
Sports
oi-Madhusudhan KR
Ravi Shastri: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಮಣಿಸಿ ಟೀಮ್ ಇಂಡಿಯಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ತವರು ನೆಲದಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ದಾಖಲೆಯನ್ನು ಬರೆದಿದೆ. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ ಅವರ ತಪ್ಪೊಂದು ಭಾರೀ ಚರ್ಚೆಗೆ ಕಾರಣವಾಗಿದೆ.
ಮಾರ್ಚ್ 8, 2026ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಆದರೆ, ಈ ಗೆಲುವಿನ ಸಂಭ್ರಮದ ನಡುವೆ, ಖ್ಯಾತ ಕಾಮೆಂಟೇಟರ್ ರವಿ ಶಾಸ್ತ್ರಿ ಅವರು ಮಾಡಿದ ಒಂದು ಸಣ್ಣ ಎಡವಟ್ಟು ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

2011ರ ಏಕದಿನ ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ಶಾಸ್ತ್ರಿ ಅವರ ಕಾಮೆಂಟರಿ ಇಂದಿಗೂ ಅಭಿಮಾನಿಗಳ ಮನದಲ್ಲಿ ಅಜರಾಮರವಾಗಿದೆ. ಆದರೆ, ಈ ಬಾರಿ ನ್ಯೂಜಿಲೆಂಡ್ನ ಅಂತಿಮ ವಿಕೆಟ್ ಬಿದ್ದಾಗ ಅವರು ಗೊಂದಲಕ್ಕೀಡಾದರು. ಅಭಿಷೇಕ್ ಶರ್ಮಾ ಅವರು ಜಾಕೋಬ್ ಡಫಿ ವಿಕೆಟ್ ಪಡೆದಾಗ, ಶಾಸ್ತ್ರಿ ಅವರು ಅದನ್ನು “9ತ್ತನೇ ವಿಕೆಟ್” ಎಂದು ತಪ್ಪಾಗಿ ಹೇಳಿದರು. ಅದು 10ನೇ ವಿಕೆಟ್ ಆಗಿದ್ದು, ಭಾರತಕ್ಕೆ ಐತಿಹಾಸಿಕ ಜಯ ಲಭಿಸಿತ್ತು.
ರವಿಶಾಸ್ತ್ರಿ ವಿರುದ್ಧ ಟ್ರೋಲ್
ತಮ್ಮ ತಪ್ಪನ್ನು ಕೂಡಲೇ ಅರಿತ ರವಿಶಾಸ್ತ್ರಿ, “ಎಲ್ಲವೂ ಮುಗಿದಿದೆ, ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆದ್ದಿದೆ,” ಎಂದು ತಿದ್ದಿಕೊಂಡರು. ಆದರೂ, ಆ ನಿರ್ಣಾಯಕ ಕ್ಷಣದ ಮ್ಯಾಜಿಕ್ ಮಿಸ್ ಆಯಿತು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಟ್ರೋಲ್ಗಳ ಸುರಿಮಳೆಯೇ ಶುರುವಾಗಿದೆ.
ದೊಡ್ಡ ಚರ್ಚೆಯಾದ ಸಣ್ಣ ತಪ್ಪು
ಭಾರತದ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿದ್ದರೂ, ಶಾಸ್ತ್ರಿ ಅವರ ವಿರುದ್ಧದ ಟೀಕೆಗಳು ಮತ್ತು ಟ್ರೋಲ್ಗಳು ಮಾತ್ರ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, “ಇಂತಹ ತಪ್ಪುಗಳು ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳಿ,” ಎಂದು ರವಿಶಾಸ್ತ್ರಿ ಅವರಿಗೆ ಹೇಳಿದ್ದಾರೆ. ಹಲವು ಐತಿಹಾಸಿಕ ಮೊದಲ ಸಾಧನೆಗಳಿಗೆ ಸಾಕ್ಷಿಯಾದ ಆ ರಾತ್ರಿಯಲ್ಲಿ, ಟ್ರೋಫಿ ಎತ್ತಿಹಿಡಿದ ನಂತರವೂ ಶಾಸ್ತ್ರಿ ಅವರ ಈ ಪ್ರಮಾದವೇ ಚರ್ಚೆಯ ವಿಷಯವಾಗಿ ಉಳಿಯಿತು.
ಮಾರಕ ಬೌಲಿಂಗ್ ದಾಳಿ ಮಾಡಿದ ಜಸ್ಪ್ರೀತ್ ಬುಮ್ರಾ
ಈ ಗೆಲುವು ಭಾರತೀಯ ಕ್ರಿಕೆಟ್ಗೆ ಅತ್ಯಂತ ವಿಶೇಷವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತ ಸತತವಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಅಧಿಪತ್ಯ ಸ್ಥಾಪಿಸಿದೆ. ಫೈನಲ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿದ್ದು ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
ಭಾರತದ ಈ ಅದ್ಭುತ ಸಾಧನೆಯ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತನಾಡಿ, “ನಾನು ಯಾವುದನ್ನೂ ಪರಂಪರೆಯಾಗಿ ಪಡೆಯುವುದರಲ್ಲಿ ನಂಬಿಕೆ ಇಟ್ಟಿಲ್ಲ, ಹೊಸದನ್ನು ಸೃಷ್ಟಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ಸೋಲುವ ಭಯವಿಲ್ಲದೆ ಆಡುವ ಮತ್ತು ಎದುರಾಳಿಗಳಿಗಿಂತ ಸದಾ ಮೇಲುಗೈ ಸಾಧಿಸುವ ಕ್ರಿಕೆಟ್ ಶೈಲಿಯನ್ನು ನಮ್ಮ ತಂಡ ಸೃಷ್ಟಿಸಿದೆ,” ಎಂದು ಹೆಮ್ಮೆಯಿಂದ ನುಡಿದರು. ಒಟ್ಟಾರೆಯಾಗಿ ಶಾಸ್ತ್ರಿಯವರ ಈ ಸಣ್ಣ ಎಡವಟ್ಟು ಒಂದು ಕಡೆ ಚರ್ಚೆಯಾಗಿದ್ದರೆ, ಭಾರತದ ಸತತ ಗೆಲುವಿನ ಓಟ ಮತ್ತೊಂದು ಕಡೆ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ravi-shastri-s-commentary-slip-sparks-debate-during-india-s-historic-t20-world-cup-2026-win-446503.html. xn--babytilbehr-pgb.com does not claim ownership of this content. All rights remain with the original publisher.
