Pratham: ಡಿಬಾಸ್‌ ಅಂತ ಕೂಗಾಡಿ ದರ್ಶನ್‌ ಅವ್ರನ್ನ ಬೀದಿಗೆ ತರ್ತೀರಿ: ಫ್ಯಾನ್ಸ್‌ಗೆ ನಟ ಪ್ರಥಮ್‌ ಬುದ್ಧಿವಾದ | Pratham Slams Darshan Thoogudeepa Fans Dont Bring Actors to Streets With DBoss Chants in Bagalkot

Entertainment

oi-Manohara M

ಕನ್ನಡ ಚಿತ್ರರಂಗದ ನೇರ ನುಡಿಯ ನಟ, ಬಿಗ್‌ಬಾಸ್‌ ವಿಜೇತ ಪ್ರಥಮ್‌ ಹಾಗೂ ನಟ ದರ್ಶನ್‌ ತೂಗುದೀಪ ಅವರ ಅಭಿಮಾನಿಗಳ ನಡುವಿನ ವಾಕ್ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಬಾಗಲಕೋಟೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು, ಪ್ರಥಮ್‌ ಅವರು ದರ್ಶನ್‌ ಅಭಿಮಾನಿಗಳಿಗೆ ಖಡಕ್ ಮಾತುಗಳಲ್ಲೇ ಬುದ್ಧಿವಾದ ಹೇಳಿದ್ದಾರೆ.

ಸದಾ ಕಾಲ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ‘ಒಳ್ಳೆ ಹುಡುಗ’ ಪ್ರಥಮ್‌, ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೊಮ್ಮೆ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಈ ಬಾರಿ ಅವರು ಕೇವಲ ಟೀಕೆ ಮಾಡದೆ, ಅಭಿಮಾನಿಗಳ ಅತಿರೇಕದ ವರ್ತನೆ ನಟರ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ.

Pratham

ಪ್ರಥಮ್ ಅವರು ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಾಗಲೆಲ್ಲಾ ಕೆಲವರು ‘ಡಿ-ಬಾಸ್’ ಘೋಷಣೆ ಕೂಗುತ್ತಾ ಅವರನ್ನು ಕೆಣಕುವುದು ಹಲವು ಸಮಯದಿಂದ ನಡೆಯುತ್ತಾ ಬಂದಿದೆ. ಬಾಗಲಕೋಟೆಯಲ್ಲೂ ಇದೇ ಮುಂದುವರಿದಿದ್ದು, ಕಾರ್ಯಕ್ರಮವೊಂದರ ಮಧ್ಯೆ ಕೆಲವರು “ಜೈ ಡಿ-ಬಾಸ್” ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದರಿಂದ ಕೊಂಚ ಗರಂ ಆದ ಪ್ರಥಮ್, ತಮ್ಮದೇ ಶೈಲಿಯಲ್ಲಿ ಉತ್ತರಿಸಲು ಶುರು ಮಾಡಿದರು.

“ಇಲ್ಲಿ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಶಂಕರ್‌ ನಾಗ್ ಅವರ ಅಭಿಮಾನಿಗಳೂ ಇದ್ದಾರೆ. ಶಂಕರ್‌ನಾಗ್ ಅವರು ನಿಧನರಾಗಿ 35 ವರ್ಷಗಳೇ ಕಳೆದಿದ್ದರೂ ಇಂದಿಗೂ ಜನರು ಅವರನ್ನು ಸ್ಮರಿಸುತ್ತಾರೆ ಎಂದರೆ ಅವರ ಕ್ರೇಜ್ ಹೇಗಿತ್ತು ಎಂದು ಅರ್ಥಮಾಡಿಕೊಳ್ಳಿ. ಹೀಗಾಗಿ ಸಣ್ಣತನ ಪ್ರದರ್ಶಿಸಬೇಡಿ” ಎಂದು ಕಿವಿಮಾತು ಹೇಳಿದರು.

‘ಪಾಪ ದರ್ಶನ್, ಅವರ ಪಾಡಿಗೆ ಬಿಡಿ’

ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಪ್ರಥಮ್‌, “ಪಾಪ ದರ್ಶನ್ ಅವರು ತಮ್ಮ ಪಾಡಿಗೆ ತಾವು ಚೆನ್ನಾಗಿ ಇರುತ್ತಾರೆ. ಆದರೆ ಈ ರೀತಿ ಎಲ್ಲೆಂದರಲ್ಲಿ ಅತಿರೇಕವಾಗಿ ಡಿಬಾಸ್‌ ಡಿಬಾಸ್‌ ಎಂದು ಕೂಗಾಡಿ ಅಭಿಮಾನಿಗಳು ಅವರನ್ನು ಬೀದಿಗೆ ತಂದು ನಿಲ್ಲಿಸಿಬಿಡುತ್ತೀರಿ. ನಿಮ್ಮ ಇಂತಹ ವರ್ತನೆಯಿಂದ ನಟರಿಗೆ ಒಳ್ಳೆಯ ಹೆಸರು ಬರುವುದಿಲ್ಲ. ಮೊದಲು ಅವರನ್ನ ಆರಾಮಾಗಿ ಇರಲು ಬಿಡಿ” ಎಂದು ನೇರವಾಗಿ ಹೇಳಿದರು.

‘ತಂದೆ-ತಾಯಿಯ ಹೆಸರನ್ನೂ ಸ್ಮರಿಸಿ’

ಮಾತು ಮುಂದುವರಿಸಿದ ಪ್ರಥಮ್, “ನನ್ನ ಮುಂದೆ ಈ ರೀತಿ ಘೋಷಣೆಗಳನ್ನು ಕೂಗುವುದರಿಂದ ಏನೂ ಬದಲಾಗುವುದಿಲ್ಲ. ನಿಮಗೂ ಒಳ್ಳೆಯದಾಗಲಿ, ಅವರಿಗೂ ಒಳ್ಳೆಯದಾಗಲಿ. ಆದರೆ, ನಟರ ಹೆಸರನ್ನು ಕೂಗುವ ಬದಲು ನಿಮ್ಮ ಹೆತ್ತ ತಂದೆ-ತಾಯಿಯ ಹೆಸರನ್ನು ಕೂಗಿದರೆ ಅದು ನಿಮಗೆ ಗೌರವ ತರುತ್ತದೆ ಮತ್ತು ಇನ್ನೂ ಚೆನ್ನಾಗಿರುತ್ತದೆ” ಎಂದರು.

ಇನ್ನು ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಕಿತ್ತಾಟ ಇಂದು ನಿನ್ನೆಯದಲ್ಲ. ಹಲವು ಸಂದರ್ಭಗಳಲ್ಲಿ ಪ್ರಥಮ್ ಅವರು ದರ್ಶನ್ ಅಭಿಮಾನಿಗಳ ಟ್ರೋಲ್‌ಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ವರ್ತನೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದರು. ಈ ಇತ್ತೀಚಿನ ಘಟನೆಯೂ ಸಹ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳ ಅತಿರೇಕದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/pratham-slams-darshan-thoogudeepa-fans-dont-bring-actors-to-streets-with-dboss-chants-in-bagalkot-446475.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo