
Entertainment
oi-Manohara M
ತಮಿಳುನಾಡು ವಿಧಾನಸಭೆ ಚುನಾವಣೆಗೆ ರಂಗೇರಿದ್ದು, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ನಾಯಕ, ನಟ ದಳಪತಿ ವಿಜಯ್ ತಮ್ಮ ವೈಯಕ್ತಿಕ ಜೀವನ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ಬುಧವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಪತ್ನಿ ಸಂಗೀತ ಸ್ವರ್ಣಲಿಂಗಂ ಅವರೊಂದಿಗಿನ ಡಿವೋರ್ಸ್ ವದಂತಿ ಹಾಗೂ ರಾಜಕೀಯ ಷಡ್ಯಂತ್ರಗಳ ಬಗ್ಗೆ ಮೌನ ಮುರಿದಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ನನ್ನ ಘನತೆಗೆ ಧಕ್ಕೆ ತರಲು ಕೆಲವು ಶಕ್ತಿಗಳು ಸಂಚು ರೂಪಿಸುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಪತ್ನಿ ವಿರುದ್ಧ ಪರೋಕ್ಷ ವಾಗ್ದಾಳಿ
ಬಹಿರಂಗ ಸಭೆಯಲ್ಲಿ ಮಾತನಾಡಿದ ವಿಜಯ್, “ನನ್ನ ಸುತ್ತಮುತ್ತಲಿರುವ ಜನರು ಹಲವು ವರ್ಷಗಳಿಂದ ಕಾಯುತ್ತಿದ್ದರು. ಈಗ ಚುನಾವಣೆ ಬರಲು ಕೇವಲ 30 ದಿನಗಳು ಬಾಕಿ ಇರುವಾಗ ನನ್ನ ಹೆಸರನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ. ವಿಜಯ್ ಅವರು ‘ನನ್ನ ಸುತ್ತಮುತ್ತಲಿರುವವರು’ ಎಂದು ಉಲ್ಲೇಖಿಸಿರುವುದು ನೇರವಾಗಿ ಅವರ ಪತ್ನಿ ಸಂಗೀತ ಅವರನ್ನು ಉದ್ದೇಶಿಸಿ ಹೇಳಿದ ಮಾತುಗಳೇ ಎಂಬ ಚರ್ಚೆ ಈಗ ಎಲ್ಲೆಡೆ ಶುರುವಾಗಿದೆ. ತಮ್ಮ ಡಿವೋರ್ಸ್ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಕೆಲವರು ಯತ್ನಿಸುತ್ತಿದ್ದಾರೆ ಎಂದೂ ಗುಡುಗಿದ್ದಾರೆ.

“ನನ್ನನ್ನು ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ”
ವೈಯಕ್ತಿಕ ಜೀವನದ ಏರಿಳಿತಗಳ ನಡುವೆಯೂ ರಾಜಕೀಯದಲ್ಲಿ ಸಕ್ರಿಯರಾಗಿರುವ ವಿಜಯ್, ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. “ಆ ಪ್ರಯತ್ನ ಕೂಡ ಸಫಲವಾಗಲಿಲ್ಲ. ನೀವು ನನಗೆ ಎಷ್ಟೇ ನೋವು ನೀಡಿದರೂ, ಎಂತಹ ಕಷ್ಟಗಳನ್ನು ಕೊಟ್ಟರೂ, ನನ್ನನ್ನು ಜನರಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಜೀವನದ ವಿವಾದಗಳು ತಮ್ಮ ರಾಜಕೀಯ ಹಾದಿಗೆ ಅಡ್ಡಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ
ಕೇವಲ ವೈಯಕ್ತಿಕ ವಿಷಯ ಮಾತ್ರವಲ್ಲದೆ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಸರ್ಕಾರದ ವಿರುದ್ಧವೂ ವಿಜಯ್ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಸರ್ಕಾರವನ್ನು “ಕ್ಯಾಶ್ ಬಾಕ್ಸ್ ಅಲಯನ್ಸ್” (ಹಣದ ಪೆಟ್ಟಿಗೆಯ ಮೈತ್ರಿ) ಎಂದು ಕರೆದಿರುವ ಅವರು, ಇದು ಜನರ ಹಣವನ್ನು ಲೂಟಿ ಹೊಡೆದು ನಿರ್ಮಿಸಿರುವ ಮೈತ್ರಿ ಎಂದು ಕಿಡಿಕಾರಿದ್ದಾರೆ. 2026ರ ಚುನಾವಣಾ ಕಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ವಿಜಯ್, ಒಂದೆಡೆ ಕೌಟುಂಬಿಕ ಕಾನೂನು ಸಮರ ಹಾಗೂ ಇನ್ನೊಂದೆಡೆ ರಾಜಕೀಯ ಸಂಘರ್ಷ ಎರಡನ್ನೂ ಎದುರಿಸುತ್ತಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧೆ
ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಈ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದಶಕಗಳ ಪಾರುಪತ್ಯಕ್ಕೆ ಬ್ರೇಕ್ ಹಾಕಲು ವಿಜಯ್ ಸಜ್ಜಾಗಿದ್ದಾರೆ.
ಟಿವಿಕೆ ಪಕ್ಷವು ಅಧಿಕೃತವಾಗಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ‘ಒಂಟಿ’ಯಾಗಿ ಕಣಕ್ಕಿಳಿಯುತ್ತಿದೆ. ಎನ್ಡಿಎ ಅಥವಾ ಇಂಡಿಯಾ ಮೈತ್ರಿಕೂಟಗಳ ಜೊತೆ ಯಾವುದೇ ಚುನಾವಣಾ ಪೂರ್ವ ಅಥವಾ ನಂತರದ ಮೈತ್ರಿಯನ್ನು ವಿಜಯ್ ಈಗಾಗಲೇ ನಿರಾಕರಿಸಿದ್ದಾರೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ವಿಜಯ್, ಸ್ವತಃ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಚೆನ್ನೈನ ಪೆರಂಬೂರ್ ಮತ್ತು ತಿರುಚಿ ಈಸ್ಟ್ ಕ್ಷೇತ್ರಗಳಿಂದ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆಡಳಿತಾರೂಢ ಡಿಎಂಕೆ ಪಕ್ಷವನ್ನು “ದುಷ್ಟ ಶಕ್ತಿ” ಎಂದು ಕರೆದಿರುವ ವಿಜಯ್, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಗುರಿ ಹೊಂದಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/vijay-slams-divorce-rumours-amid-tamil-nadu-elections-tamilaga-vettri-kazhagam-alleges-conspiracy-449811.html. xn--babytilbehr-pgb.com does not claim ownership of this content. All rights remain with the original publisher.
