
Sports
oi-Madhusudhan KR
Virat Kohli: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಿಂದ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಯು ಎಸ್ಆರ್ಎಚ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇದರ ಬೆನ್ನಲ್ಲೇ ಡ್ಯಾನಿಶ್ ಸೇಠ್ ನಡೆಸಿದ ಸಂದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕೊಹ್ಲಿ ಅವರಿಗೆ ವಿದೇಶದಲ್ಲಿ ಸಮಯ ಕಳೆಯುತ್ತಿರುವ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ವೇಳೆ ವಿರಾಟ್ ಕೊಟ್ಟ ಉತ್ತರ ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ವಿರಾಟ್ ಕೊಹ್ಲಿ ಅವರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡುವ ಮೂಲಕ ಗಮನ ಸೆಳದಿದ್ದರು. ಕಳೆದ ಸೀಸನ್ನಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಆರ್ಸಿಬಿ ತಂಡವು, ಈ ಬಾರಿ ಅದನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ದೃಢ ನಿರ್ಧಾರದಲ್ಲಿ ಈ ಸ್ಟಾರ್ ಬ್ಯಾಟರ್ ಇದ್ದಾರೆ.

ಲಂಡನ್ನಲ್ಲಿ ವಾಸ್ತವ್ಯ ಹೂಡಿರುವ ವಿರಾಟ್
ಗಮನಾರ್ಹ ವಿಷಯವೆಂದರೆ ಅವರು ಈ ಟೂರ್ನಿಗೆ ಯಾವುದೇ ಹೆಚ್ಚಿನ ಸಿದ್ಧತೆ ಇಲ್ಲದೆ ಆಗಮಿಸಿದ್ದಾರೆ. ಜನವರಿಯಲ್ಲಿ ಭಾರತದ ಕೊನೆಯ ಏಕದಿನ ಸರಣಿಯ ನಂತರ ವಿರಾಮ ತೆಗೆದುಕೊಂಡು ಇಂಗ್ಲೆಂಡ್ಗೆ ಪ್ರಯಾಣಿಸಿದ್ದರು. ಭಾರತದಲ್ಲಿನ ಪ್ರಚಾರದಿಂದ ದೂರವಿರಲು ಕೊಹ್ಲಿ ಲಂಡನ್ನಲ್ಲಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಅವರು ಪ್ರಮುಖ ಸರಣಿಗಳಿಗಿಂತ ಮೊದಲು ಮಾತ್ರ ಮರಳುತ್ತಿದ್ದಾರೆ. ಆದರೂ ಇದು ಅವರ ಇತ್ತೀಚಿನ ಫಾರ್ಮ್ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.
ಟೀಕಾಕಾರರಿಗೆ ಕೊಹ್ಲಿ ತಿರುಗೇಟು
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಲಂಡನ್ನಲ್ಲಿ ವಾಸ್ತವ್ಯ ಹೂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಅನೇಕರು ಈ ಬಗ್ಗೆ ಅವರನ್ನು ಲೇವಡಿ ಕೂಡ ಮಾಡಿದ್ದಾರೆ. ಆರ್ಸಿಬಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಕೊಹ್ಲಿ ಈ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಕೊಹ್ಲಿಗೆ ಡ್ಯಾನಿಶ್ ಸೇಠ್ ಪ್ರಶ್ನೆ
ಆ ವಿಡಿಯೋದಲ್ಲಿ ಭಾರತೀಯ ಜನಪ್ರಿಯ ಹಾಸ್ಯನಟ ‘ಮಿಸ್ಟರ್ ನಾಗ್ಸ್’ ಅವತಾರದಲ್ಲಿ ನಿರೂಪಕ ಡ್ಯಾನಿಶ್ ಸೇಠ್, “ಆರ್ಸಿಬಿ ತಂಡದಲ್ಲಿ ಐವರು ವಿದೇಶಿ ಆಟಗಾರರು ಆಡುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಅವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ,” ಎಂದು ತಮಾಷೆ ಮಾಡುವ ಮೂಲಕ ಕೊಹ್ಲಿ ಲಂಡನ್ನಲ್ಲಿ ನೆಲೆಸಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ನಾನೇನು ವಿದೇಶಿ ಆಟಗಾರನಲ್ಲ: ಕೊಹ್ಲಿ
ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಅವರು, “ನನಗೆ ಗೊತ್ತಿಲ್ಲ, ನೀವು ನನ್ನನ್ನು ಯಾಕೆ ಹೀಗೆ ಕೇಳುತ್ತಿದ್ದೀರಾ? ವಿದೇಶಿ ಆಟಗಾರರನ್ನು ಕೇಳಿ. ನಾನೇನು ವಿದೇಶಿ ಆಟಗಾರನಲ್ಲ. ನಾನು ವಿದೇಶಿ ಆಟಗಾರನಾ?,” ಎಂದು ಮರುಪ್ರಶ್ನೆ ಮಾಡಿದ್ದಾರೆ.
ಇನ್ನೂ ಆರ್ಸಿಬಿ 18 ವರ್ಷಗಳ ಕಾಯುಕೆಯ ನಂತರ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದ ನಂತರ ತಮಗೆ ಆದ ಅದ್ಭುತ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ನಾಲ್ಕು ವರ್ಷಗಳು, ಬೆನ್ನ ಮೇಲಿದ್ದ ದೊಡ್ಡ ಹೊರೆ ಇಳಿದಂತಾಗಿದೆ ಎಂಬ ಮಾತನ್ನು ನಾನು ಕೇಳಿದ್ದೆ. ಅಂದು ರಾತ್ರಿ ಅದರ ನಿಜವಾದ ಅರ್ಥವೇನು ಎಂಬುದು ನನಗೆ ಅರಿವಾಯಿತು. ಎಲ್ಲವೂ ನಿರಾಳವೆನಿಸಿತು,” ಎಂದು ಅವರು ತಿಳಿಸಿದರು.
ಮೂರು ಮಾದರಿಯ ಕ್ರಿಕೆಟ್ಗಳಲ್ಲಿ ನಿರಂತರ ಯಶಸ್ಸು ಸಾಧಿಸಿ ಎಲ್ಲವನ್ನೂ ಗೆದ್ದ ನಂತರ, ಕೊಹ್ಲಿ ಅವರು ಜಯ ಎಂಬುದು ತಮಗೆ ನಿಜವಾಗಿಯೂ ಏನು ಎಂಬುದರ ಕುರಿತು ಮೆಲುಕು ಹಾಕಿದರು. ಕಠಿಣ ಪರಿಶ್ರಮ, ತ್ಯಾಗ ಮತ್ತು ಬದ್ಧತೆಗಳು ಅಂತಿಮವಾಗಿ ಹೇಗೆ ಒಂದಾಗಿ ಪ್ರತಿಫಲ ಮತ್ತು ಭರವಸೆಯ ಭಾವನೆಯನ್ನು ನೀಡುತ್ತವೆ ಎಂಬುದನ್ನು ಅವರು ವಿವರಿಸಿದರು.
“ಗೆಲುವು ಎಂಬುದು ಕಠಿಣ ಪರಿಶ್ರಮ, ನಾವು ಮಾಡಿದ ತ್ಯಾಗ ಮತ್ತು ಕ್ರೀಡೆಯ ಮೇಲಿರುವ ಬದ್ಧತೆಯ ಒಟ್ಟು ಪ್ರತಿಫಲವಾಗಿದೆ. ನಾವು ಹಾಕಿದ ಶ್ರಮ ವ್ಯರ್ಥವಾಗಿಲ್ಲ. ಸೋಲಿನಿಂದ ಅನೇಕರು ಪಾಠ ಕಲಿಯುತ್ತಾರೆ ನಿಜ, ಆದರೆ ಸೋಲು ಕೆಲವೊಮ್ಮೆ ಮನುಷ್ಯನನ್ನು ನಿರುತ್ಸಾಹಗೊಳಿಸುತ್ತದೆ. ಹೀಗಾಗಿ ತುಂಬಾ ಕಷ್ಟಪಟ್ಟ ನಂತರ ಸಿಗುವ ಗೆಲುವು ನಾವು ಪಟ್ಟ ಶ್ರಮಕ್ಕೆ ಸಿಕ್ಕ ನ್ಯಾಯ ಎಂದು ಅನಿಸುತ್ತದೆ. ಅಷ್ಟೇ ಅಲ್ಲದೆ ಇದು ಮುಂದೆ ಇನ್ನೂ ಕಠಿಣವಾಗಿ ಕೆಲಸ ಮಾಡಲು ನಮಗೆ ಪ್ರೇರಣೆ ನೀಡುತ್ತದೆ,” ಎಂದು ಕೊಹ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಮೇಲೆ ಬಂದ ಟೀಕೆಗಳಿಗೆ ತಿರುಗೇಟು ನೀಡುವುದರ ಜೊತೆಗೆ ಶ್ರಮದ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcbs-virat-kohli-responds-to-criticism-over-london-stay-shares-powerful-message-on-hard-work-449457.html. xn--babytilbehr-pgb.com does not claim ownership of this content. All rights remain with the original publisher.
