U.T Khader: ಸಂಸತ್ತು – ವಿಧಾನಮಂಡಲದಲ್ಲಿ ಬಿತ್ತಿದಂತೆ ಬೆಳೆ ಅಲ್ಲವೇ: ರಾಜಾರಾಂ ತಲ್ಲೂರು ಬರಹ | U.T Khader Parliament and Legislature Reflect What We Sow Rajaram Tallur Writes Amid UT Khader Row

Karnataka

oi-Hitesh Y

U.T Khader: ಸಂಸತ್ತು – ವಿಧಾನಮಂಡಲದಲ್ಲಿ ಬಿತ್ತಿದಂತೆ ಬೆಳೆ ಅಲ್ಲವೇ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ವಿಷಯ ಸರಳ… ನೀವು ವಿಧಾನಮಂಡಲ, ಸಂಸತ್ತುಗಳಿಗೆ ಯಾರನ್ನು ಆಯ್ಕೆ ಮಾಡಿ ಕಳುಹಿಸುತ್ತೀರಿ ಎಂಬುದನ್ನು ಆಧರಿಸಿ, ಆ ಸದನಗಳು ಹೇಗೆ ನಡೆಯುತ್ತವೆ ಎಂಬುದು ನಿರ್ಧಾರ ಆಗುತ್ತವೆ. ನಮ್ಮ ಸುಪಾರಿ ಸ್ಪೆಷಲಿಸ್ಟ್ – ಡಿಯರ್ ಮೀಡಿಯಾ ಮೊನ್ನೆಯಿಂದ ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಯು. ಟಿ. ಖಾದರ್ ಅವರು ಸದನವನ್ನು ತಾತ್ಕಾಲಿಕವಾಗಿ ಮುಂದೂಡಿದ್ದನ್ನು, ಅದರ ಕೊನೆಯ ಹನಿಯ ತನಕ ಮೈಲೇಜ್ ಪಡೆಯಲು ಶ್ರಮಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಒಂದೆರಡು ಸಂಗತಿಗಳನ್ನು ಗಮನಕ್ಕೆ ತರಬಯಸುತ್ತೇನೆ.

ಮೊದಲನೆಯದಾಗಿ ಡಿಸ್ಕ್ಲೇಮರ್ ಏನೆಂದರೆ, ಇಲ್ಲಿ ಈ ಪೋಸ್ಟ್ ಸರ್ಕಾರದ ನಡೆಯನ್ನು ಸಮರ್ಥಿಸುವ ಪೋಸ್ಟ್ ಅಲ್ಲವೇ ಅಲ್ಲ. ಸಚಿವರು, ಸಂಬಂಧಿತ ಇಲಾಖೆಗಳು ಪ್ರಶ್ನೆಗಳಿಗೆ ಉತ್ತರ ನೀಡದಿರುವುದು ಅಕ್ಷಮ್ಯ. ಸ್ಪೀಕರ್ ಪೀಠ ನಾಲ್ಕಾರು ಬಾರಿ ಎಚ್ಚರಿಸಿದ ಬಳಿಕ ಚಾಟಿ ಬೀಸಿದೆ ಮತ್ತು ಅದರ ಬೆನ್ನಲ್ಲೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು, ದುರಸ್ತಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಇನ್ನಾದರೂ ಕರ್ನಾಟಕ ವಿಧಾನಮಂಡಲ ಜವಾಬ್ದಾರಿಯುತವಾಗಿ ವರ್ತಿಸಲಿ. ಕರ್ನಾಟಕ ವಿಧಾನಮಂಡಲ ಮಾತ್ರವಲ್ಲ ದೇಶದ ಸಂಸತ್ತು ಹಾಗೂ ಎಲ್ಲ ರಾಜ್ಯ ವಿಧಾನಮಂಡಲಗಳು ಇದರಿಂದ ಪಾಠ ಕಲಿಯಲಿ; ರಾಜಕೀಯ ಪಕ್ಷಗಳು ತಮ್ಮ ಜನಪ್ರತಿನಿಧಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೇ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲಿ.

U T Khader

ನಾನು ಇಲ್ಲಿ ನಮ್ಮ ಸುಪಾರಿ ಸ್ಪೆಷಲಿಸ್ಟ್-ಡಿಯರ್ ಮೀಡಿಯಾಗಳಿಗೆ ಒಂದೆರಡು ಉದಾಹರಣೆಗಳನ್ನು ಕೊಟ್ಟು, ಅದೆಲ್ಲ ಆಗುವಾಗ ಅವರ ಬಾಯಿಯಲ್ಲಿ ಅವಲಕ್ಕಿ ತುಂಬಿತ್ತೇ, ಅವರು ನಿದ್ದೆ ಮಾಡುತ್ತಿದ್ದರೆ ಎಂಬುದನ್ನು ತಿಳಿಯಬಯಸುತ್ತೇನೆ. ಈ ಮೀಡಿಯಾಗಳ ಪರಿಸ್ಥಿತಿ ಎಲ್ಲಿಯ ತನಕ ಬಂದಿದೆ ಎಂದರೆ, ಅವರು ರಾಜಕೀಯ ಕರಪತ್ರಗಳಿಗಿಂತ ಕಡೆ ಆಗಿದ್ದಾರೆ. ಮರ್ಯಾದಸ್ಥರು ನಾವು ಮಾಧ್ಯಮದ ಮಂದಿ ಎಂದು ಹೇಳಿಕೊಳ್ಳುವುದೇ ಕಷ್ಟ ಎನ್ನುವ ಸ್ಥಿತಿ ಇದೆ.

ಉದಾಹರಣೆ 1: 17ನೇ ಲೋಕಸಭೆಯ ವಿಶ್ಲೇಷಣೆ ನಡೆಸಿದ PRS ಕಂಡುಕೊಂಡಿರುವ ವಾಸ್ತವ ಏನೆಂದರೆ, ಸದನಕ್ಕೆ ಬಂದ ಬಾಯ್ದರೆ ಉತ್ತರಿಸಬೇಕಾದ ಪ್ರಶ್ನೆಗಳಲ್ಲಿ, ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಉತ್ತರಿಸಿದ್ದು ಕೇವಲ 24% ಪ್ರಶ್ನೆಗಳಿಗೆ ಮತ್ತು ರಾಜ್ಯಸಭೆಯಲ್ಲಿ ಉತ್ತರಿಸಿದ್ದು ಕೇವಲ 31% ಪ್ರಶ್ನೆಗಳಿಗೆ.
ಕರ್ನಾಟಕದಲ್ಲಿ ಈ ಪರ್ಸೆಂಟೇಜು 36.52 (230 ಪ್ರಶ್ನೆಗಳಲ್ಲಿ 84ಕ್ಕೆ ಮಾತ್ರ ಉತ್ತರ.)

ಉದಾಹರಣೆ 2: 2022ರಲ್ಲಿ ಕರ್ನಾಟಕ ವಿಧಾನಸಭೆಯ ಬೆಳಗಾವಿ ಅಧಿವೇಶನವನ್ನು ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಕೇವಲ 10 ದಿನಗಳಿಗೆಂದು ನಿಗದಿ ಮಾಡಿ, ಬಳಿಕ ಅದನ್ನು ಸದನದಲ್ಲಿ ಕೋರಂ ಇಲ್ಲ ಎಂಬ ಕಾರಣ ನೀಡಿ (ಕೋರಂಗೆ ಬೇಕಾಗುವುದು 10%ಸದಸ್ಯರು) , ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಸ್ಪೀಕರ್ ಸ್ಥಾನದಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಟ್ರೆಷರಿ ಬೆಂಚನ್ನು ತರಾಟೆಗೆ ತೆಗೆದುಕೊಂಡಿದ್ದರು.

ಉದಾಹರಣೆ 3: ಮಾಜೀ CJI ರಂಜನ್ ಗೊಗೋಯಿ ಅವರ ರಾಜ್ಯಸಭಾ ಸದಸ್ಯತ್ವ ಮಾರ್ಚ್ 2026ಕ್ಕೆ ಪೂರ್ಣಗೊಳ್ಳುತ್ತಿದೆ. ಸದನಕ್ಕೆ ಅವರ ಹಾಜರಾತಿ 53%; ಆರು ವರ್ಷಗಳಲ್ಲಿ ಕೇಳಿದ ಪ್ರಶ್ನೆಗಳು- ಸೊನ್ನೆ; ಪಾಲ್ಗೊಂಡ ಚರ್ಚೆ ಕೇವಲ ಒಂದು. ಸ್ವತಃ ದೇಶದ ಮುಖ್ಯ ನ್ಯಾಯಮೂರ್ತಿ ಆಗಿದ್ದವರ ಉದಾಹರಣೆ ಇದು. ದೇಶದ ಯಾವುದೇ ಸದನದಲ್ಲಿ ಇಂತಹ ನಾಲ್ಕಾರು ಪ್ರಕರಣಗಳು ಇದ್ದೇ ಇರುತ್ತವೆ.

ಮಾಧ್ಯಮಗಳು ತಮಗೆ ತಾವೇ ಹೊರಿಸಿಕೊಂಡಿರುವ ಸಾಂವಿಧಾನಿಕ ಜವಾಬ್ದಾರಿಗಳನ್ನು ಮರೆತು, ರಾಜಕೀಯ ಪಕ್ಷಗಳ ಸುಪಾರಿ ಪಡೆದವರಂತೆ ವರ್ತಿಸುವುದನ್ನು ಬಿಟ್ಟು, ಪತ್ರಕರ್ತರಂತೆ ಬಿಡಿ, ಕನಿಷ್ಠ ಪಕ್ಷ ಮನುಷ್ಯರಂತೆ ವರ್ತಿಸಲು ಕಲಿಯುವುದು ಯಾವಾಗ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/u-t-khader-parliament-and-legislature-reflect-what-we-sow-rajaram-tallur-writes-amid-ut-khader-row-447433.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo