Viral Video: ತಮಿಳುನಾಡು ಚುನಾವಣೆ: ಹಸಿ ಸೊಪ್ಪು, ತರಕಾರಿ ತಿನ್ನುತ್ತಾ ಮತಯಾಚಿಸಿದ ಸ್ವತಂತ್ರ ಅಭ್ಯರ್ಥಿ ನಟ ಮನ್ಸೂರ್ ಅಲಿ ಖಾನ್ | Mansoor Ali Khan Campaigns in Market Eating Raw Vegetables in Lalgudi Tamil Nadu Election 2026

Entertainment

oi-Manohara M

ತಮಿಳುನಾಡು ವಿಧಾನಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿಭಿನ್ನ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇದರ ಭಾಗವಾಗಿ, ತಿರುಚಿರಾಪಳ್ಳಿ ಜಿಲ್ಲೆಯ ಲಾಲ್ಗುಡಿ (Lalgudi) ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಖ್ಯಾತ ಬಹುಭಾಷಾ ನಟ ಮನ್ಸೂರ್ ಅಲಿ ಖಾನ್, ಕಲ್ಲಕುಡಿ ಮಾರುಕಟ್ಟೆಯಲ್ಲಿ ನಡೆಸಿದ ವಿಶಿಷ್ಟ ಪ್ರಚಾರ ಈಗ ಸಾರ್ವಜನಿಕರ ಗಮನ ಸೆಳೆದಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಾರುಕಟ್ಟೆಯಲ್ಲಿ ಮತಭೇಟೆ

ಯಾವಾಗಲೂ ತಮ್ಮ ವಿಭಿನ್ನ ನಡವಳಿಕೆ ಮತ್ತು ನೇರ ಮಾತುಗಳಿಂದ ಸುದ್ದಿಯಲ್ಲಿರುವ ಮನ್ಸೂರ್ ಅಲಿ ಖಾನ್, ಇಲ್ಲಿನ ಕಲ್ಲಕುಡಿ ಮಾರುಕಟ್ಟೆಗೆ ಭೇಟಿ ನೀಡಿದರು. ಅಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರೊಂದಿಗೆ ನೇರವಾಗಿ ಬೆರೆತ ಅವರು, ಮಾರುಕಟ್ಟೆಯಲ್ಲಿದ್ದ ಹಸಿ ತರಕಾರಿಗಳನ್ನು ಸವಿಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅಂಗಡಿಗಳ ಮುಂದೆ ನಿಂತು ಹಸಿ ಕ್ಯಾರೆಟ್, ಮೂಲಂಗಿ ಹಾಗೂ ಇತರ ಸೊಪ್ಪು ತರಕಾರಿಗಳನ್ನು ತಿನ್ನುತ್ತಲೇ ಜನಸಾಮಾನ್ಯರ ಜೊತೆ ಹರಟೆ ಹೊಡೆದರು.

Mansoor Ali Khan

ತರಕಾರಿ ಸವಿಯುವುದರ ಜೊತೆಗೆ ಮಾರುಕಟ್ಟೆಯ ಪ್ರತಿ ಮೂಲೆಗೂ ತೆರಳಿದ ನಟ, ತಾವೇ ಸ್ವತಃ ಚುನಾವಣಾ ಕರಪತ್ರಗಳನ್ನು ಜನರಿಗೆ ಹಂಚಿದರು. ನಾನು ನಿಮ್ಮವನೇ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನನಗೆ ಒಂದು ಅವಕಾಶ ನೀಡಿ ಎಂದು ವಿನಂತಿಸುತ್ತಾ ತಮ್ಮ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಅವರ ಅಭಿಮಾನಿಗಳು ಮತ್ತು ಮಾರುಕಟ್ಟೆಯಲ್ಲಿದ್ದ ಜನರು ನಟನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಸದಾ ವಿಭಿನ್ನ ಪ್ರಚಾರ

ಮನ್ಸೂರ್ ಅಲಿ ಖಾನ್ ಅವರಿಗೆ ಇಂತಹ ವಿಭಿನ್ನ ಪ್ರಚಾರಗಳು ಹೊಸದೇನಲ್ಲ. ಈ ಹಿಂದೆ ನಡೆದ ಚುನಾವಣೆಗಳಲ್ಲೂ ಅವರು ರಸ್ತೆ ಬದಿಯಲ್ಲಿ ಹಣ್ಣು ಮಾರಾಟ ಮಾಡುವುದು, ಕಸ ಗುಡಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಜನಸಾಮಾನ್ಯರಂತೆ ಊಟ ಮಾಡುವ ಮೂಲಕ ಸುದ್ದಿಯಾಗಿದ್ದರು. ಈಗ ಲಾಲ್ಗುಡಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು, ಅದ್ದೂರಿ ರೋಡ್ ಶೋಗಳಿಗಿಂತ ಇಂತಹ ಜನಸಂಪರ್ಕ ಅಭಿಯಾನಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಸಾಂಪ್ರದಾಯಿಕ ರಾಜಕೀಯ ಭಾಷಣಗಳಿಗಿಂತ ಮನ್ಸೂರ್ ಅಲಿ ಖಾನ್ ಅವರ ಈ ‘ಮಾರುಕಟ್ಟೆ ಪ್ರಚಾರ’ ಲಾಲ್ಗುಡಿ ಕ್ಷೇತ್ರದ ಮತದಾರರಲ್ಲಿ ಕುತೂಹಲ ಮೂಡಿಸಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕಾದು ನೋಡಬೇಕಿದೆ.

ರೈಲ್ವೆ ಹಳಿ ಮೇಲೆ ಮಲಗಿ ಅತಿಕ್ರಮ ಪ್ರವೇಶ ಆರೋಪ

ವಿಭಿನ್ನ ಪ್ರಚಾರ ಶೈಲಿಯಿಂದ ಸದಾ ಸುದ್ದಿಯಲ್ಲಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಈಗ ರೈಲ್ವೆ ಸಂರಕ್ಷಣಾ ಪಡೆ (RPF) ಕಾನೂನು ಕ್ರಮ ಜರುಗಿಸಿದೆ. ಲಾಲ್ಗುಡಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಅವರು, ಪ್ರಚಾರದ ಸಂದರ್ಭದಲ್ಲಿ ರೈಲ್ವೆ ಹಳಿ ಮೇಲೆ ಮಲಗಿ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿದ್ದಾರೆ. ಕಲ್ಲಕುಡಿಯ ಪಾಲಂಗನಾಥಂ ರೈಲ್ವೆ ನಿಲ್ದಾಣದ ಸಮೀಪವಿರುವ ಹಳಿಗಳ ಮೇಲೆ ಮನ್ಸೂರ್ ಅಲಿ ಖಾನ್ ಮಲಗಿ ಮತಯಾಚನೆ ಮಾಡಿದ್ದರು. ಈ ವೇಳೆ ಅಲ್ಲಿಗೆ ಬಂದ ಆರ್‌ಪಿಎಫ್ ಅಧಿಕಾರಿಗಳು ತಕ್ಷಣ ಅವರನ್ನು ಹಳಿಗಳಿಂದ ಮೇಲೆಬ್ಬಿಸಿ ಅಲ್ಲಿಂದ ಕರೆದೊಯ್ದರು. ರೈಲ್ವೆ ಹಳಿಗಳ ಮೇಲೆ ಅತಿಕ್ರಮ ಪ್ರವೇಶ ಮಾಡುವುದು, ರೈಲು ಸಂಚಾರಕ್ಕೆ ಅಡ್ಡಿಪಡಿಸುವುದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/mansoor-ali-khan-campaigns-in-market-eating-raw-vegetables-in-lalgudi-tamil-nadu-election-2026-449519.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo