
Entertainment
oi-Manohara M
ಹೈದರಾಬಾದ್: ಟಾಲಿವುಡ್ ನಟ ರಾಮ್ ಚರಣ್ ತಮ್ಮ ಹೊಸ ಚಿತ್ರ ‘ಪೆದ್ದಿ’ಯ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಹೈದರಾಬಾದ್ನಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯವೊಂದರ ಚಿತ್ರೀಕರಣದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಪೆದ್ದಿ ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸಲಾಗುತ್ತಿತ್ತು. ಈ ಸಮಯದಲ್ಲಿ ರಾಮ್ ಚರಣ್ ಅವರ ಕಣ್ಣಿನ ಮೇಲ್ಭಾಗಕ್ಕೆ ಪೆಟ್ಟಾಗಿದೆ. ತಕ್ಷಣವೇ ಅವರಿಗೆ ವೈದ್ಯಕೀಯ ನೆರವು ನೀಡಲಾಗಿದ್ದು, ಗಾಯದ ತೀವ್ರತೆ ಕಡಿಮೆ ಮಾಡಲು ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಮ್ ಚರಣ್ ಅವರ ಕಣ್ಣಿಗೆ ತೀವ್ರ ಪೆಟ್ಟಾಗಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಇದರಿಂದ ಆತಂಕಗೊಂಡಿದ್ದ ಅಭಿಮಾನಿಗಳಿಗೆ ರಾಮ್ ಚರಣ್ ತಂಡ ಸ್ಪಷ್ಟನೆ ನೀಡಿದೆ. “ರಾಮ್ ಚರಣ್ ಅವರ ಕಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿದೆಯೇ ಹೊರತು ಕಣ್ಣಿನ ಒಳಗಲ್ಲ. ಅವರ ಕಣ್ಣುಗಳು ಸುರಕ್ಷಿತವಾಗಿವೆ ಮತ್ತು ಯಾವುದೇ ಅಪಾಯವಿಲ್ಲ” ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

ಗಾಯಗೊಂಡ ಕೆಲವೇ ಗಂಟೆಗಳಲ್ಲಿ ರಾಮ್ ಚರಣ್ ಅವರು ವಿಶ್ರಾಂತಿ ಪಡೆಯುವ ಬದಲು ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಶಸ್ತ್ರಚಿಕಿತ್ಸೆ ಅಥವಾ ಹೊಲಿಗೆ ಹಾಕಿಸಿಕೊಂಡ ನಂತರವೂ ಅವರು ಶೂಟಿಂಗ್ ಮುಂದುವರಿಸಿರುವುದು ಚಿತ್ರತಂಡಕ್ಕೆ ಸ್ಫೂರ್ತಿ ನೀಡಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಕ್ರೀಡಾಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಜಾನ್ವಿ ಕಪೂರ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.
ಚಿತ್ರೀಕರಣ ಸ್ಥಗಿತ
ನಟನ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದ್ದು, ವೈದ್ಯರ ಸಲಹೆಯಂತೆ ಸದ್ಯ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಅವರಿಗೆ ಕನಿಷ್ಠ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿದ್ದ ಚಿತ್ರೀಕರಣದ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ‘ಪೆದ್ದಿ’ ಚಿತ್ರವು ಪ್ರಸ್ತುತ ತನ್ನ ಅಂತಿಮ ಹಂತದ ಚಿತ್ರೀಕರಣದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಕೇವಲ ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ರಾಮ್ ಚರಣ್ ವಿಶ್ರಾಂತಿ ಪಡೆದು ಮರಳಿದ ತಕ್ಷಣ ಚಿತ್ರೀಕರಣ ಪುನರಾರಂಭಗೊಳ್ಳಲಿದೆ. ಚಿತ್ರತಂಡವು ನಿಗದಿಪಡಿಸಿದಂತೆ ಏಪ್ರಿಲ್ 30ರಂದೇ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದ್ದು, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಿರ್ಮಾಣ ಸಂಸ್ಥೆ ಖಚಿತಪಡಿಸಿದೆ.
ಪವನ್ ಕಲ್ಯಾಣ್ ಟ್ವೀಟ್
ರಾಮ್ ಚರಣ್ ಅವರಿಗೆ ಗಾಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಪ್ಪ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. “ಯುವ ನಾಯಕ ರಾಮ್ ಚರಣ್ ಅವರು ‘ಪೆದ್ದಿ’ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಪವನ್ ಕಲ್ಯಾಣ್ ಅವರ ಪರವಾಗಿ ಉಪಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/ram-charan-injured-on-peddhi-set-gets-four-stitches-above-eye-during-shooting-in-hyderabad-448309.html. xn--babytilbehr-pgb.com does not claim ownership of this content. All rights remain with the original publisher.
