
Karnataka
oi-Shankrappa Parangi
ಬೆಂಗಳೂರು: ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿರುವ ವಾಯು ಸುಳಿಗಾಳಿ ಮತ್ತು ಟ್ರಫ್ ತೀವ್ರತೆಯ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನ ಕೆಲವೆಡೆ ಶುಕ್ರವಾರ ಸಂಜೆಯಿಂದ ಮಳೆ ಆಗಿದೆ. ಈ ಮಳೆ ಶನಿವಾರವು (ಏಪ್ರಿಲ್ 11) ಮುಂದುವರಿಯಲಿದೆ. ಈಗಾಗಲೇ ರಾಜ್ಯದ ಹಲವೆಡೆ ಆಗಾಗ ಪೂರ್ವ ಮುಂಗಾರು ಮಳೆ ಆಗುತ್ತಿದ್ದು, ಒಣಹವೆಗೆ ಕಾವೇರಿದ್ದ ಇಳೆಗೆ ಮಳೆಯ ಸಿಂಚನದಿಂದ ತಂಪಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ಒಂದು ವಾರವು ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆಗಲಿದೆ?, ಎಲ್ಲಿ ಅತ್ಯಧಿಕ ತಾಪಮಾನ ಕಂಡು ಬರಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ವರದಿ ಆಧರಿಸಿ ನೀಡಿದ ಈ ಲೇಖನದಲ್ಲಿ ತಿಳಿಯಿರಿ.
ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮಜರಾನಗರ, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ. ಹಿಂಗಾರು ಬೆಳೆ ಪಡೆದು ಮುಂಗಾರು ಬಿತ್ತನೆಗೆ ಜಮೀನು ಹದ ಮಾಡುವ ರೈತರಿಗೆ ಈ ಮಳೆಯಿಂದ ಅನುಕೂಲವಾಗಲಿದೆ. ಮಳೆಗೆ ಭೂಮಿ ಕೊಂಚ ಮೆತ್ತಗಾಗುವ ಪರಿಣಾಮ ರಂಟೆ ಹೊಡೆಸಲು ಸಹಕಾರಿ. ಮುಂಗಾರು ಬಿತ್ತನೆಗೆ ಸಜ್ಜುಗೊಳಿಸಲು ಪೂರ್ವ ತಯಾರಿ ಮಾಡಿಕೊಳ್ಳಬಹುದಾಗಿದೆ.

ಏಪ್ರಿಲ್ 12, 13ರಂದು ಒಳನಾಡು ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಮತ್ತು ಕರಾವಳಿ ಭಾಗದ ಒಂದೆರಡು ಕಡೆ ಮಾತ್ರ ಮಳೆ ಆಗಲಿದ್ದು, ಉಳಿದಂತೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಅತ್ಯಧಿಕ ತಾಪಮಾನ ಕಂಡು ಬರಲಿದೆ. ಈಗಾಗಲೇ ಈ ಭಾಗದಲ್ಲಿ 35 ಡಿಗ್ರಿ ಅಸುಪಾಸು ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಇನ್ನೂ ಹೆಚ್ಚಾಗುವ ಲಕ್ಷಣಗಳು ಇವೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಏಪ್ರಿಲ್ 14ರಿಂದ ಹೆಚ್ಚಿನ ಪ್ರದೇಶಗಳಲ್ಲಿ ಮಳೆ
ಏಪ್ರಿಲ್ 14ರಿಂದ 17ರವರೆಗೆ ಪೂರ್ವ ಮುಂಗಾರು ಮಳೆ ಅಬ್ಬರ ಕರಾವಳಿ ಪ್ರದೇಶ ಒಳಗೊಂಡಂತೆ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇತ್ತ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದ ವಿವಿಧ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ವರುಣಾರ್ಭಟ ಕಂಡು ಬರಬಹುದು.
ತೀವ್ರ ಬಿಸಿಲಿನಿಂದ ಕೂಡಿದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಭಾಗಗಳಲ್ಲೂ ಈ ಮೂರು ತಾಪಮಾನ ಕುಸಿಯಲಿದ್ದು, ಅಲ್ಲಿ ಸಹ ಮಳೆ, ತಂಪು ವಾತಾವರಣ ಕಂಡು ಬರುವ ನಿರೀಕ್ಷೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಹವಾಮಾನ ಕೇಂದ್ರವು ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಹವಾಮಾನ ಮುನ್ಸೂಚನೆ
ಶನಿವಾರ ಮತ್ತು ಭಾನುವಾರ ಸೇರಿ ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಶುಕ್ರವಾರ ಸಂಜೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಭಾಗಶಃ ಮೋಡ ಕವಿದ ಸ್ಥಿತಿ ಕಂಡು ಬರಲಿದ್ದು, ಸಂಜೆ ಇಲ್ಲವೇ ರಾತ್ರಿಯ ವೇಳೆಗೆ ಹಗುರ ಮಳೆ/ಗುಡುಗು ಸಹಿತ ಜೋರು ಮಳೆ ಆಗಲಿದೆ. ನಗರದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬರಬಹುದೆಂದು ಐಎಂಡಿ ತಿಳಿಸಿದೆ.
ಹವಾಮಾನ ವೈಪರೀತ್ಯ ಆಗಿದ್ದೆಲ್ಲಿ?
ಒಡಿಶಾ ರಾಜ್ಯದ ಒಳಭಾಗದಿಂದ ದಕ್ಷಿಣ ಛತ್ತೀಸ್ಗಢ, ತೆಲಂಗಾಣ, ರಾಯಲಸೀಮಾ, ತಮಿಳುನಾಡಿನ ಒಳಭಾಗದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಟ್ರಫ್ ನಿರ್ಮಾಣವಾಗಿದೆ. ಜೊತೆಗೆ ತಮಿಳುನಾಡಿನ ಉತ್ತರ ಭಾಗದ ಹಾಗೂ ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್ ಎತ್ತರದಲ್ಲಿ ಸಾಗರದ ಮೇಲ್ಮೈನಲ್ಲಿ ವಾಯು ಸುಳಿಗಾಳಿ ಮುಂದುವರೆದಿದೆ. ಇವುಗಳ ತೀವ್ರತೆ ಕಾರಣದಿಂದ ಕರ್ನಾಟಕದ ನಾನಾ ಕಡೆಗಳಲ್ಲಿ ಆಗಾಗ ಮಳೆ ವಾತಾವರಣ ಕಂಡು ಬರುತ್ತಿದೆ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-rain-alert-thunderstorms-expected-across-state-from-april-14-to-17-imd-forecast-details-450071.html. xn--babytilbehr-pgb.com does not claim ownership of this content. All rights remain with the original publisher.
