಕು ನಿರ್ಧರಿಸುವ ಮಹತ್ವದ ದಾಖಲೆ ಆಗಲಿದೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಮತ್ತು ಹಣಕಾಸಿನ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಪ್ರಮುಖ ಗುರಿಯಾಗಿರುವ ಸಾಧ್ಯತೆ ಇದೆ.
ಗ್ಯಾರಂಟಿಗಳಿಗೆ ಹೆಚ್ಚಿನ ಅನುದಾನ ಮುಂದುವರಿಕೆ ಸಾಧ್ಯತೆ
* ಗೃಹಲಕ್ಷ್ಮಿ
* ಗೃಹಜ್ಯೋತಿ
* ಶಕ್ತಿ ಯೋಜನೆ
* ಅನ್ನಭಾಗ್ಯ
* ಯುವನಿಧಿ
ಪ್ರಮುಖ ಯೋಜನೆಗಳ ಘೋಷಣೆ ಸಾಧ್ಯತೆ
ಇಂದಿರಾ ಆಹಾರ ಕಿಟ್
ಅನ್ನಭಾಗ್ಯ ಯೋಜನೆಯಡಿ ಈಗ ನೀಡುತ್ತಿರುವ 10 ಕೆಜಿ ಅಕ್ಕಿಯ ಬದಲಿಗೆ ಭಾಗಶಃ ಆಹಾರ ಕಿಟ್ ನೀಡುವ ಯೋಜನೆ ಪ್ರಕಟವಾಗಬಹುದು. ಇದರಡಿ 5 ಕೆಜಿ ಅಕ್ಕಿಯ ಜೊತೆಗೆ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಮತ್ತು ಹೆಸರುಕಾಳು ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.
7ನೇ ಗ್ಯಾರಂಟಿಯಾಗಿ ಮನೆ ವಿತರಣೆ
ರಾಜ್ಯದಲ್ಲಿ ವಸತಿ ಯೋಜನೆಗಳ ಅನುಷ್ಠಾನ ಕುರಿತು ವಿಪಕ್ಷಗಳು ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ವಸತಿ ಹಂಚಿಕೆ ಯೋಜನೆಯನ್ನು 7ನೇ ಗ್ಯಾರಂಟಿಯಾಗಿ ಘೋಷಿಸುವ ಸಾಧ್ಯತೆ ಇದೆ. ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧೀಜಿ ಅವರ ಹೆಸರಿಡುವ ಬಗ್ಗೆ ಪ್ರಸ್ತಾವನೆ ಮಾಡುವ ಸಾಧ್ಯತೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಲು ಸಂಕಗಳ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವ ಸಾಧ್ಯತೆಯಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ
ಈ ಯೋಜನೆಯ ಮೂರನೇ ಹಂತಕ್ಕೆ ಸುಮಾರು 1.33 ಲಕ್ಷ ಹೆಕ್ಟೇರ್ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಒಟ್ಟು ಯೋಜನೆಗೆ ಸುಮಾರು 70 ಸಾವಿರ ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದ್ದು, ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಬಜೆಟ್ನಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ 8 ಸಾವಿರದಿಂದ 15 ಸಾವಿರ ಕೋಟಿ ರೂ.ಗಳ ನಡುವೆ ಅನುದಾನ ನೀಡುವ ಸಾಧ್ಯತೆಯಿದೆ.
ಪ್ರಾದೇಶಿಕ ಅಸಮತೋಲನ ನಿವಾರಣೆ
ರಾಜ್ಯದ ಹಿಂದುಳಿದಿರುವ 172 ತಾಲೂಕುಗಳ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ಸುಮಾರು 43,914 ಕೋಟಿ ರೂಪಾಯಿ ವೆಚ್ಚ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ. ಅದರ ಭಾಗವಾಗಿ ಈ ವರ್ಷಕ್ಕೆ 8,500 ರಿಂದ 9,000 ಕೋಟಿ ರೂಪಾಯಿಗಳಷ್ಟು ಅನುದಾನ ಮೀಸಲಿಡುವ ನಿರೀಕ್ಷೆ ಇದೆ.
ತೆರಿಗೆ ಹೆಚ್ಚಳದ ಸಾಧ್ಯತೆ
ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರ್ವಹಿಸಲು ಹೆಚ್ಚಿನ ಸಂಪನ್ಮೂಲ ಅಗತ್ಯ ಆಗಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ತೆರಿಗೆ ಹೆಚ್ಚಳವೂ ಸಾಧ್ಯತೆ ಇದೆ. ಯಾವುದಕ್ಕೆ ತೆರಿಗೆ ಹೆಚ್ಚಳ ಮಾಡಬಹುದು ಎಂದು ಅಂದಾಜಿನ ಪ್ರಕಾರನ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.
* ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಪ್ರತಿ ಲೀಟರ್ಗೆ 1 ರೂಪಾಯಿ ಹೆಚ್ಚಳ
* ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳ
* ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಬದಲಾವಣೆ
* ಮೋಟಾರು ವಾಹನ ತೆರಿಗೆ ಹೆಚ್ಚಳ
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಈ ಬಜೆಟ್ ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಯೋಜನೆಗಳು ಮತ್ತು ತೆರಿಗೆ ನಿರ್ವಹಣೆಯ ನಡುವಿನ ಸಮತೋಲನ ಸಾಧಿಸುವ ಪ್ರಯತ್ನವಾಗಿರಬಹುದೇ ಎಂಬ ಕುತೂಹಲ ಮೂಡಿದೆ. ಬಜೆಟ್ ಮಂಡನೆಯ ಬಳಿಕ ಈ ನಿರೀಕ್ಷೆಗಳು ಎಷ್ಟರ ಮಟ್ಟಿಗೆ ನಿಜವಾಗುತ್ತವೆ ಎಂಬುದು ಸ್ಪಷ್ಟವಾಗಲಿದೆ.
-

ಕರ್ನಾಟಕ ಬಜೆಟ್ 2026: ನಮಗೆ ಹಣ ಬೇಡ, ಗುಣಮಟ್ಟದ ಶಾಲೆ, ಆಸ್ಪತ್ರೆ ಕೊಡಿ: ಸಾರ್ವಜನಿಕರ ಆಗ್ರಹ
-

Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ
-

Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್
-

Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು
-

Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ
-

Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: “ಟಾಕ್ಸಿಕ್” ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ
-

ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ
-

Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ
-

Karna Serial: “ಕರ್ಣ” ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ
-

Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ
-

‘ವಂತಾರ’ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ
-

Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-budget-cm-siddaramaiah-to-present-record-17th-budget-focus-on-guarantees-infrastructure-446089.html. xn--babytilbehr-pgb.com does not claim ownership of this content. All rights remain with the original publisher.
