
Karnataka
oi-Shankrappa Parangi
ನವದೆಹಲಿ/ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸ ರೈಲು ಮಾರ್ಗಗಳನ್ನು ನಿರ್ಮಿಸುತ್ತಿದೆ. ವಿವಿಧ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಇದೀಗ ಮಲೆನಾಡು-ಉತ್ತರ ಕರ್ನಾಟಕ, ಮಲೆನಾಡು-ಕರಾವಳಿ ಸಂಪರ್ಕಿಸುವ ಹೊಸ ರೈಲು ಮಾರ್ಗಗಳಿಗೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದರೊಂದಿಗೆ ದಶಕಗಳ ಮಲೆನಾಡಿನ ಜನರ ಬೇಡಿಕೆಗಳು ಇಡೇರಿಸುವಂತೆ, ಅತ್ಯಗತ್ಯ ಮಾರ್ಗಗಳ ಮೂಲಸೌಕರ್ಯ ಅಭಿವೃದ್ಧಿಗೂ ಮನವಿ ಮಾಡಲಾಗಿದೆ.
ಸಂಸದರಾದ ಬಿ.ವೈ ರಾಘವೇಂದ್ರ ಅವರು ಸಂಸತ್ತಿನಲ್ಲಿ ಬುಧವಾರ ‘ಶಿವಮೊಗ್ಗದ ಸಮಗ್ರ ಅಭಿವೃದ್ಧಿ ಹಾಗೂ ಮಲೆನಾಡು-ಕರಾವಳಿ ಭಾಗದ ರೈಲ್ವೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನು ಪ್ರಸ್ತಾಪಿಸಿದರು. ಕೇಂದ್ರ ಸಚಿವರಿಗೆ ಮನವಿ ನೀಡಿದರು.

ರೈಲ್ವೆ ಟರ್ಮಿನಲ್ 2 ಹಂತಕ್ಕೆ ಚಾಲನೆ ನೀಡಿ
ಕೋಟೆಗಂಗೂರು ರೈಲ್ವೆ ಟರ್ಮಿನಲ್ 1ನೇ ಹಂತದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತಕ್ಷಣವೇ 2ನೇ ಹಂತಕ್ಕೆ ಚಾಲನೆ ನೀಡುವಂತೆ ಕೋರಿದರು. ಇದರಿಂದ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಹೊಸ ಪ್ಲಾಟ್ಫಾರ್ಮ್ಗಳ ನಿರ್ಮಾಣವಾದಂತಾಗುತ್ತದೆ. ನಿತ್ಯ ಓಡಾಡುವ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕೋಟೆಗಂಗೂರನ್ನು ಉಪ-ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. 2ನೇ ಹಂತದ ಕಾಮಗಾರಿ ಮುಗಿದ ನಂತರ, ಇಲ್ಲಿಂದಲೇ ದೂರದ ಊರುಗಳಿಗೆ ಹೊಸ ರೈಲುಗಳನ್ನು ಆರಂಭಿಸುವ ಚಿಂತನೆ ಇದೆ.
ಬೀರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್
ಬೀರೂರು ಜಂಕ್ಷನ್ನಿಂದ ಶಿವಮೊಗ್ಗದ ಒಟ್ಟು 63 ಕಿಲೋ ಮಿಟರ್ ಮಾರ್ಗದಲ್ಲಿ ಏಕ ಹಳಿ ವ್ಯವಸ್ಥೆ ಇದೆ. ಈ ಮಾರ್ಗದ ರೈಲು ಹಳಿಯನ್ನು ಡಬ್ಲಿಂಗ್ (ದ್ವಿಪಥ) ಮಾಡಿದರೆ ಸಂಚಾರ ಮತ್ತಷ್ಟು ಸುರಕ್ಷಿತ, ವೇಗಗೊಗಳ್ಳಲಿದೆ. ಪ್ರಯಾಣಿಕರ ಸಂಚಾರ ಸಮಯ ಉಳಿತಾಯವಾಗಲಿದೆ. ಆದ್ದರಿಂದ ಈ ಮಾರ್ಗದ ಡಬ್ಲಿಂಗ್ ಕಾರ್ಯ ಆರಂಭಿಸುವಂತೆ ಅವರು ಕೋರಿದರು.
ಮಲೆನಾಡಿನಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ
ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸುವುದು ಮಲೆನಾಡಿನ ಜನರ ದಶಕಗಳ ಬೇಡಿಕೆ ಆಗಿದೆ. ಮಲೆನಾಡಿನ ತಾಳಗುಪ್ಪದಿಂದ ಸಿದ್ದಾಪುರ, ಸೊರಬ, ಶಿರಸಿ ಮೂಲಕ ಹುಬ್ಬಳ್ಳಿ ಜಂಕ್ಷನ್ವರೆಗೆ ಹೊಸ ರೈಲ್ವೆ ಮಾರ್ಗ ನಿರ್ಮಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಸಂಸದರು ಮನವಿ ಮಾಡಿದರು.
ಸದ್ಯ ಶಿವಮೊಗ್ಗ ಅಥವಾ ತಾಳಗುಪ್ಪದ ಜನರು ಹುಬ್ಬಳ್ಳಿಗೆ ಹೋಗಬೇಕಾದರೆ ಬೀರೂರು-ದಾವಣಗೆರೆ ಮೂಲಕ ಸುತ್ತು ಬಳಸಿ ಹೋಗಬೇಕಿದೆ. ಈ ಹೊಸ ಮಾರ್ಗ ನಿರ್ಮಾಣವಾದರೆ ಪ್ರಯಾಣದ ದೂರ ಮತ್ತು ಸಮಯ ಗಣನೀಯವಾಗಿ ಉಳಿತಾಯವಾಗಲಿದೆ. ಇದರೊಂದಿಗೆ ಸಾಕಷ್ಟು ವಾಣಿಜ್ಯ, ಕೈಗಾರಿಕೆ, ಸಾರಿಗೆ ಪ್ರಯೋಜನಗಳು ಸಿಗಲಿವೆ. ಈ ಕಾರಣಕ್ಕೆ ಹೊಸ ಮಾರ್ಗಕ್ಕೆ ಬೇಡಿಕೆ ಇಡಲಾಗಿದೆ.
ಶಿವಮೊಗ್ಗ-ಮಂಗಳೂರು ಸಂಪರ್ಕ
ಶಿವಮೊಗ್ಗದಿಂದ ತೀರ್ಥಹಳ್ಳಿ-ಶೃಂಗೇರಿ ಮಾರ್ಗದ ಮೂಲಕ ಮಲೆನಾಡು ಹಾಗೂ ಕರಾವಳಿಯನ್ನು ಬೆಸೆಯುವ ರೈಲ್ವೆ ಯೋಜನೆಗೆ ಆದ್ಯತೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಮಾರ್ಗದಲ್ಲಿ ಹೆಚ್ಚಿನ ರೈಲುಗಳ ಸಂಚಾರ ಇಲ್ಲ. ಯಶವಂತಪುರ – ಕಾರವಾರ ಎಕ್ಸ್ಪ್ರೆಸ್ ರೈಲು (16515/16) ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ, ಶುಕ್ರವಾರ) ಸಂಚರಿಸುತ್ತದೆ. ಇದು ಬೆಂಗಳೂರಿನಿಂದ ಹೊರಟು ಶಿವಮೊಗ್ಗ, ಸಾಗರ, ತಾಳಗುಪ್ಪ ಮಾರ್ಗವಾಗಿ ಮಂಗಳೂರು (ಜಂಕ್ಷನ್) ತಲುಪಿ ಮುಂದೆ ಕಾರವಾರ ನಿಲ್ದಾಣ ತಲುಪುತ್ತದೆ.
ರೈಲ್ವೆ ಸಚಿವರಿಂದ ಸಕರಾತ್ಮಕ ಸ್ಪಂದನೆ
ಈ ಮಾರ್ಗದ ಜನರ ಅನುಕೂಲಕ್ಕಾಗಿ ಈ ಮಾರ್ಗಕ್ಕೆ ರೈಲ್ವೆ ಇಲಾಖೆ ಆದ್ಯತೆ ನೀಡಬೇಕು. ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡಬೇಕು. ಅಗತ್ಯ ರೈಲು ಮೂಲಸೌಕರ್ಯ ಅಭಿವೃದ್ಧಿಗೊಳಿಸಬೇಕು. ಒಟ್ಟಾರೆ ಮಲೆನಾಡಿನ ದಶಕಗಳ ರೈಲು ಬೇಡಿಕೆಗಳನ್ನು ರೈಲ್ವೆ ಇಲಾಖೆ ಈಡೇರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಸಿಗುವ ಭರವಸೆ ಇದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/by-raghavendra-urges-rail-links-for-shivamogga-mangaluru-and-hubballi-in-lok-sabha-budget-session-447601.html. xn--babytilbehr-pgb.com does not claim ownership of this content. All rights remain with the original publisher.
