Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್‌ಗೆ ಬರಲಿಲ್ಲ: ಪ್ರೇಮ್‌ ಬೇಸರ | Prem Reacts to KD The Devil Controversy Says No Support from Kannada Industry amid censor issues

Entertainment

oi-Manohara M

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ (KD-The Devil) ಚಿತ್ರಕ್ಕೆ ಈಗ ಸೆನ್ಸಾರ್ ಮಂಡಳಿಯಿಂದ ಅನಿರೀಕ್ಷಿತ ಅಡೆತಡೆ ಎದುರಾಗಿದೆ. ಈ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಪ್ರೇಮ್ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ. “ಸಿನಿಮಾ ವಿಚಾರದಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಮಾಡುವುದು ಕೇಳಿದ್ದೇವೆ, ಆದರೆ ಈಗ ಕರ್ನಾಟಕದಲ್ಲೂ ಅದು ಶುರುವಾಯಿತಾ?” ಎಂದು ಪ್ರಶ್ನಿಸುವ ಮೂಲಕ ಚಿತ್ರರಂಗದಲ್ಲಿ ನಡೆಯುತ್ತಿರುವ ಒಳಸಂಚಿನ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದು ‘ಪಾಲಿಟಿಕ್ಸ್’ ಇರಬಹುದು

ಕನ್ನಡ ಸಿನಿಮಾಗಳು ಇತ್ತೀಚೆಗೆ ಎದುರಿಸುತ್ತಿರುವ ಸಾಲು ಸಾಲು ಸಂಕಷ್ಟಗಳ ಬಗ್ಗೆ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಯಾರೋ ಹಿಂದೆ ನಿಂತು ಇದನ್ನು ಮಾಡಿಸುತ್ತಿದ್ದಾರೆ ಎಂದು ಸುಮ್ಮನೆ ಆರೋಪ ಮಾಡುವುದು ತಪ್ಪಾಗುತ್ತೆ. ಆದರೆ ಬೆಳವಣಿಗೆಗಳನ್ನು ನೋಡಿದರೆ ಇದು ವ್ಯವಸ್ಥಿತ ರಾಜಕೀಯವಿರಬಹುದು ಎನಿಸುತ್ತದೆ. ಇದನ್ನೆಲ್ಲ ನೋಡಿ ನನಗೆ ಏನು ಮಾತನಾಡಬೇಕೋ ತಿಳಿಯುತ್ತಿಲ್ಲ” ಎಂದು ಬೇಸರದಿಂದ ಮಾತನಾಡಿದ್ದಾರ ಪ್ರೇಮ್‌.

Prem

ಸಿನಿಮಾ ನೋಡದೆ ಟೀಕೆ ಮಾಡ್ತಾರೆ

‘ಕೆಡಿ’ ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಿದ ಅವರು, “ಸಿನಿಮಾನೇ ನೋಡದೆ ಏನೇನೋ ಮಾತನಾಡುವ ಒಂದು ವರ್ಗವಿದೆ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ನಿಜ, ಆದರೆ ಮೊದಲು ಸಿನಿಮಾ ನೋಡಿ ಆ ಮೇಲೆ ಮಾತನಾಡುವುದು ಸರಿ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡಿದಾಗ ಈ ರೀತಿ ಮಾತನಾಡಿದ್ರೆ ಆ ನೋವು ನಮಗೆ ಮಾತ್ರ ಗೊತ್ತು” ಎಂದಿದ್ದಾರೆ.

“ಯಾರೂ ಸಪೋರ್ಟ್‌ಗೆ ಬರಲಿಲ್ಲ”

ತಮ್ಮನ್ನು ಯಾರೋ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳಿವು ನೀಡಿರುವ ಪ್ರೇಮ್, “ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೋ ಗೊತ್ತಿಲ್ಲ. ನಾನೇನು ತಪ್ಪು ಮಾಡಿದ್ದೇನೆ? ನಮ್ಮ ಸಿನಿಮಾದ ಹಾಡಿನ ವಿವಾದವಾದಾಗಲೂ ಮಾಧ್ಯಮಗಳನ್ನು ಬಿಟ್ಟರೆ ಬೇರೆ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ. ಯಶ್ ಅವರ ತಾಯಿ ಒಬ್ಬರನ್ನು ಬಿಟ್ಟರೆ ಚಿತ್ರರಂಗದಿಂದ ಯಾರೂ ಧ್ವನಿ ಎತ್ತಲಿಲ್ಲ” ಎಂದು ನೋವಿನಿಂದ ಹೇಳಿದ್ದಾರೆ.

ಆಗ ದೊಡ್ಮನೆ ಇತ್ತು

ಚಿತ್ರರಂಗದಲ್ಲಿ ಹಿಂದೆ ಇದ್ದ ಒಗ್ಗಟ್ಟನ್ನು ನೆನೆದ ಪ್ರೇಮ್, “ಆಗ ದೊಡ್ಮನೆ (ರಾಜ್‌ಕುಮಾರ್ ಕುಟುಂಬ) ಇತ್ತು, ಅಂಬರೀಷಣ್ಣ ಇದ್ದರು. ಏನೇ ಸಮಸ್ಯೆ ಬಂದರೂ ಬೆನ್ನಿಗೆ ನಿಲ್ಲುತ್ತಿದ್ದರು. ಮುಂದೆ ನಿಂತು ಸಮಸ್ಯೆ ಬಗೆಹರಿಸುತ್ತಿದ್ರು. ಆದರೆ ಈಗ ಯಾರಿದ್ದಾರೆ? ನಮಗೆ ನಾವೇ ಫೈಟ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ” ಎಂದು ಇಂದಿನ ಚಿತ್ರರಂಗದ ನಾಯಕತ್ವದ ಕೊರತೆಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

“ಕನ್ನಡಿಗರು ನಾವು ಎಲ್ಲ ಭಾಷೆಯ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತೇವೆ, ಬೆಳೆಸುತ್ತೇವೆ. ಅದು ನಮ್ಮ ದೊಡ್ಡಗುಣ. ಆದರೆ ಬೇರೆ ಭಾಷೆಯವರು ಅಥವಾ ವ್ಯವಸ್ಥೆಯವರು ನಮ್ಮ ಕನ್ನಡ ಸಿನಿಮಾಗಳ ಬಗ್ಗೆಯೂ ಅದೇ ಭಾವನೆ ಹೊಂದಿರಬೇಕು. ಸಿನೆಮಾ ಕಲೆಯನ್ನು ಕಲೆಯಾಗಿ ನೋಡಿ, ಅದನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ” ಎಂದು ಪ್ರೇಮ್ ಮನವಿ ಮಾಡಿದ್ದಾರೆ. ನಿರ್ದೇಶಕ ಪ್ರೇಮ್ ಅವರ ಈ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ್ದು, ಚಿತ್ರರಂಗದ ಹಿರಿಯರು ಈ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/prem-reacts-to-kd-the-devil-controversy-says-no-support-from-kannada-industry-amid-censor-issues-450351.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo